ಜೆಡಿಎಸ್ ಶಾಸಕ ಗೌರಿ ಶಂಕರ್ಗೆ ಕೋರ್ಟ್ನಿಂದ ಸಮನ್ಸ್
ತುಮಕೂರು, ಅಕ್ಟೋಬರ್ 19; ತುಮಕೂರು ಗ್ರಾಮಾಂತರ ಕ್ಷೇತ್ರದ ಜೆಡಿಎಸ್ ಶಾಸಕ ಗೌರಿ ಶಂಕರ್ಗೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಸಮನ್ಸ್ ಜಾರಿಗೊಳಿಸಿದೆ. ನಕಲಿ ವಿಮಾ ಬಾಂಡ್ ಹಂಚಿಕೆ ಪ್ರಕರಣದಲ್ಲಿ ಈ ಸಮನ್ಸ್ ನೀಡಲಾಗಿದೆ. ಅಕ್ಟೋಬರ್ 22ರಂದು ನ್ಯಾಯಾಲಯಕ್ಕೆ ಖುದ್ದಾಗಿ ಹಾಜರಾಗಬೇಕು ಎಂದು ಸೂಚನೆ ನೀಡಲಾಗಿದೆ.
ಶಾಸಕ ಡಿ. ಸಿ. ಗೌರಿ ಶಂಕರ್ ವಿದ್ಯಾರ್ಥಿಗಳಿಗೆ ನಕಲಿ ವಿಮಾ ಬಾಂಡ್ ಹಂಚಿಕೆ ಮಾಡಿದ್ದಾರೆ ಎಂದು ರಮೇಶ್ ಬೆಟ್ಟಯ್ಯ ತುಮಕೂರು ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಬಳಿಕ ಈ ಪ್ರಕರಣವನ್ನು ಸಿಐಡಿ ಪೊಲೀಸರು ತನಿಖೆ ನಡೆಸಿದ್ದರು.
ಶಾಸಕರಿಗೇ ತಿಳಿಯದೇ ಗುಬ್ಬಿಯಲ್ಲಿ ಜೆಡಿಎಸ್ ಸಮಾವೇಶ!
ಸಿಐಡಿ ಪೊಲೀಸರು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ 4 ಸಾವಿರ ಪುಟಗಳ ದೋಷಾರೋಪ ಪಟ್ಟಿಯನ್ನು ಸಲ್ಲಿಕೆ ಮಾಡಿದ್ದಾರೆ. ಈ ಚಾರ್ಜ್ ಶೀಟ್ ಆಧಾರದ ಮೇಲೆ ನ್ಯಾಯಾಲಯ ಶಾಸಕರಿಗೆ ಸಮನ್ಸ್ ಜಾರಿಗೊಳಿಸಿದೆ. ವಿಮಾ ಬಾಂಡ್ ಹಂಚಿಕೆಯಲ್ಲಿ ಅಕ್ರಮ ನಡೆದಿದೆ ಎಂದು ಸಿಐಡಿ ಚಾರ್ಜ್ಶೀಟ್ನಲ್ಲಿ ಉಲ್ಲೇಖಿಸಿದೆ.
ಬೆಳಗಾವಿ ರಾಜಕೀಯ; ಬಂತೊಂದು Breaking News!
ಏನಿದು ಪ್ರಕರಣ?; 2018ರ ವಿಧಾನಸಭೆ ಚುನಾವಣೆ ವೇಳೆ ವಿದ್ಯಾರ್ಥಿಗಳಿಗೆ ನಕಲಿ ವಿಮಾ ಬಾಂಡ್ ಹಂಚಿಕೆ ಮಾಡಿದ್ದಾರೆ ಎಂಬುದು ಆರೋಪ. 16,386 ವಿದ್ಯಾರ್ಥಿಗಳಿಗೆ ನಕಲಿ ಆರೋಗ್ಯ ವಿಮಾ ಬಾಂಡ್ ಹಂಚಿಕೆ ಮಾಡಲಾಗಿದೆ. ತುಮಕೂರು ಗ್ರಾಮಾಂತರ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿದ್ದ ಗೌರಿ ಶಂಕರ್ 82,740 ಮತಗಳನ್ನು ಪಡೆದು ಗೆಲುವು ಸಾಧಿಸಿದ್ದರು.
ತುಮಕೂರು; ರಾಜೀನಾಮೆ ಸಂದೇಶ ರವಾನಿಸಿದ ಬಿಜೆಪಿ ಶಾಸಕ!
ಡಿ. ಸಿ. ಗೌರಿ ಶಂಕರ್ ತಂದೆ ದಿ. ಚೆನ್ನಿಗಪ್ಪ ಅಧ್ಯಕ್ಷರಾಗಿದ್ದ ಮಾರುತಿ ಸೇವಾ ಟ್ರಸ್ಟ್ ಮೂಲಕ ಗುಂಪು ವಿಮಾ ಬಾಂಡ್ ಹಂಚಿಕೆ ಮಾಡಲಾಗಿತ್ತು. ನ್ಯೂ ಇಂಡಿಯನ್ ಅಶ್ಯೂರೆನ್ಸ್ ಕಂಪನಿ ಮೂಲಕ ಮೆಡಿ ಅಸಿಸ್ಟ್ ಬಾಂಡ್ ಹಂಚಿಕೆ ಮಾಡಲಾಗಿದೆ. ವಿಮಾ ಬಾಂಡ್ ಜೊತೆ ಜೆಡಿಎಸ್ ನಾಯಕರ ಫೋಟೋ ಇರುವ ದಾಖಲೆಗಳನ್ನು ನೀಡಲಾಗಿತ್ತು. ಈ ಬಾಂಡ್ ಹಂಚಿಕೆಯಲ್ಲಿ ಅಕ್ರಮವಾಗಿದೆ ಎಂಬುದು ದೂರಾಗಿದ್ದು, ಈ ಕುರಿತು ಸಿಐಡಿ ತನಿಖೆ ನಡೆದಿತ್ತು.
