'ಜೆಡಿಎಸ್ ಅಧಿಕಾರಕ್ಕೆ ಬಂದರೆ ಸರಕಾರದಿಂದಲೇ ಕೃಷಿ ಸಾಲ, ಬೆಲೆ ನಿಗದಿ'
ಮಧುಗಿರಿ, ಜನವರಿ 24: ಮೇ ತಿಂಗಳಲ್ಲಿ ಚುನಾವಣೆ ಬರಬಹುದು. ಬಿಜೆಪಿ ಪರಿವರ್ತನಾ ಯಾತ್ರೆ, ಕಾಂಗ್ರೆಸ್ ನಿಂದ ಸಾಧನಾ ಸಮಾವೇಶ ಮಾಡಿದ್ದಾರೆ ಇಲ್ಲಿ. ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್, ಅಧಿಕಾರ ಕೊಟ್ಟರೆ ಸಿದ್ದರಾಮಯ್ಯ ಜೈಲಿಗೆ ಕಳಿಸ್ತೀನಿ ಅಂತಾರೆ ಯಡಿಯೂರಪ್ಪ, ಸಿದ್ದರಾಮಯ್ಯ ಅವರು ಯಡಿಯೂರಪ್ಪ ಮತ್ತವರ ಸಂಪುಟದಲ್ಲಿದ್ದವರು ಜೈಲಿಗೆ ಹೋಗಿ ಬಂದವರು ಅಂತಾರೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಹೇಳಿದರು.
ಇಲ್ಲಿ ಮಾತನಾಡಿದ ಅವರು, ಬಿಜೆಪಿ- ಕಾಂಗ್ರೆಸ್ ನವರು ರೈತರ ಕಷ್ಟಗಳ ಬಗ್ಗೆ ಮಾತನಾಡುತ್ತಿಲ್ಲ. ನೀವು ಅನಿತಾ ಕುಮಾರಸ್ವಾಮಿ ಅವರನ್ನು ಮಧುಗಿರಿಯಲ್ಲಿ ಗೆಲ್ಲಿಸಿದ್ದಿರಿ. ಆಗ ನಿಮಗೆ ಕೊಟ್ಟ ಮಾತು ಈಡೇರಿಸಲು ಆಗಿಲ್ಲ. ಈ ಬಾರಿ ಕುಮಾರಣ್ಣ ಮುಖ್ಯಮಂತ್ರಿ ಆಗಲಿ ಎಂಬ ವಾತಾವರಣ ಇದೆ. ವೀರಭದ್ರಯ್ಯ ಅವರಿಗೆ ಮತ ಕೊಟ್ಟರೆ ಕುಮಾರಸ್ವಾಮಿ, ದೇವೇಗೌಡರಿಗೆ ಮತ ಕೊಟ್ಟಂತೆ ಎಂಬುದನ್ನು ಮನಸ್ಸಿನಲ್ಲಿ ಇಟ್ಟುಕೊಳ್ಳಿ ಎಂದರು.
'ಡಿಕೆಶಿ ಜತೆ ಹೊಂದಾಣಿಕೆ ಮಾಡಿಕೊಂಡು ಕಾರ್ಯಕರ್ತರಿಗೆ ವಿಷ ಹಾಕಲ್ಲ'
ಇಡೀ ರಾಜ್ಯದ ಸಮಸ್ಯೆ ಏನು ಎಂಬುದು ನನಗೆ ಗೊತ್ತಿದೆ. ಹಲವು ಜಿಲ್ಲೆಗಳಲ್ಲಿ ಪ್ರವಾಸ ಮಾಡಿಬಂದೆ. ನನ್ನ ಆರೋಗ್ಯ ಸರಿಯಿಲ್ಲ. ಆದರೂ ಇವತ್ತು ಇಲ್ಲಿಗೆ ಬಂದಿದ್ದೇನೆ. ಏಕೆಂದರೆ, ಪಕ್ಷ ಉಳಿಸಿಕೊಟ್ಟ ನಿಮ್ಮ ಜತೆಗೆ ಭಾವನೆಗಳನ್ನು ಹಂಚಿಕೊಳ್ಳುವುದಕ್ಕೆ ಬಂದಿದ್ದೇನೆ. ಅಧಿಕಾರಕ್ಕೆ ಬಂದ ಇಪ್ಪತ್ನಾಲ್ಕು ಗಂಟೆಯೊಳಗೆ ರೈತರ ಸಾಲ ಮನ್ನಾ ಮಾಡಿಸುತ್ತೇನೆ ಎಂದು ಹೇಳಿದರು.
