ಇವರಿಗೆ ಅನರ್ಹ ಶಾಸಕರ ಮಾತೇ ವೇದವಾಕ್ಯ- ಇದು ಕಾಂಗ್ರೆಸ್ ಕಥೆಯಲ್ಲ!
ತುಮಕೂರು, ನವೆಂಬರ್.12: ಊರಿಗೆ ಊರೇ ಹೊತ್ತಿ ಉರಿಯುತ್ತಿದ್ದರೆ ಅವನ್ಯಾರೋ ಪಿಟೀಲು ಬಾರಿಸುತ್ತಿದ್ದನಂತೆ. ರಾಜ್ಯದಲ್ಲಿ ಬಿಜೆಪಿ ನಾಯಕರದ್ದೂ ಸೇಮ್ ಟು ಸೇಮ್ ಇದೇ ವರಸೆ. ರಾಜ್ಯದ ಜನರ ಕಷ್ಟಗಳು ಇವರಿಗೆ ಕಾಣುತ್ತಲೇ ಇಲ್ಲ ಎನಿಸುತ್ತದೆ. ಯಾಕೆಂದರೆ ಬಿಜೆಪಿ ನಾಯಕರಿಗೆ ಹಗಲು-ರಾತ್ರಿ ಅನರ್ಹ ಶಾಸಕರದ್ದೇ ಚಿಂತೆ.
ದೋಸ್ತಿ ಸರ್ಕಾರಕ್ಕೆ ಎಳ್ಳು-ನೀರು ಬಿಟ್ಟಿದ್ದೇ ಬಿಟ್ಟಿದ್ದು, ರಾಜ್ಯದಲ್ಲಿ ಬಿಜೆಪಿ ನಾಯಕರು ಫುಲ್ ಆಕ್ಟಿವ್ ಆಗಿದ್ದರು. ಆದರೆ, ಬಿಜೆಪಿಗರ ಹುಮ್ಮಸ್ಸು ಸರ್ಕಾರ ರಚಿಸುವಷ್ಟರ ಮಟ್ಟಿಗಷ್ಟೇ ಸೀಮಿತವಾಗಿತ್ತು. ಈಗ ಏನಿದ್ರೂ ಬಿಜೆಪಿಗರು ಕೇವಲ ಋಣ ತೀರಿಸುವುದರ ಬಗ್ಗೆ ಮಾತನಾಡುತ್ತಿದ್ದಾರೆ.
ಆತಂಕದಲ್ಲಿಯೇ ದೆಹಲಿ ವಿಮಾನ ಹತ್ತಿದ ಅನರ್ಹ ಶಾಸಕರು
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಬಾರಿ ಬಾರಿ ಅನರ್ಹ ಶಾಸಕರ ಬಗ್ಗೆ ಮೃದುಧೋರಣೆಯನ್ನು ಸಾರ್ವಜನಿಕವಾಗಿಯೇ ತೋರಿಸಿಕೊಂಡಿದ್ದಾರೆ. ಅನರ್ಹ ಶಾಸಕರಿಂದಲೇ ರಾಜ್ಯದಲ್ಲಿ ಬಿಜೆಪಿಗೆ ಅಧಿಕಾರ ಸಿಕ್ಕಿದೆ ಅಂತಲೂ ಹೇಳಿದ್ದಾರೆ. ಈಗ ಅದೇ ಲಿಸ್ಟ್ ಗೆ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಕೂಡಾ ಸೇರ್ಪಡೆಯಾಗಿದ್ದಾರೆ.
ಅನರ್ಹ ಶಾಸಕರ ಮಾತೇ ವೇದವಾಕ್ಯ
ತುಮಕೂರಿನಲ್ಲಿ ಮಾತನಾಡಿದ ಕೆ.ಎಸ್.ಈಶ್ವರಪ್ಪ ಅನರ್ಹರನ್ನೇ ದೇವರು ಎಂಬ ಧಾಟಿಯಲ್ಲಿ ಹಾಡಿ ಹೊಗಳಿದ್ದಾರೆ. ಅನರ್ಹ ಶಾಸಕರಿಂದಲೇ ಬಿಜೆಪಿಗೆ ಅಧಿಕಾರ ಸಿಕ್ಕಿದೆ. ಅನರ್ಹರು ಹೇಳಿದ ಹಾಗೆ ನಾವು ಕೇಳುತ್ತೇವೆ ಎಂಬ ಹೇಳಿಕೆಯನ್ನು ನೀಡಿದ್ದಾರೆ.
ನೀತಿಗೆಟ್ಟ ರಾಜಕಾರಣದಲ್ಲಿ ಇದೆಂಥಾ ನಿಯತ್ತು?
