2022-23ನೇ ಶೈಕ್ಷಣಿಕ ವರ್ಷಕ್ಕೆ ಚಾಲನೆ ನೀಡಿದ ಬಸವರಾಜ ಬೊಮ್ಮಾಯಿ
ತುಮಕೂರು, ಮೇ 16; ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ತುಮಕೂರಿನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ 2022-23ನೇ ಸಾಲಿನ ಶೈಕ್ಷಣಿಕ ವರ್ಷದ ಶಾಲಾ ಪ್ರಾರಂಭೋತ್ಸವಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಚಾಲನೆ ನೀಡಿದರು. ಮಕ್ಕಳಿಗೆ ಉಚಿತ ಪಠ್ಯಪುಸ್ತಕ ವಿತರಣೆ ಮಾಡಿ, ಕಲಿಕಾ ಚೇತರಿಕೆ ಕಾರ್ಯಕ್ರಮ ಉದ್ಘಾಟಿಸಿದರು.
ಸೋಮವಾರ ತುಮಕೂರಿನ ಎಂಪ್ರೆಸ್ ಶಾಲೆಯಲ್ಲಿ ಆಯೋಜನೆ ಮಾಡಲಾಗಿದ್ದ ಕಾರ್ಯಕ್ರಮದಲ್ಲಿ ಶಿಕ್ಷಣ ಸಚಿವ ಬಿ. ಸಿ. ನಾಗೇಶ್, ಗೃಹ ಹಾಗೂ ತುಮಕೂರು ಜಿಲ್ಲಾ ಉಸ್ತುವಾರಿ ಸಚಿವ ಆರಗ ಜ್ಞಾನೇಂದ್ರ, ಸಂಸದ ಜಿ. ಎಸ್. ಬಸವರಾಜು ಮುಂತಾದವರು.
2022-23ನೇ ಸಾಲಿನ ಶೈಕ್ಷಣಿಕ ವರ್ಷಕ್ಕೆ ಚಾಲನೆ ಸಿಕ್ಕಿದೆ. ಸೋಮವಾರ ಬೇಸಿಗೆ ರಜೆ ಮುಗಿಸಿ ಶಾಲೆಯತ್ತ ಮಕ್ಕಳು ಮುಖಮಾಡಿದ್ದಾರೆ ಜೊತೆಗೆ ಶಾಲೆಯಲ್ಲಿ ಮಕ್ಕಳಿಗೆ ಇವತ್ತಿನಿಂದಲೇ ಮಧ್ಯಾಹ್ನದ ಬಿಸಿಯೂಟ ಮತ್ತು ಕ್ಷೀರಭಾಗ್ಯ ಕಾರ್ಯಕ್ರಮ ಆರಂಭದ ಮೊದಲ ವಾರದಿಂದಲೇ ಪ್ರಾರಂಭ ಮಾಡಲಾಗಿದೆ.
ಕೊರೋನಾ ಕಾರಣದಿಂದ ಸತತ ಎರಡು ವರ್ಷಗಳಿಂದ ಗುಣಮಟ್ಟದ ಶಿಕ್ಷಣದಿಂದ ವಂಚಿತರಾಗಿದ್ದ ಮಕ್ಕಳಿಗೆ ಶಿಕ್ಷಣ ಕಲಿಕೆಗಾಗಿ ಹೆಚ್ಚು ಹೆಚ್ಚು ಉತ್ಸಾಹಕರಾಗಲು ಶಿಕ್ಷಣ ಇಲಾಖೆ ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಂಡಿದೆ. ಜೊತೆಗೆ ಸರ್ಕಾರದಿಂದ ಮಕ್ಕಳಿಗೆ ನೀಡುತ್ತಿದ್ದ ಬಿಸಯೂಟ ಕಾರ್ಯಕ್ರಮ ಮತ್ತು ಕ್ಷೀರಭಾಗ್ಯ ಯೋಜನೆಗಳನ್ನ ಶಾಲೆ ಆರಂಭದ ಮೊದಲ ವಾರದಿಂದಲೇ ಶುರು ಮಾಡಲಾಗಿದೆ.
ಮೊದಲ ದಿನ ಮಕ್ಕಳಿಂದ ಸರಸ್ವತಿ ಪೂಜೆ; ಬೆಂಗಳೂರಿನ ಗೋಪಾಲ್ ರಾಮ್ ನಾರಾಯಣ್ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಹಸಿರು ತೋರಣಗಳಿಂದ ಮದುವಣಗಿತ್ತಿಯಂತೆ ಸಿಂಗಾರಗೊಂಡಿತ್ತು. ಮಕ್ಕಳಿಗೆ ಸಿಹಿ ತಿನಿಸುವ ಜೊತೆಗೆ ಪೆನ್ನು, ಮಾಸ್ಕ್, ಹೂ ಕೊಟ್ಟು ಶಿಕ್ಷಕರು ಸ್ವಾಗತ ಮಾಡಿದರು. ಕೋವಿಡ್ ಮಾರ್ಗ ಸೂಚಿಯಂತೆ ಮಕ್ಕಳು ಕೈಗಳನ್ನು ಸ್ಯಾನಿಟೈಸ್ ಮಾಡಿಕೊಂಡು, ಮಾಸ್ಕ್ ಧರಿಸಿ ಕೊಠಡಿಯೊಳಗೆ ಕೂತು ಪಾಠ ಕೇಳಿದರು. ಖುಷಿ ಖುಷಿಯಾಗಿ ಶಾಲೆಗೆ ಬಂದ ಮಕ್ಕಳು ಶಿಕ್ಷಕರು ನೀಡಿದ ಉಡುಗೊರೆ ಪಡೆದು ಸಂತಸಪಟ್ಟರು.
ಮೊದಲ ದಿನವೇ ಬಿಸಿಯೂಟ; ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿದಂತೆ ಶಾಲೆಯಲ್ಲಿ ಮಧ್ಯಾಹ್ನದ ಬಿಸಿಯೂಟ ಕಾರ್ಯಕ್ರಮ ಆರಂಭವಾಗಿದೆ. ಬೀದರ್ ಜಿಲ್ಲೆಯ ಬಾಲ್ಕಿ ತಾಲೂಕಿನ ಶ್ರೀ ಶಾಂತಲಿಂಗೇಶ್ವರ ಹಿರಿಯ ಪ್ರಾಥಮಿಕ ಶಾಲೆ ಖಟಕ್ ಚಿಂಚೋಳಿಯಲ್ಲಿ ಮಕ್ಕಳಿಗೆ ಊಟ ನೀಡಲಾಯಿತು.
ಮೊದಲ ದಿನ ಶಾಲೆಗೆ ಬಂದ ಮಕ್ಕಳ ಸಮ್ಮುಖದಲ್ಲಿಯೇ ಶಾಲಾ ಸಿಬ್ಬಂದಿ ಹಾಗೂ ಶಿಕ್ಷಕರು ಎಲ್ಲಾ ಒಟ್ಟಿಗೆ ಸೇರಿ ಶಾರದಾ ಪೂಜೆ ಮಾಡಿದ ಬಳಿಕ, ಮೈದಾನದಲ್ಲಿ ಮಕ್ಕಳಿಗೆ ಆಟ ಆಡಿಸುವ ಮಧ್ಯಾಹ್ನ ಬಿಸಿಯೂಟ ನೀಡಲಾಗಿದೆ.