ಡಿಸಿಎಂ ಲಕ್ಷ್ಮಣ್ ಸವದಿ ಹಾರಿಸಿದ ಗಾಳಿಪಟಕ್ಕೆ ಕಾಂಗ್ರೆಸ್ ಸುಸ್ತು!
ತುಮಕೂರು, ಅ 25: ಅಧಿಕಾರದಲ್ಲಿರುವ ಪಕ್ಷದತ್ತ ಇತರ ಪಾರ್ಟಿಯ ಮುಖಂಡರು ವಲಸೆ ಹೋಗುವುದು ಸಹಜ. ಇದರ ಅನುಭವ ಎಲ್ಲರಿಗಿಂತ ಹೆಚ್ಚು ಜೆಡಿಎಸ್ ಪಕ್ಷಕ್ಕಾಗಿದೆ. ಹಾಲೀ ಉಪಚುನಾವಣೆಯ ವೇಳೆ ಹಲವು ಜೆಡಿಎಸ್ ಮುಖಂಡರು ಕಾಂಗ್ರೆಸ್ಸಿನತ್ತ ತಮ್ಮ ನಿಯತ್ತು ಬದಲಾಯಿಸಿಕೊಂಡಾಗಿದೆ.
ಶಿರಾ ಉಪಚುನಾವಣೆಯ ಪ್ರಚಾರ ಸಭೆಯಲ್ಲಿ ಉಪಮುಖ್ಯಮಂತ್ರಿ ಲಕ್ಷ್ಮಣ್ ಸವದಿ ಆಡಿರುವ ಮಾತು ಕಾಂಗ್ರೆಸ್ ವಲಯದಲ್ಲಿ ಆತಂಕವನ್ನು ಸೃಷ್ಟಿಸಿದೆ. ಮತ್ತೆ ತಮ್ಮ ಎಂಎಲ್ಎಗಳು ಆಪರೇಷನ್ ಕಮಲಕ್ಕೆ ಒಳಗಾಗಲಿದ್ದಾರೆಯೇ ಎನ್ನುವ ಭಯ ಕಾಡಲಾರಂಭಿಸಿದೆ.
'ತಾನು ಕಳ್ಳ, ಪರರ ನಂಬ' ಇದು ಕಾಂಗ್ರೆಸ್ ಪರಿಸ್ಥಿತಿ: ಡಿಸಿಎಂ ಸವದಿ
"ಕಾಂಗ್ರೆಸ್ಸಿನ ಐವರು ಶಾಸಕರು ಬಿಜೆಪಿ ಸೇರಲು ಬಯಸಿದ್ದಾರೆ" ಎನ್ನುವ ಸವದಿ ಹೇಳಿಕೆಯಿಂದಾಗಿ, ಆ ಪಕ್ಷದ ವರಿಷ್ಠರು ತಮ್ಮ ಶಾಸಕರನ್ನು ಅನುಮಾನದಿಂದ ನೋಡುವಂತಾಗಿದೆ. ಉಪಚುನಾವಣೆಯ ಈ ಸಂದರ್ಭದಲ್ಲಿ ಸುಮ್ಮನೇ ಈ ಮಾತನ್ನು ಸವದಿ ಹರಿಯಬಿಟ್ಟರೋ ಎನ್ನುವುದಿನ್ನೂ ಗೊತ್ತಾಗಬೇಕಿದೆ.
ಶಿರಾ ಅಸೆಂಬ್ಲಿ ವ್ಯಾಪ್ತಿಯ ತಾವರೆಕೆರೆ ಗ್ರಾಮದಲ್ಲಿ ಕಾರ್ಯಕರ್ತರ ಸಮಾವೇಶವನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಸವದಿ, "ಸದ್ಯ ಕಾಂಗ್ರೆಸ್ ಪಾರ್ಟಿಯಲ್ಲಿ 71 ಶಾಸಕರಿದ್ದಾರೆ. ಆ ಪಕ್ಷದ ಐವರು ಶಾಸಕರು ನಮ್ಮ ಪಕ್ಷವನ್ನು ಸೇರಲು ಬಯಸಿದ್ದಾರೆ"ಎನ್ನುವ ಹೇಳಿಕೆಯನ್ನು ಡಿಸಿಎಂ ಹೇಳಿದ್ದಾರೆ.
"ಈ ಐವರು ಶಾಸಕರ ಜೊತೆಗೆ, ಶಿರಾ ಮತ್ತು ರಾಜರಾಜೇಶ್ವರಿ ನಗರ ಕ್ಷೇತ್ರದಿಂದಲೂ ನಮ್ಮ ಅಭ್ಯರ್ಥಿಗಳು ಜಯಶೀಲರಾಗಲಿದ್ದಾರೆ. ಹಾಗಾಗಿ, ನಮ್ಮ ಸಂಖ್ಯೆ ಇನ್ನೂ ಹೆಚ್ಚಾಗಲಿದೆ. ನಮ್ಮ ಸರಕಾರ ಸುಭದ್ರವಾಗಿರಲಿದೆ"ಎಂದು ಲಕ್ಷ್ಮಣ್ ಸವದಿ ಹೇಳಿದ್ದರು.
"ಕಾಂಗ್ರೆಸ್ ಪಕ್ಷದಲ್ಲಿ ಯಾವುದೇ ಭವಿಷ್ಯವಿಲ್ಲ ಎನ್ನುವುದು ಆ ಪಾರ್ಟಿಯ ಎಂಎಲ್ಎಗಳಿಗೆ ಗೊತ್ತಿದೆ. ಹಾಗಾಗಿಯೇ ಐವರು ಶಾಸಕರು ಪಕ್ಷ ತ್ಯಜಿಸುವ ಮನಸ್ಸನ್ನು ಮಾಡಿದ್ದಾರೆ"ಎಂದು ಸವದಿ ಹೇಳಿರುವುದು ಕಾಂಗ್ರೆಸ್ ವರಿಷ್ಠರ ನಿದ್ದೆಗೆಡಿಸಿದೆ.