ದಲಿತರ ಮೇಲಿನ ದೌರ್ಜನ್ಯ ಸಹಿಸಲ್ಲ: ಡಿಸಿಎಂ ಪರಮೇಶ್ವರ ಎಚ್ಚರಿಕೆ
ತುಮಕೂರು, ಸೆಪ್ಟೆಂಬರ್ 20: ಸಮಾಜದಲ್ಲಿ ದಲಿತರಿಗೆ ಯಾವುದೇ ರೀತಿಯ ದಕ್ಕೆ ಬಂದರೆ ನಾನು ಸುಮ್ಮನಿರುವುದಿಲ್ಲ ಎಂದು ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ ತಿಳಿಸಿದ್ದಾರೆ.
ಜಿಲ್ಲಾ ಛಲವಾದಿ ಮಹಾಸಭಾ ವತಿಯಿಂದ ತುಮಕೂರಿನ ಅಮಾನಿಕೆರೆ ಗಾಜಿನ ಮನೆ ಆವರಣದಲ್ಲಿ ಆಯೋಜಿಸಿರುವ ಅಭಿನಂದನಾ ಸಮಾರಂಭದಲ್ಲಿ ಪಾಲ್ಗೊಂಡು ಅಭಿನಂದನೆ ಸ್ವೀಕರಿಸಿ ಮಾತನಾಡಿದರು.
ಮಹತ್ವ ಪಡೆದುಕೊಂಡ ಸಿದ್ದರಾಮಯ್ಯ-ಪರಮೇಶ್ವರ್ ರಹಸ್ಯ ಮಾತುಕತೆ
ದಲಿತರನ್ನು ಅವಕಾಶಕ್ಕೆ ತಕ್ಕಂತೆ ಬಳಸಿಕೊಳ್ಳಬಹುದು ಎಂದು ಊಹಿಸಿದರೆ ಅದನ್ನು ಸಹಿಸುವುದಿಲ್ಲ. ನಾನು ದಲಿತ ಸಮುದಾಯವನ್ನು ಪ್ರತಿನಿಧಿಸಿ ಉಪಮುಖ್ಯಮಂತ್ರಿ ಯಾಗಿದ್ದೇನೆ. ದಲಿತರಿಗೆ ಯಾವುದೇ ರೀತಿ ತೊಂದರೆಯಾದರೆ ಅವರ ಪರ ನಾನು ನಿಲ್ಲುತ್ತೇನೆ. ಅದಕ್ಕಾಗಿ ರಾಜೀನಾಮೆ ನೀಡಲು ಸಿದ್ಧ ಎಂದು ಹೇಳಿದರು.
ಸಮಾಜದಲ್ಲಿ ಶೋಷಿತ ಸಮುದಾಯದವರನ್ನು ಕೆಳಸ್ಥರದಿಂದ ಕಾಣಲಾಗುತ್ತಿದೆ. ಯಾರೂ ಕೆಳಜಾತಿಯಲ್ಲಿ ಹುಟ್ಟಬೇಕೆಂದು ಅರ್ಜಿ ಹಾಕಿ ಹುಟ್ಟುವುದಿಲ್ಲ. ಈ ಜಾತಿ ವ್ಯವಸ್ಥೆ ನಮ್ಮನ್ನು ಈ ಮಟ್ಟಕ್ಕೆ ತಂದಿದೆ. ದೇಶ ಅಭಿವೃದ್ಧಿಯಾಗಲು ತೊಡಕಾಗಿರುವುದೇ ಈ ಜಾತಿ ವ್ಯವಸ್ಥೆಯಿಂದ. ಈ ವ್ಯವಸ್ಥೆ ಇರದಿದ್ದರೆ ವಿಶ್ವದಲ್ಲೇ ಮೊದಲ ಸ್ಥಾನದಲ್ಲಿ ನಮ್ಮ ದೇಶ ಇರುತ್ತಿತ್ತು ಎಂದರು.
ಡ್ರಗ್ಸ್ ಮುಕ್ತ ತುಮಕೂರು ವಿವಿ: ಡಿಸಿಎಂ ಕಟ್ಟುನಿಟ್ಟಿನ ಸೂಚನೆ
ಮುಂದಾದರೂ ಈ ವ್ಯವಸ್ಥೆ ತೊಲಗಿ, ಮುಂದಿನ ಪೀಳಿಗೆ ಈ ಶೋಷಣೆಯಿಂದ ಮುಕ್ತವಾಗಬೇಕು. ದಲಿತ ಜಾತಿ ಹುಡುಗ ಅಂತರ್ಜಾತಿ ವಿವಾಹವಾದರೆ ಮರ್ಯಾದ ಹತ್ಯೆ ಮಾಡುತ್ತಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಶಿಕ್ಷಣದಿಂದ ಮಾತ್ರ ಈ ವ್ಯವಸ್ಥೆ ಬುಡಮೇಲು ಮಾಡಲು ಸಾಧ್ಯ. ಈ ಜನಾಂಗದವರು ತಮ್ಮ ಮಕ್ಕಳಿಗೆ ಉನ್ನತ ಶಿಕ್ಷಣ ಕೊಡಿಸುವ ಮೂಲಕ ಮೇಲ್ಮಟ್ಟಕ್ಕೇರಿಸಬೇಕು ಎಂದರು.