ರಾಜ್ಯದಲ್ಲಿ ರಾಜಕೀಯ ಬೆಳವಣಿಗೆಗಳು ಜನರಲ್ಲಿ ವಾಕರಿಕೆ ಹುಟ್ಟಿಸುತ್ತಿವೆ. ಬೆಳಗ್ಗೆ ಒಂದು ಪಕ್ಷ ಮಧ್ಯಾಹ್ನ ಮತ್ತೊಂದು ಪಕ್ಷ ರಾತ್ರಿ ಕಳೆಯೋದ್ರಲ್ಲೇ ರೆಸಾರ್ಟ್ ರಾಜಕಾರಣ. ಇದೆಲ್ಲವನ್ನು ಕಂಡು ಜನರು ರೋಸಿ ಹೋಗಿದ್ದಾರೆ. ಮಹಾರಾಷ್ಟ್ರದಲ್ಲಿ ರೆಸಾರ್ಟ್ ರಾಜಕಾರಣ ನಡೆಸಿದ ಅನರ್ಹ ಶಾಸಕರ ಬಗ್ಗೆ ಇಡೀ ರಾಜ್ಯಕ್ಕೆ ಗೊತ್ತಿದೆ. ಹೀಗಿರುವಾಗ ಬಿಜೆಪಿಗರಿಗೆ ಮಾತ್ರ ಅನರ್ಹ ಶಾಸಕರೇ ತಮ್ಮ ಪಾಲಿನ ದೇವರು ಎಂಬಂತೆ ವರ್ತಿಸುತ್ತಿದ್ದಾರೆ. ನೀತಿಗೆಟ್ಟ ರಾಜಕಾರಣದಲ್ಲಿ ಈಗ ನಾಯಕರು ನಿಯತ್ತಿನ ಮಾತನಾಡುತ್ತಿದ್ದಾರೆ.
ಅನರ್ಹರಿಗೆ ಏನು ಹೇಳುತ್ತೋ ಸುಪ್ರೀಂಕೋರ್ಟ್?
ನವೆಂಬರ್.15ರ ಬದಲು ನವೆಂಬರ್.13ರಂದೇ ಅನರ್ಹ ಶಾಸಕರ ಭವಿಷ್ಯವನ್ನು ಸುಪ್ರೀಂಕೋರ್ಟ್ ಹೊರ ಹಾಕಲಿದೆ. ಈಗಾಗಲೇ ಸುಧೀರ್ಘ ವಿಚಾರಣೆ ನಡೆಸಿರುವ ಸುಪ್ರೀಂಕೋರ್ಟ್ ನ್ಯಾ. ಎನ್.ವಿ.ರಮಣ್ ನೇತೃತ್ವದ ಪೀಠ ತೀರ್ಪನ್ನು ಶುಕ್ರವಾರಕ್ಕೆ ಕಾಯ್ದಿಸಿತ್ತು. ಆದರೆ, ಪ್ರಕರಣದ ತೀವ್ರತೆಯನ್ನು ಹಿರಿಯ ವಕೀಲ ಮುಕುಲ್ ರೋಹ್ಟಗಿ, ನ್ಯಾಯಮೂರ್ತಿ ಎನ್.ವಿ.ರಮಣ್ ನೇತೃತ್ವದ ಪೀಠದ ಮುಂದೆ ಮಂಡಿಸಿದ್ದರು. ಇದರಿಂದ ಶುಕ್ರವಾರದ ಬದಲು ಬುಧವಾರ ತೀರ್ಪು ಪ್ರಕಟಿಸುವುದನ್ನು ಕಲಾಪ ಪಟ್ಟಿಯಲ್ಲಿ ಸೇರಿಸಲಾಗಿದೆ.
ಅವರೂ ಹೇಳುವುದೂ ಹಾಗೆ, ಇವರು ಮಾಡುವುದೂ ಹಾಗೆ!
ಸುಪ್ರೀಂಕೋರ್ಟ್ ತೀರ್ಪನ್ನು ನೋಡಿಕೊಂಡು ಮುಂದಿನ ತೀರ್ಮಾನ ತೆಗೆದುಕೊಳ್ಳುವುದಾಗಿಯೂ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿಕೆ ನೀಡಿದ್ದಾರೆ. ಈ ಹೇಳಿಕೆ ಕಾಂಗ್ರೆಸ್ ಪಾಲಿಗೆ ಹೊಸ ಅಸ್ತ್ರವೇ ಸಿಕ್ಕಂತೆ ಆಗಿದೆ. ಈ ಮೊದಲೇ ಕಾಂಗ್ರೆಸ್ ನಾಯಕರು, ಮೈತ್ರಿ ಸರ್ಕಾರಕ್ಕೆ ಬಿಜೆಪಿ ನಡೆಸಿದ ಆಪರೇಷನ್ ಕಮಲವೇ ಕಾರಣ ಎಂದು ಆರೋಪಿಸುತ್ತಿದ್ದರು. ಅದಾದ ಬಳಿಕ ಮುಖ್ಯಮಂತ್ರಿಗಳು ಅನರ್ಹ ಶಾಸಕರ ಬಗ್ಗೆ ತೋರಿದ ಮೃದು ಧೋರಣೆ, ಕಾಂಗ್ರೆಸ್ ಆರೋಪಕ್ಕೆ ಪುಷ್ಟಿ ನೀಡುವಂತಿತ್ತು. ಇದರ ಜೊತೆಗೆ ಇಂದು ಸಚಿವ ಈಶ್ವರಪ್ಪನವರು ಹೊಸ ರಾಗ ಹಾಡಿದ್ದಾರೆ.