ಸಿದ್ದಗಂಗಾ ಮಠಕ್ಕೆ ಮಾತ್ರ ಭೇಟಿ ಕೊಟ್ಟಿದ್ದರೆ ಸಂತೋಷ್?
ಬಿಜೆಪಿ ರಾಜ್ಯಕಾರ್ಯಕಾರಿಣಿ ಸಭೆ ಮೈಸೂರಿನಲ್ಲಿ ಆರಂಭವಾಗುವ ಒಂದು ದಿನದ ಮುಂಚೆ ಬಿಎಲ್ ಸಂತೋಷ್ ತುಮಕೂರಿನ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿದ್ದರು. ಅ ನಂತರ ಮಾಜಿ ಸಚಿವ ಸೊಗಡು ಶಿವಣ್ಣ ಮನೆಯಲ್ಲಿ ಸಭೆ ನಡೆಸಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ
ತುಮಕೂರು, ಮೇ 9: ರಾಜ್ಯ ಬಿಜೆಪಿಯಲ್ಲಿ ವಿಪರೀತ ಚರ್ಚೆಗೆ ಕಾರಣವಾಗುತ್ತಿರುವ ಹೆಸರು ಬಿ.ಎಲ್.ಸಂತೋಷ್ ರದು. ಬಿಜೆಪಿ ಭಿನ್ನಮತಕ್ಕೆ ಸಂತೋಷ್ ತುಪ್ಪ ಸುರಿಯುತ್ತಿದ್ದಾರೆ ಎಂಬುದು ಪಕ್ಷದ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪನವರ ಆರೋಪವಾಗಿತ್ತು. ಅಷ್ಟೇ ಅಲ್ಲ, ಅತೃಪ್ತ ಮುಖಂಡರ ಗುಂಪಿನಲ್ಲಿರುವ ಭಾನುಪ್ರಕಾಶ್ ಹಾಗೂ ನಿರ್ಮಲ್ ಕುಮಾರ್ ಸುರಾನಾ ಇದೇ ಸಂತೋಷ್ ರ ಬಲಗೈ ಭಂಟರು ಎಂಬುದು ಕೂಡ ಬಿಎಸ್ ವೈ ಆರೋಪ.
ಮೊನ್ನೆ ಅಂದರೆ ಮೇ 6ರಿಂದ ಮೈಸೂರಿನಲ್ಲಿ ಬಿಜೆಪಿ ಕಾರ್ಯಕಾರಿಣಿ ಅರಂಭವಾಯಿತಲ್ಲ, ಅದಕ್ಕೆ ಒಂದು ದಿನ ಮುಂಚೆ ಸಂತೋಷ್ ಅವರು ತುಮಕೂರಿನ ಸಿದ್ದಗಂಗಾ ಮಠಕ್ಕೆ ತೆರಳಿದ್ದಾರೆ. ಅಷ್ಟೇ ಆಗಿದ್ದರೆ ಮಠಕ್ಕೆ ಭೇಟಿ ಕೊಡುವುದರಲ್ಲಿ ಏನು ತಪ್ಪಿದೆ ಎಂಬ ಪ್ರಶ್ನೆ ಕೇಳಬಹುದು. ಅದರೆ ಈಗ ಹರಿದಾಡುತ್ತಿರುವ ಸುದ್ದಿಯೇ ಬೇರೆ.[ಬ್ರಹ್ಮಚಾರಿ, ಉಗ್ರ ಹಿಂದುತ್ವವಾದಿ ಬಿಎಲ್ ಸಂತೋಷ್ ಜೀ ವ್ಯಕ್ತಿಚಿತ್ರ]
ಮಾಜಿ ಸಚಿವ ಸೊಗಡು ಶಿವಣ್ಣ ಅವರ ಮನೆಯಲ್ಲಿ ಕಾರ್ಯಕಾರಿಣಿ ಬಗ್ಗೆ ಚರ್ಚೆ ನಡೆಸಲಾಗಿದೆ. ಕೇಂದ್ರದಿಂದ ಬಂದ ಮುರಳೀಧರ ರಾವ್ ಅವರಿಗೆ ಯಾವ ರೀತಿಯ ಉತ್ತರ ನೀಡಬೇಕು ಎಂಬ ಬಗ್ಗೆ ಕೂಡ ಚರ್ಚೆ ನಡೆದ ಬಗ್ಗೆ ಸುದ್ದಿ ಹರಿದಾಡುತ್ತಿದೆ. ಅದರೆ ತುಮಕೂರಿನಲ್ಲಿ ಸೊಗಡು ಶಿವಣ್ಣ ಅವರು ನಡೆಸಿದ ಪತ್ರಿಕಾಗೋಷ್ಠಿಯಲ್ಲಿ, ಕಾರ್ಯಕಾರಿಣಿಗೆ ಹಾಜರಾಗಬೇಕಾದವರ ಪಟ್ಟಿಯಲ್ಲಿ ತಮ್ಮ ಹೆಸರು ಇರಲಿಲ್ಲ ಎಂದಿದ್ದಾರೆ.[ಬಿಎಸ್ ವೈ ಕಟ್ಟಿಹಾಕಲು ಸೃಷ್ಟಿಯಾಗಿದ್ದೇ ಬಿಜೆಪಿ ಬಿಕ್ಕಟ್ಟು!]
ನನ್ನ ಹೆಸರು ಇರದ ಕಾರಣಕ್ಕೆ ವೈಯಕ್ತಿಕ ಕೆಲಸಗಳನ್ನು ಮುಗಿಸಿಕೊಂಡು ವಾಪಸ್ ಬಂದೆ ಅಷ್ಟೇ ಎಂದು ಹೇಳಿಕೊಂಡಿದ್ದಾರೆ. ಆದರೆ ಪ್ರಶ್ನೆ ಉದ್ಭವಿಸಿರುವುದು ಸಂತೋಷ್ ಅವರು ತುಮಕೂರಿಗೆ ತೆರಳಿದವರು ಶಿವಣ್ಣ ಮನೆಯಲ್ಲಿ ನಡೆಸಿದ ಚರ್ಚೆಯ ಸುದ್ದಿ ಬಗ್ಗೆ. ಪಕ್ಷದಲ್ಲಿ ಭಿನ್ನಮತ ಬುಗಿಲೆದ್ದಿದೆ. ಆ ಪೈಕಿ ಅತೃಪ್ತರ ಒಂದು ಬಣದ ಎಲ್ಲ ಸಭೆಗಳು ನಡೆದ ಸೊಗಡು ಶಿವಣ್ಣ ಅವರ ಮನೆಗೆ ತೆರಳಿದ್ದರ ಅರ್ಥ ಏನು ಎಂಬ ಪ್ರಶ್ನೆ ಎದ್ದಿದೆ.