ಕುಮಾರಸ್ವಾಮಿ ಅವರ ಭಾಷಣದ ಮುಖ್ಯಾಂಶಗಳು ಇಲ್ಲಿವೆ
ಐವತ್ತೊಂದು ಸಾವಿರ ಕೋಟಿ ಕೃಷಿ ಸಾಲ ಮನ್ನಾ
ಯಾವುದೇ ಬ್ಯಾಂಕ್ ನಲ್ಲಿರುವ ಐವತ್ತೊಂದು ಸಾವಿರ ಕೋಟಿ ರುಪಾಯಿ ಕೃಷಿ ಸಾಲ ಮನ್ನಾ ಮಾಡಲು ನಿರ್ಧರಿಸಿದ್ದೇನೆ. ಜೆಡಿಎಸ್ ಅಧಿಕಾರಕ್ಕೆ ಬಂದರೆ ಎಪ್ಪತ್ತು ವರ್ಷ ಮೇಲ್ಪಟ್ಟವರಿಗೆ ಬದುಕಿರುವವರೆಗೆ ಐದು ಸಾವಿರ ರುಪಾಯಿ ಒಂದು ಕುಟುಂಬಕ್ಕೆ ನೀಡುತ್ತೇನೆ.
ರೈತ ಪರ ಯಾತ್ರೆ ಮಾಡಲು ಸಜ್ಜಾಗಿರುವ ಕುಮಾರಸ್ವಾಮಿ
ಆರು ಸಾವಿರ ರುಪಾಯಿ ತಿಂಗಳಿಗೆ
ಇನ್ನು ಗರ್ಭಿಣಿಯರ ಸಾವು, ನವಜಾತ ಶಿಶು ಸಾವು ಅಥವಾ ಅಂಗವೈಕಲ್ಯ ಆಗುತ್ತಿದೆ. ತಾಯಿ-ಮಗು ಆರೋಗ್ಯ ಉಳಿಸಿಕೊಳ್ಳಲು ಪ್ರತಿ ತಿಂಗಳು ಆರು ಸಾವಿರ ರುಪಾಯಿ ಆರು ತಿಂಗಳ ಕಾಲ ನೀಡಬೇಕು ಎಂದು ತೀರ್ಮಾನಿಸಿದ್ದೇನೆ. ಮಾತೃಪೂರ್ಣ ಯೋಜನೆ ಅಡಿ ಗರ್ಭಿಣಿಯರು ಮಧ್ಯಾಹ್ನದ ಊಟಕ್ಕೆ ಅಂಗನವಾಡಿ ಕೇಂದ್ರಕ್ಕೆ ಹೋಗಬೇಕು.
ಅನ್ನಭಾಗ್ಯ ಯೋಜನೆ ತಂದಿದ್ದು ಎನ್ ಟಿ ರಾಮಾರಾವ್
ಸಿದ್ದರಾಮಯ್ಯ ಭಾಷಣ ಮಾಡ್ತಾರೆ, ಮುಖ್ಯಮಂತ್ರಿ ಆದ ಇಪ್ಪತ್ನಾಲ್ಕು ಗಂಟೆಯಲ್ಲಿ ಅನ್ನ ಭಾಗ್ಯ, ಆ ನಂತರ ಕ್ಷೀರ ಭಾಗ್ಯ, ಕೃಷಿ ಭಾಗ್ಯ ಕೊಟ್ಟೆ ಅಂತಾರೆ. ಆದರೆ ಅನ್ನ ಭಾಗ್ಯ ಯೋಜನೆ ಆರಂಭಿಸಿದವರು ಎನ್.ಟಿ.ರಾಮಾರಾವ್ ಅಂತ ಭಾಷಣ ಕೇಳಿಸಿಕೊಂಡೆ. ರಾಜ್ಯದಲ್ಲಿ ಒಂದು ರುಪಾಯಿ ಅಕ್ಕಿ ನೀಡಿದ್ದು ಮೊದಲಿಗೆ ಜನತಾಪಕ್ಷ. ನಮ್ಮ ಸರಕಾರ ಮೂರು ರುಪಾಯಿಗೆ ಕೇಜಿ ಅಕ್ಕಿಯನ್ನು ಕೊಡುತ್ತಿತ್ತು. ಅನ್ನ ಭಾಗ್ಯ ಯೋಜನೆಗೆ ಮರುಳಾಗದಿರಿ. ಇನ್ನು ಕ್ಷೀರಭಾಗ್ಯದ ಬಗ್ಗೆ ಮಾತನಾಡ್ತಾರೆ. ಕೆಎಂಎಫ್ ಪ್ರಬಲವಾಗುವುದಕ್ಕೆ ಕೊಡುಗೆ ಕೊಟ್ಟಿರುವುದು ಎಚ್.ಡಿ.ರೇವಣ್ಣ.