ದೂರುದಾರ ರಮೇಶ್ ಬೆಟ್ಟಯ್ಯ ಚುನಾವಣೆಯಲ್ಲಿ ಪೋಷಕರ ಮಕ್ಕಳ ಮತಗಳನ್ನು ಸೆಳೆಯಲು ನಕಲಿ ವಿಮಾ ಬಾಂಡ್ಗಳನ್ನು ಹಂಚಿಕೆ ಮಾಡಿದ್ದಾರೆ ಎಂದು ಮುಖ್ಯ ಚುನಾವಣಾಧಿಕಾರಿ, ಮುಖ್ಯಮಂತ್ರಿಗಳು, ಪ್ರಧಾನಮಂತ್ರಿ ಕಚೇರಿಗೆ ಸಹ ಪತ್ರವನ್ನು ಬರೆದಿದ್ದರು. 2020ರ ಜುಲೈನಲ್ಲಿ ಪ್ರಕರಣದ ತನಿಖೆ ಆರಂಭಗೊಂಡಿತ್ತು.
ಗೌರಿ ಶಂಕರ್, ಕಿಶೋರ್ ವರದಾಚಾರ್, ಗೌರಮ್ಮ, ಅನಂತು, ದಿ. ಚೆನ್ನಿಗಪ್ಪ ವಿರುದ್ಧವೂ ದೋಷಾರೋಪ ಪಟ್ಟಿ ಸಲ್ಲಿಕೆಯಾಗಿದೆ. ಅಕ್ಟೋಬರ್ 22ರಂದು ಖುದ್ದಾಗಿ ನ್ಯಾಯಾಲಯಕ್ಕೆ ಹಾಜರಾಗಬೇಕು ಎಂದು ಸಮನ್ಸ್ನಲ್ಲಿ ಸೂಚನೆ ನೀಡಲಾಗಿದೆ.
ಪ್ರಕರಣ ರದ್ದು ಕೋರಿದ್ದರು; ಶಾಸಕ ಗೌರಿ ಶಂಕರ್ ನಕಲಿ ವಿಮಾ ಬಾಂಡ್ ಹಂಚಿಕೆ ಕುರಿತು ದಾಖಲಾಗಿರುವ ಪ್ರಕರಣ ರದ್ದುಗೊಳಿಸುವಂತೆ ಕರ್ನಾಟಕ ಹೈಕೋರ್ಟ್ ಮೊರೆ ಹೋಗಿದ್ದರು. ಆದರೆ ಕೋರ್ಟ್ ಅರ್ಜಿ ತಿರಸ್ಕರಿಸಿತ್ತು. ಸುಪ್ರೀಂಕೋರ್ಟ್ನಲ್ಲಿ ಸಹ ಅರ್ಜಿ ವಜಾಗೊಂಡಿತ್ತು.
ಸಿಐಡಿ ಸಲ್ಲಿಕೆ ಮಾಡಿರುವ ಚಾರ್ಜ್ ಶೀಟ್ ಅನ್ವಯ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಪ್ರಕರಣದ ವಿಚಾರಣೆ ನಡೆಸಲಿದೆ. ಚಾರ್ಜ್ಶೀಟ್ನಲ್ಲಿ ಹೆಸರಿರುವ ಎಲ್ಲಾ ಆರೋಪಿಗಳಿಗೆ ಕೋರ್ಟ್ ಸಮನ್ಸ್ ನೀಡಿ ವಿಚಾರಣೆ ನಡೆಸಲಿದೆ.
ಚೆನ್ನಿಗಪ್ಪ ನಿಧನ; ಮಾಜಿ ಸಚಿವ, ಜೆಡಿಎಸ್ ನಾಯಕರಾಗಿದ್ದ ಚೆನ್ನಿಗಪ್ಪ ವಿರುದ್ಧವೂ ದೋಷಾರೋಪ ಪಟ್ಟಿ ಸಲ್ಲಿಕೆಯಾಗಿದೆ. 2020ರ ಫೆಬ್ರವರಿಯಲ್ಲಿ ಅವರು ಮೃತಪಟ್ಟಿದ್ದಾರೆ. ತುಮಕೂರು ಜಿಲ್ಲೆಯ ಕೊರಟಗೆರೆ ಕ್ಷೇತ್ರದಲ್ಲಿ ಮೂರು ಬಾರಿ ಗೆಲುವು ಸಾಧಿಸಿದ್ದ ಸಿ. ಚೆನ್ನಿಗಪ್ಪ ಧರ್ಮಸಿಂಗ್ ಮುಖ್ಯಮಂತ್ರಿಯಾಗಿದ್ದಾಗ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ ರೇಷ್ಮೆ ಖಾತೆ ಸಚಿವರಾಗಿದ್ದರು.
ಎಚ್. ಡಿ. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗಲೂ ವಿವಿಧ ಖಾತೆ ನಿಭಾಯಿಸಿದ್ದರು. ಚನ್ನಿಗಪ್ಪ ಪುತ್ರ ಗೌರಿ ಶಂಕರ್ ಪ್ರಸ್ತುತ ತುಮಕೂರು ಗ್ರಾಮಾಂತರ ಕ್ಷೇತ್ರದ ಜೆಡಿಎಸ್ ಶಾಸಕರು.