ಸಿದ್ದಗಂಗಾ ಮಠಕ್ಕೆ ಹಿಂತಿರುಗಿದ ಶಿವಕುಮಾರ ಸ್ವಾಮೀಜಿ, ಸಂಭ್ರಮಿಸಿದ ಭಕ್ತರು
ತುಮಕೂರು, ಡಿಸೆಂಬರ್ 19: ಹದಿಮೂರು ದಿನಗಳ ನಂತರ ಸಿದ್ದಗಂಗಾ ಕ್ಷೇತ್ರದ ಶಿವಕುಮಾರ ಸ್ವಾಮೀಜಿ ಸಿದ್ದಗಂಗಾ ಮಠಕ್ಕೆ ಬುಧವಾರ ವಾಪಸ್ ಆಗಿದ್ದಾರೆ. ಚೆನ್ನೈನ ರೇಲಾ ಆಸ್ಪತ್ರೆಯಲ್ಲಿ ಯಶಸ್ವಿ ಶಸ್ತ್ರಚಿಕಿತ್ಸೆ ಬಳಿಕ ಬುಧವಾರ ಮಧ್ಯಾಹ್ನ ತುಮಕೂರಿನ ಕ್ಯಾತಸಂದ್ರದಲ್ಲಿ ಸಿದ್ದಗಂಗಾ ಮಠಕ್ಕೆ ವಾಪಸಾಗಿದ್ದಾರೆ.
ಸಿದ್ದಗಂಗಾ ಶ್ರೀಗಳ ಆರೋಗ್ಯದಲ್ಲಿ ಚೇತರಿಕೆ, ಎರಡು ದಿನದಲ್ಲಿ ಡಿಸ್ಚಾರ್ಜ್ ಸಾಧ್ಯತೆ
ಸದ್ಯಕ್ಕೆ ಶ್ರೀಗಳ ಆರೋಗ್ಯ ಸುಧಾರಿಸಿದ್ದು, ಇನ್ನೂ ಕೆಲ ದಿನಗಳ ಕಾಲ ವಿಶ್ರಾಂತಿ ಅಗತ್ಯವಿದೆ. ಆ ಕಾರಣಕ್ಕೆ ಹಳೆ ಮಠದಲ್ಲೇ ಉಳಿದುಕೊಳ್ಳುವ ವ್ಯವಸ್ಥೆ ಮಾಡಲಾಗಿದೆ. ಶಿವಕುಮಾರ ಸ್ವಾಮಿಗಳನ್ನು ನೋಡಿದ ಭಕ್ತರು ಹರ್ಷೋದ್ಗಾರ ಮಾಡಿದರು. ರೇಲಾ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಬಳಿಕ ಏರ್ ಆಂಬ್ಯುಲೆನ್ಸ್ ಮೂಲಕ ಬೆಂಗಳೂರಿನ ಎಚ್.ಎ.ಎಲ್ ಗೆ ಬಂದು, ಆ ಬಳಿಕ ವಿಶೇಷ ಆಂಬ್ಯುಲೆನ್ಸ್ ನಲ್ಲಿ ಮಠಕ್ಕೆ ಆಗಮಿಸಿದರು.
ಸಿದ್ದಗಂಗಾ ಶ್ರೀಗಳು ಹೇಗಿದ್ದಾರೆ? ಡಿಸ್ಚಾರ್ಜ್ ಯಾವಾಗ?
ಮಠದಲ್ಲಿ ಬುಧವಾರ ಬೆಳಗಿನಿಂದಲೇ ಬಂದೋಬಸ್ತ್ ಕೈಗೊಂಡಿದ್ದ ಪೊಲೀಸರು, ಭಕ್ತರಿಗೆ ಹಳೆ ಮಠದ ಒಳಗೆ ಪ್ರವೇಶ ನಿರ್ಬಂಧಿಸಿದ್ದರು. ಎಸ್ಪಿ ಡಾ.ದಿವ್ಯಾ ಗೋಪಿನಾಥ್ ನೇತೃತ್ವದಲ್ಲಿ ಬಂದೋಬಸ್ತ್ ಕೈಗೊಳ್ಳಲಾಗಿತ್ತು. ಜಿಲ್ಲಾಧಿಕಾರಿ ಡಾ.ರಾಕೇಶ್ ಕುಮಾರ್, ಸಿಇಒ ಅನೀಸ್ ಜಾಯ್ ಸೇರಿದಂತೆ ಮಠದ ಎಲ್ಲಾ ಸಿಬ್ಬಂದಿ ಶ್ರೀಗಳನ್ನು ಬರಮಾಡಿಕೊಂಡರು.