ಮದ್ಯಕ್ಕಾಗಿ ಹಣ ಕಿತ್ತುಕೊಳ್ತಾರೆ
ಹೆಣ್ಣುಮಕ್ಕಳ ಒತ್ತಡದಿಂದ ರಾಜ್ಯದಲ್ಲಿ ಸಾರಾಯಿ ರದ್ದು ಮಾಡಿದೆ. ಆದರೆ ಸಿದ್ದರಾಮಯ್ಯ ಅಧಿಕಾರಕ್ಕೆ ಬಂದ ಮೇಲೆ ಐಎಂಎಲ್ ಬಾಟಲ್ ತಂದರು. ಕ್ವಾರ್ಟರ್ ಬಾಟಲ್ ಬೆಲೆ ಹದಿನೈದು ರುಪಾಯಿ ತಗುಲುತ್ತದೆ. ಬಡವರ ಪರ ಇರುವ ಸಿದ್ದರಾಮಯ್ಯ ಎಪ್ಪತ್ತು-ಎಂಬತ್ತು ರುಪಾಯಿ ಕಿತ್ತುಕೊಳ್ಳುತ್ತಿದ್ದಾರೆ. ಒಂದು ತಿಂಗಳಿಗೆ ನಿಮ್ಮ ಹತ್ತಿರ ಸಾವಿರದ ಎಂಟುನೂರು ಕಿತ್ತುಕೊಳ್ತಾರೆ. ಅಕ್ಕಿ-ಹಾಲು ಕೊಡುವುದರ ಮೊತ್ತ ಲೆಕ್ಕ ಹಾಕಿ. ಆಗ ವಾಸ್ತವ ಗೊತ್ತಾಗುತ್ತದೆ.
ಕೃಷಿಗೆ ಸರಕಾರದಿಂದ ಸಾಲ
ಕೃಷಿ ಮಾಡುವುದಕ್ಕೆ ಸರಕಾರದಿಂದ ಸಾಲ ಕೊಡ್ತೀನಿ. ನೀವು ಬೆಳೆದ ಬೆಳೆಗೆ ಸರಿಯಾದ ಬೆಲೆ ಕೊಡಿಸಲು ಬದ್ಧನಾಗಿದ್ದೇನೆ. ನಾನು ರಾಜಕಾರಣಕ್ಕೆ ಬರಲು ಪಿಜಿಆರ್ ಸಿಂಧ್ಯಾ ಅವರು ಕಾರಣ. ನಾನು ಇಸ್ರೇಲ್ ಗೆ ಹೋದಾಗ ವಾಪಸ್ ನನ್ನ ದೇಹ ಬರಬೇಕಿತ್ತು. ಆದರೆ ನಿಮ್ಮಂಥವರ ಆಶೀರ್ವಾದದಿಂದ ಬದುಕು ಬಂದಿದ್ದೇನೆ.
ಜಮೀನಿಲ್ಲದ ಕೂಲಿ ಕಾರ್ಮಿಕರಿಗೆ ಯೋಜನೆ
ಜಮೀನಿಲ್ಲದ ಕೂಲಿ ಕಾರ್ಮಿಕರಿಗೆ ಕೂಡ ಯೋಜನೆಯೊಂದನ್ನು ಮನಸ್ಸಲ್ಲಿ ಇಟ್ಟುಕೊಂಡಿದ್ದೇನೆ. ಆತ್ಮಹತ್ಯೆ ಮಾಡಿಕೊಂಡ ಮೂರೂವರೆ ಸಾವಿರ ರೈತರ ಮನೆಗೆ ಈಗ ಭೇಟಿ ಕೊಡ್ತೀನಿ ಅಂತಿದ್ದಾರೆ ಯಡಿಯೂರಪ್ಪನವರು. ನಮ್ಮ ಪಕ್ಷದಿಂದ ಸಾವಿರಕ್ಕೂ ಹೆಚ್ಚು ಕುಟುಂಬಗಳಿಗೆ ಐವತ್ತು ಸಾವಿರದಿಂದ ಒಂದು ಲಕ್ಷ ರುಪಾಯಿ ನೀಡಿದ್ದೇವೆ. ಅದು ಕೂಡ ನಿಮ್ಮಂಥವರು ನೀಡಿದ ಹಣವೇ.
ಮಧುಗಿರಿ ಜನರ ಋಣ ನಮ್ಮ ಮೇಲಿದೆ
ನನ್ನ ಮೇಲೆ ಮಧುಗಿರಿ ಜನರ ಋಣ ಇದೆ. ಈ ಬಾರಿ ಜೆಡಿಎಸ್ ಅಧಿಕಾರಕ್ಕೆ ಬರುತ್ತದೆ ಎಂಬ ನಂಬಿಕೆ ಇದೆ. ಮಾಧ್ಯಮಗಳ ಸಮೀಕ್ಷೆಯಲ್ಲಿ ಒಂದೊಂದು ಸಂಖ್ಯೆ ಹೇಳ್ತಾರೆ. ಆದರೆ ನಾನು ನೂರಾ ಹದಿಮೂರು ಅಂತಿದೀನಿ. ನಮ್ಮನ್ನು ಉಳಿಸಿರುವವರು ತುಮಕೂರು ಜಿಲ್ಲೆಯವರು. ನೀವು ಅವರನ್ನು ಉಳಿಸಿ ಎಂದು ಮನವಿ ಮಾಡಿದರು.