ಆಪರೇಷನ್ ಆಡಿಯೋ ಹೇಳಿಕೆ : ಕೆ.ಎನ್.ರಾಜಣ್ಣಗೆ ನೋಟಿಸ್
ತುಮಕೂರು, ಫೆಬ್ರವರಿ 13 : 'ಆಪರೇಷನ್ ಕಮಲದ ಆಡಿಯೋ ವಿಚಾರದಲ್ಲಿ ಇಬ್ಬರೂ ಕಳ್ಳರೇ. ದೊಡ್ಡ ಕಳ್ಳ, ಸಣ್ಣ ಕಳ್ಳ ಅನ್ನೋದಿಲ್ಲ' ಎಂದು ಮಾಜಿ ಶಾಸಕರ ಕೆ.ಎನ್.ರಾಜಣ್ಣ ಹೇಳಿಕೆ ನೀಡಿದ್ದರು. ಹೇಳಿಕೆ ಕುರಿತು ವಿವರಣೆ ನೀಡಲು ಕಾಂಗ್ರೆಸ್ ನೋಟಿಸ್ ಜಾರಿ ನೀಡಿದೆ.
ಮಂಗಳವಾರ ಮಧುಗಿರಿ ಕ್ಷೇತ್ರದ ಮಾಜಿ ಶಾಸಕ, ಕಾಂಗ್ರೆಸ್ ನಾಯಕ ಕೆ.ಎನ್.ರಾಜಣ್ಣ ಸಮಾರಂಭವೊಂದರಲ್ಲಿ ಆಪರೇಷನ್ ಕಮಲದ ಕುರಿತು ಹೇಳಿಕೆ ನೀಡಿದ್ದರು. ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರು ಮಾಜಿ ಶಾಸಕರಿಗೆ ನೋಟಿಸ್ ನೀಡಿದ್ದಾರೆ.
ಬಹಿರಂಗವಾಗಿ ಯಾವುದೇ ಹೇಳಿಕೆ ನೀಡದಂತೆ ಕೆ.ಎನ್.ರಾಜಣ್ಣ ಅವರಿಗೆ ಸೂಚನೆ ನೀಡಲಾಗಿತ್ತು. ಆದರೆ, ಪಕ್ಷಕ್ಕೆ ಮುಜುಗರವಾಗುವಂತಹ ಹೇಳಿಕೆ ನೀಡಿದ ಹಿನ್ನಲೆಯಲ್ಲಿ ಕಾರಣ ಕೇಳಿ ನೋಟಿಸ್ ನೀಡಲಾಗಿದೆ.
ಏನು ಹೇಳಿದ್ದರು? : ಶಿರಾ ತಾಲೂಕಿನ ಬುಕ್ಕಾಪಟ್ಟಣದಲ್ಲಿ ಮಾತನಾಡಿದ್ದ ಕೆ.ಎನ್.ರಾಜಣ್ಣ ಅವರು, 'ಆಡಿಯೋ ವಿಚಾರದಲ್ಲಿ ಇಬ್ಬರೂ ಕಳ್ಳರೇ. ದೊಡ್ಡ ಕಳ್ಳ, ಸಣ್ಣಕಳ್ಳ ಅನ್ನೋದಿಲ್ಲ' ಎಂದು ಹೇಳಿಕೆ ನೀಡಿದ್ದರು.
'ಇಬ್ಬರೂ ಹಣದ ಆಮಿಷ ವೊಡ್ಡಿದ್ದಾರೆ. ತನ್ನ ಸರ್ಕಾರವನ್ನು ಸಪೋರ್ಟ್ ಮಾಡು ಅಂತ ಇವರೂ, ಅದೇ ರೀತಿ ಸರ್ಕಾರ ಬೀಳಿಸುವಂತೆ ಅವರೂ ಶಾಸಕರಿಗೆ ಆಮಿಷವೊಡ್ಡಿದ್ದಾರೆ' ಎಂದು ರಾಜಣ್ಣ ಹೇಳಿದ್ದರು.
'ಇವತ್ತು ರಾಜಕಾರಣಿಗಳು ಎಂದರೆ ಅಸಹ್ಯ ಹುಟ್ಟಿದೆ. ಎಕ್ಕಡಾ ಅಂತಿದ್ದಾರೆ. ಈ ರೀತಿ ವರ್ತನೆ ಇಬ್ಬರಿಗೂ ಶೋಭೆ ಅಲ್ಲ. ಇಬ್ಬರೂ ಆರೋಪ ಪ್ರತ್ಯಾರೋಪ ಮಾಡುವ ಬದಲು ತಮ್ಮ ಸಾಚಾತನ ಅರಿಯಬೇಕು' ಎಂದು ಹೇಳಿಕೆ ಕೊಟ್ಟಿದ್ದರು.