ಡಿಸಿಸಿ ಬ್ಯಾಂಕ್ ಸೂಪರ್ ಸೀಡ್ ದ್ವೇಷದ ರಾಜಕಾರಣ : ಕೆ.ಎನ್.ರಾಜಣ್ಣ
ತುಮಕೂರು, ಜುಲೈ 21 : "ತುಮಕೂರು ಡಿಸಿಸಿ ಬ್ಯಾಂಕ್ ಸೂಪರ್ ಸೀಡ್ ಮಾಡುವ ಮೂಲಕ ಎಚ್. ಡಿ. ಕುಮಾರಸ್ವಾಮಿ ದೇವೇಗೌಡರ ಸೋಲಿನ ಸೇಡು ತೀರಿಸಿಕೊಳ್ಳುತ್ತಿದ್ದಾರೆ" ಎಂದು ಕಾಂಗ್ರೆಸ್ ನಾಯಕ ಕೆ. ಎನ್. ರಾಜಣ್ಣ ಆರೋಪಿಸಿದರು.
ಭಾನುವಾರ ತುಮಕೂರಿನಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, "ಎಚ್. ಡಿ. ದೇವೇಗೌಡರ ಕುಟುಂಬ ಸೇಡಿನ ರಾಜಕಾರಣ ಮಾಡುತ್ತಿದೆ. ದೇವೇಗೌಡರು ಲೋಕಸಭಾ ಚುನಾವಣೆಯಲ್ಲಿ ತುಮಕೂರಿನಲ್ಲಿ ಸೋತಿದ್ದಕ್ಕೆ ಈ ಮೂಲಕ ಸೇಡು ತೀರಿಸಿಕೊಂಡಿದ್ದಾರೆ" ಎಂದು ದೂರಿದರು.
ಕೆ.ಎನ್.ರಾಜಣ್ಣಗೆ ಶಾಕ್, ತುಮಕೂರು ಡಿಸಿಸಿ ಬ್ಯಾಂಕ್ ಸೂಪರ್ ಸೀಡ್
"ಯಾವುದೇ ನೋಟಿಸ್ ನೀಡದೆ, ಯಾವುದೇ ಅವ್ಯವಹಾರದ ದೂರುಗಳು ಇಲ್ಲದೇ ಏಕಾಏಕಿ ಡಿಸಿಸಿ ಬ್ಯಾಂಕ್ ಸೂಪರ್ ಸೀಡ್ ಮಾಡಲಾಗಿದೆ. ಇದರಿಂದಾಗಿ ನಾನು ಕುಗ್ಗುವುದಿಲ್ಲ, ಒಂದು ವಾರದಲ್ಲಿ ಮತ್ತೆ ಬ್ಯಾಂಕಿನ ಅಧ್ಯಕ್ಷನಾಗುತ್ತೇನೆ" ಎಂದು ಹೇಳಿದರು.
ದೇವೇಗೌಡರು ಆಕಾಶದಿಂದ ಇಳಿದು ಬಂದವರಾ?: ಮಾಜಿ ಶಾಸಕ ಪ್ರಶ್ನೆ
"ಲೋಕಸಭಾ ಚುನಾವಣೆಯಲ್ಲಿ ಎಚ್. ಡಿ. ದೇವೇಗೌಡರ ಸೋಲಿಗೆ ನಾನೊಬ್ಬನೇ ಕಾರಣನಲ್ಲ. ಜಿಲ್ಲೆಯ ಬೇರೆ ನಾಯಕರು ಸಹ ಕಾರಣರಾಗಿದ್ದಾರೆ. ಅಧಿಕಾರ ದುರುಪಯೋಗಪಡಿಸಿಕೊಂಡು ಎಚ್. ಡಿ. ದೇವೇಗೌಡರ ಕುಟುಂಬ ಮತ್ತು ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ ಇಂತಹ ಕೆಲಸ ಮಾಡಿದ್ದಾರೆ" ಎಂದು ರಾಜಣ್ಣ ಆಕ್ರೋಶ ವ್ಯಕ್ತಪಡಿಸಿದರು.
ಮೈತ್ರಿ ಸರಕಾರ ಬೀಳುತ್ತದೆ ಎಂದ ಸಿದ್ದು ಆಪ್ತ
"ಉಪ ಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ ಶಿಕ್ಷಣ ಸಂಸ್ಥೆ ಹಾಗೂ ಸಚಿವ ರೇವಣ್ಣ ಅವ್ಯವಹಾರವನ್ನು ಕೆಲವೇ ದಿನಗಳಲ್ಲಿ ಬಿಚ್ಚಿಡುತ್ತೇನೆ. ಈ ಸರ್ಕಾರ ಸೋಮವಾರ ಪತನವಾಗಲಿದೆ. ಬುಧವಾರ ಅಥವ ಗುರುವಾರ ನಾನು ಪುನಃ ಬ್ಯಾಂಕಿನ ಅಧ್ಯಕ್ಷನಾಗುತ್ತೇನೆ" ಎಂದು ರಾಜಣ್ಣ ವಿಶ್ವಾಸ ವ್ಯಕ್ತಪಡಿಸಿದರು.
"50 ವರ್ಷ ಸಹಕಾರಿ ಕ್ಷೇತ್ರದಲ್ಲಿ ಕೆಲಸ ಮಾಡಿದ್ದೇನೆ. ಇಂತಹ ರಾಜಕೀಯ ನನಗೆ ಹೊಸದಲ್ಲ. ಬ್ಯಾಂಕ್ ಸೂಪರ್ ಸೀಡ್ ಕುರಿತು ಕಾನೂನು ಹೋರಾಟ ಮಾಡಲಿದ್ದೇನೆ. ಸುಪ್ರೀಂಕೋರ್ಟ್ಗೆ ಈ ಕುರಿತು ಅರ್ಜಿ ಸಲ್ಲಿಸಲಿದ್ದೇನೆ" ಎಂದರು.
ಕೆ. ಎನ್. ರಾಜಣ್ಣ ತುಮಕೂರು ಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿದ್ದರು. ಶನಿವಾರ ರಾತ್ರಿ 8.30ಕ್ಕೆ ತುರ್ತು ಆದೇಶ ಹೊರಡಿಸಿದ ಸರ್ಕಾರ ಬ್ಯಾಂಕ್ ಸೂಪರ್ ಸೀಡ್ ಮಾಡಲು ಸೂಚನೆ ನೀಡಿತ್ತು. ಜಿಲ್ಲಾಧಿಕಾರಿ ರಾಕೇಶ್ ಕುಮಾರ್ ಬ್ಯಾಂಕ್ ಆಡಳಿತಾಧಿಕಾರಿಯಾಗಿ ಅಧಿಕಾರ ಸ್ವೀಕಾರ ಮಾಡಿದ್ದಾರೆ.