ತುಮಕೂರಿನಿಂದಲೇ ದೇವೇಗೌಡರು ಸ್ಪರ್ಧೆ, ಸೋಮವಾರ ನಾಮಪತ್ರ
Recommended Video
ಬೆಂಗಳೂರು, ಮಾರ್ಚ್ 22: ದೇವೇಗೌಡ ಅವರು ಯಾವ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸುತ್ತಾರೆ ಎಂಬ ಕುತೂಹಲಕ್ಕೆ ತೆರೆ ಬಿದ್ದಿದ್ದು, ತುಮಕೂರಿನಿಂದಲೇ ಸ್ಪರ್ಧಿಸುವುದಾಗಿ ದೇವೇಗೌಡ ಅವರು ನಿರ್ಧಾರ ಪ್ರಟಿಸಿದ್ದಾರೆ.
ಕುಮಾರಸ್ವಾಮಿ, ದೇವೇಗೌಡ ಹಾಗೂ ಇನ್ನಿತರ ಮುಖಂಡರು ಇಂದು ಸಭೆ ನಡೆಸಿದ್ದು, ಸಭೆಯಲ್ಲಿ ದೇವೇಗೌಡ ಅವರು ತಮ್ಮ ನಿರ್ಧಾರ ಪ್ರಕಟಿಸಿದ್ದಾರೆ. ದೇವೇಗೌಡ ಅವರ ಮುಂದೆ ಬೆಂಗಳೂರು ಉತ್ತರ ಮತ್ತು ತುಮಕೂರು ಕ್ಷೇತ್ರಗಳ ಆಯ್ಕೆ ಇತ್ತು. ದೇವೇಗೌಡ ಅವರು ಸುರಕ್ಷಿತವಾದ ತುಮಕೂರನ್ನು ಆಯ್ಕೆ ಮಾಡಿಕೊಂಡಿದ್ದಾರೆ.
ತುಮಕೂರು ಲೋಕಸಭೆ: ಕಾಂಗ್ರೆಸ್ ಕೋಟೆಯಲ್ಲಿ ಬಿಜೆಪಿಗೊಂದು ಭರವಸೆಯ ಚುಕ್ಕಿ
ತುಮಕೂರು ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಲು ದೇವೇಗೌಡ ಅವರು ಮಾರ್ಚ್ 25 ರ ಸೋಮವಾರದಂದು ನಾಮಪತ್ರ ಸಲ್ಲಿಸಲಿದ್ದಾರೆ. ಈ ಕ್ಷೇತ್ರವನ್ನು ಕಾಂಗ್ರೆಸ್ಗೆ ಬಿಟ್ಟುಕೊಡುವಂತೆ ಪರಮೇಶ್ವರ್ ಅವರು ಮನವಿ ಮಾಡಿದ್ದರು, ಆದರೆ ಪರಮೇಶ್ವರ್ ಅವರ ಮನವಿಗೆ ಬೆಲೆ ದೊರೆತಿಲ್ಲ.
ಬೆಂಗಳೂರು ಉತ್ತರ ಕ್ಷೇತ್ರದಿಂದ ದೇವೇಗೌಡ ಅವರು ಸ್ಪರ್ಧಸುತ್ತಾರೆ ಎಂದು ಹೇಳಲಾಗಿತ್ತು. ಆದರೆ ಈ ಕ್ಷೇತ್ರದಲ್ಲಿ ಗೆಲುವು ಅಷ್ಟು ಸುಲಭವಲ್ಲ ಎನ್ನಲಾದ ಕಾರಣ ದೇವೇಗೌಡ ಅವರು ಕ್ಷೇತ್ರ ಬದಲಾಯಿಸಿದ್ದಾರೆ. ಬೆಂಗಳೂರು ಉತ್ತರ ಕ್ಷೇತ್ರದಲ್ಲಿ ಕೇಂದ್ರ ಮಂತ್ರಿ ಸದಾನಂದ ಗೌಡ ಅವರು ಬಿಜೆಪಿಯಿಂದ ಸ್ಪರ್ಧಿಸುತ್ತಿದ್ದಾರೆ.
ವಿರೋಧಿಗಳನ್ನು ಪತರಗುಟ್ಟಿಸಿದ ದೇವೇಗೌಡರ ಚಾಣಾಕ್ಷ ನಡೆಗೆ ಉಘೇ ಉಘೇ
ತುಮಕೂರು ಕ್ಷೇತ್ರದಲ್ಲಿ ಹಾಲಿ ಸಂಸದ ಕಾಂಗ್ರೆಸ್ನ ಮುದ್ದಹನುಮೇಗೌಡ ಅವರಾಗಿದ್ದು, ಮೈತ್ರಿ ಸೂತ್ರದ ಪ್ರಕಾರ ಹಾಲಿ ಸಂಸದ ಕ್ಷೇತ್ರವನ್ನು ಬಿಟ್ಟುಕೊಡುವಂತಿರಲಿಲ್ಲ, ಆದರೂ ಸಹ ಜೆಡಿಎಸ್ ಈ ಕ್ಷೇತ್ರವನ್ನು ತನ್ನ ತೆಕ್ಕೆಗೆ ಹಾಕಿಕೊಂಡಿದೆ. ಆದರೆ ಕ್ಷೇತ್ರದಲ್ಲಿ ಕೆಲವು ಕಾಂಗ್ರೆಸ್ ಮುಖಂಡರು ಕ್ಷೇತ್ರವನ್ನು ಜೆಡಿಎಸ್ಗೆ ಬಿಟ್ಟುಕೊಟ್ಟಿದ್ದಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸ್ವತಃ ಪರಮೇಶ್ವರ್ ಅವರು ಕ್ಷೇತ್ರವನ್ನು ವಾಪಸ್ ನೀಡುವಂತೆ ಬೇಡಿಕೊಂಡಿದ್ದಾರೆ.