ಶಿವಕುಮಾರ ಸ್ವಾಮೀಜಿಗೆ ಪಿತ್ತಕೋಶದ ಶಸ್ತ್ರ ಚಿಕಿತ್ಸೆ ನಡೆದಿದ್ದು, ಇನ್ನೂ ಕೆಲದಿನಗಳ ಕಾಲ ವಿಶ್ರಾಂತಿ ತೆಗೆದುಕೊಳ್ಳುವಂತೆ ವೈದ್ಯರು ಸೂಚಿಸಿದ್ದಾರೆ. ರೇಲಾ ಆಸ್ಪತ್ರೆ ವೈದ್ಯರ ಸೂಚನೆ ಮೇರೆಗೆ ಸಿದ್ದಗಂಗಾ ಆಸ್ಪತ್ರೆಯ ವೈದ್ಯರು ಸ್ವಾಮೀಜಿಯನ್ನು ನೋಡಿಕೊಳ್ಳಲಿದ್ದಾರೆ. ಇನ್ನೂ ಕೆಲ ದಿನ ದರ್ಶನ ನೀಡಲು ಸ್ವಾಮೀಜಿಗೆ ಸಾಧ್ಯವಿಲ್ಲ. ಆದ್ದರಿಂದ ಭಕ್ತರು ಸಹಕರಿಸಬೇಕು ಎಂದು ವೈದ್ಯ ಪರಮೇಶ್ ಮಾಹಿತಿ ಮನವಿ ಮಾಡಿದ್ದಾರೆ.
ಸಿದ್ದಗಂಗಾ ಶ್ರೀಗಳ ಚಿಕಿತ್ಸೆ ಕುರಿತು ಹೇಳಿಕೆ: ಡಿಕೆಶಿ ವಿರುದ್ಧ ಬಿಜೆಪಿ ಗರಂ
ಶಿವಕುಮಾರ ಸ್ವಾಮೀಜಿ ಇದೇ ಮೊದಲ ಬಾರಿಗೆ 13 ದಿನಗಳ ಕಾಲ ಮಠ ಬಿಟ್ಟು ಆಸ್ಪತ್ರೆಯಲ್ಲಿದ್ದರು. ಮಠವನ್ನು ನೋಡಲೇಬೇಕು ಎಂದು ಪಟ್ಟು ಹಿಡಿದಿದ್ದರಿಂದ ಶ್ರೀಗಳನ್ನು ಕರೆದುಕೊಂಡು ಬರಲಾಗಿದೆ. ಮಠಕ್ಕೆ ಬಂದ ಬಳಿಕ ಇಷ್ಟಲಿಂಗ ಪೂಜೆ ನೆರವೇರಿಸಿದ ಸ್ವಾಮೀಜಿ, ಬಳಿಕ ಇಡ್ಲಿ ಸೇವಿಸಿದ್ದಾರೆ. ಪೌಷ್ಟಿಕಾಂಶ ಆಹಾರ ಸೇವಿಸಲಿದ್ದು, ಅವರ ದಿನಚರಿಗೆ ಯಾವುದೇ ತೊಂದರೆಯಾಗದಂತೆ ವಿಶ್ರಾಂತಿಗೆ ವ್ಯವಸ್ಥೆ ಮಾಡಲಾಗಿದೆ ಎಂದು ಕಿರಿಯ ಶ್ರೀಗಳು ಹೇಳಿದ್ದಾರೆ.
ಸದ್ಯಕ್ಕೆ ಸ್ವಾಮೀಜಿ ಆರೋಗ್ಯ ಸಂಪೂರ್ಣವಾಗಿ ಸುಧಾರಿಸಿದ್ದು, ಸೋಂಕು ಉಂಟಾಗಬಾರದು ಎಂದು ಕೆಲ ದಿನಗಳ ಕಾಲ ಭಕ್ತರಿಗೆ ದರ್ಶನ ನಿರ್ಬಂಧಿಸಲಾಗಿದೆ. ಆದರೆ ಶಿವಕುಮಾರ ಸ್ವಾಮೀಜಿಯನ್ನು ನೋಡುವ ಸಲುವಾಗಿ ಅಪಾರ ಸಂಖ್ಯೆಯಲ್ಲಿ ಭಕ್ತರು ಬಂದಿದ್ದರು.