ಭಕ್ತರ ಒತ್ತಡಕ್ಕೆ ಮಣಿದು ಕಿಟಕಿ ಮೂಲಕ ಸಿದ್ದಗಂಗಾ ಶ್ರೀ ದರ್ಶನಕ್ಕೆ ಅವಕಾಶ
ತುಮಕೂರು, ಜನವರಿ 16 : ಸಿದ್ದಗಂಗಾ ಮಠದ ಶಿವಕುಮಾರ ಸ್ವಾಮೀಜಿ ಮೇಲೆ ಜನರಿಗೆ ಇರುವ ಪ್ರೀತಿ ಮತ್ತು ಅದಕ್ಕೆ ಅವರು ಹಾಗೂ ಮಠದ ಸ್ಪಂದನೆ ಹೇಗಿರುತ್ತದೆ ಎಂಬುದಕ್ಕೆ ಬುಧವಾರ ಮತ್ತೆ ಸಾಕ್ಷ್ಯ ದೊರೆಯಿತು. ತೀವ್ರತರದ ಅನಾರೋಗ್ಯ ಸಮಸ್ಯೆ ಇದ್ದರೂ ಬುಧವಾರ ಬೆಳಗಿನ ಜಾವ ಶ್ರೀಗಳ ಆಸೆಯಂತೆಯೇ ಮಠಕ್ಕೆ ಕರೆತರಲಾಗಿದೆ.
ಸಿದ್ದಗಂಗಾ ಶ್ರೀಗಳ ಭೇಟಿ ಮಾಡಿದ ಮೈಸೂರು ರಾಜವಂಶಸ್ಥ ಯದುವೀರ್
ಆದರೆ, ಶಿವಕುಮಾರ ಸ್ವಾಮೀಜಿ ಆರೋಗ್ಯದ ಬಗ್ಗೆ ಆತಂಕಗೊಂಡಿದ್ದ ಭಕ್ತ ಸಮೂಹ ಭಾರೀ ಸಂಖ್ಯೆಯಲ್ಲಿ ಮಠಕ್ಕೆ ಧಾವಿಸಿದೆ. ಈ ಮಧ್ಯೆ ಕಿರಿಯ ಶ್ರೀಗಳಾದ ಸಿದ್ದಲಿಂಗ ಸ್ವಾಮೀಜಿ ಕಣ್ಣೀರು ಹಾಕಿದ್ದರಿಂದ ಪರಿಸ್ಥಿತಿ ಮತ್ತಷ್ಟು ಭಾವನಾತ್ಮಕ ಆಗಿದೆ. ಬೆಳಗ್ಗೆಯಿಂದ ವಿಪರೀತ ಸಂಖ್ಯೆಯಲ್ಲಿ ಜನರು ಸೇರಿದರೂ, ಪರಿಸ್ಥಿತಿ ಸೂಕ್ಷ್ಮವಾಗಿದ್ದರೂ ಮಠದಲ್ಲಿ ಕಿಟಕಿ ಮೂಲಕ ಶಿವಕುಮಾರ ಸ್ವಾಮೀಜಿ ನೋಡಲು ಅವಕಾಶ ನೀಡಲಾಗಿದೆ.
ತುಮಕೂರಿನ ಕ್ಯಾತ್ಸಂದ್ರದಲ್ಲಿರುವ ಸಿದ್ದಗಂಗಾ ಮಠವು ಸಾವಿರಾರು ವಿದ್ಯಾರ್ಥಿಗಳ ಪಾಲಿಗೆ ಅನ್ನ-ಶಿಕ್ಷಣ-ಜ್ಞಾನವನ್ನು ನೀಡುತ್ತಿದೆ. ಈ ಕೈಂಕರ್ಯದಲ್ಲಿ ಶಿವಕುಮಾರ ಸ್ವಾಮೀಜಿ ಬದ್ಧತೆ ಹಾಗೂ ಶ್ರದ್ಧೆಯ ಬಗ್ಗೆ ರಾಜ್ಯ ಮಾತ್ರವಲ್ಲ, ದೇಶದಾದ್ಯಂತ ಗೌರವ ಇದೆ. 111 ವರ್ಷದ ಸ್ವಾಮೀಜಿಗೆ ಈಚೆಗೆ ಆರೋಗ್ಯ ಸಮಸ್ಯೆ ಎದುರಾಗಿತ್ತು. ಆ ನಂತರ ಅವರಿಗೆ ಚೆನ್ನೈನಲ್ಲಿ ಶಸ್ತ್ರಚಿಕಿತ್ಸೆ ಮಾಡಿಸಲಾಗಿತ್ತು.
ಆದರೆ, ಅಲ್ಲಿಂದ ವಾಪಸಾದ ನಂತರ ಅವರ ಚೇತರಿಕೆ ನಿಧಾನವಾಗುತ್ತಿದೆ. ವಿವಿಧ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಂಡು, ಚಿಕಿತ್ಸೆ ಮುಂದುವರಿಸಲಾಗಿದೆ. ಈ ಮಧ್ಯೆ ಶ್ರೀಗಳಿಗೆ ಭಾರತ ರತ್ನ ಗೌರವ ನೀಡಬೇಕು ಎಂದು ಕಾಂಗ್ರೆಸ್ ನ ಮುಖಂಡರಾದ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ವಿವಿಧ ನಾಯಕರು ಆಗ್ರಹಿಸಿದ್ದಾರೆ.