ತುಮಕೂರಿನಲ್ಲಿ ಚಿರತೆ ದಾಳಿಗೆ ತಿಂಗಳಿಗೆ ಒಂದು ಬಲಿ
ತುಮಕೂರು, ಜನವರಿ.09: ತುಮಕೂರಿನಲ್ಲಿ ಚಿರತೆಗಳ ಹಾವಳಿ ದಿನೇ ದಿನೆ ಹೆಚ್ಚಾಗತ್ತಲೇ ಇದೆ. ಇಂದು ಅಂಥದ್ದೇ ಮತ್ತೊಂದು ಪ್ರಕರಣ ಜಿಲ್ಲೆಯಲ್ಲಿ ನಡೆದಿದ್ದು, ಐದು ವರ್ಷದ ಪುಟ್ಟ ಬಾಲಕ ವ್ಯಾಘ್ರದ ಕೈಗೆ ಸಿಕ್ಕು ಬಲಿಯಾಗಿದ್ದಾನೆ.
ತುಮಕೂರು ಜಿಲ್ಲೆ ಗುಬ್ಬಿ ತಾಲೂಕಿನ ಮಣಿಕುಪ್ಪೆಯಲ್ಲಿ ಚಿರತೆ ದಾಳಿ ನಡೆದಿದೆ. 5 ವರ್ಷದ ಸಮರ್ಥಗೌಡ ಎಂಬ ಬಾಲಕ ಚಿರತೆ ದಾಳಿಗೆ ಪ್ರಾಣ ತೆರುವಂತೆ ಆಗಿದೆ. ಕಳೆದ ಮೂರು ತಿಂಗಳಿನಲ್ಲಿ ಚಿರತೆ ಬಾಯಿಗೆ ಮೂವರು ಬಲಿಯಾಗಿದ್ದಾರೆ ಎಂದು ತಿಳಿದು ಬಂದಿದೆ.
ತುಮಕೂರಿನ ಬನ್ನಿಕುಪ್ಪೆ ಅರಣ್ಯದಲ್ಲಿ ಮಹಿಳೆಯನ್ನು ಕೊಂದು ತಿಂದಿರುವ ಚಿರತೆ
ಜಿಲ್ಲೆಯಲ್ಲಿ ನರಭಕ್ಷಕ ಚಿರತೆಯ ಕಾಟದಿಂದ ಜನರು ಆತಂಕದಲ್ಲೇ ದಿನ ಕಳೆಯುವಂತಾ ಸ್ಥಿತಿ ನಿರ್ಮಾಣವಾಗಿದೆ. ಕಳೆದ ಮೂರು ತಿಂಗಳಿನಿಂದ ಭಯದಲ್ಲೇ ಜೀವನ ಸಾಗಿಸುವಂತಾ ಪರಿಸ್ಥಿತಿ ಎದುರಾಗಿದೆ. ಪುಟ್ಟ ಕಂದಮ್ಮನನ್ನು ಕಳೆದುಕೊಂಡ ಹೆತ್ತವರು ಕಣ್ಣೀರು ಹಾಕುತ್ತಿದ್ದಾರೆ.
ಚಿರತೆ ಮೇಲೆ ಕಂಡಲ್ಲಿ ಗುಂಡಿಕ್ಕಲು ಆದೇಶ:
ತುಮಕೂರು ಜಿಲ್ಲೆಯ ಜನರಲ್ಲಿ ಭೀತಿಯನ್ನು ಹುಟ್ಟು ಹಾಕಿರುವ ಚಿರತೆಯನ್ನು ಕಂಡಲ್ಲಿ ಗುಂಡಿಕ್ಕಿ ಕೊಲ್ಲುವಂತೆ ಜಿಲ್ಲಾಡಳಿತವು ಈಗಾಗಲೇ ಆದೇಶವನ್ನು ಹೊರಡಿಸಿದೆ. ಆದರೆ, ಇದುವರೆಗೂ ಚಿರತೆಯನ್ನು ಸೆರೆ ಹಿಡಿಯುವಲ್ಲಿ ಅರಣ್ಯಾಧಿಕಾರಿಗಳು ವಿಫಲರಾಗಿದ್ದಾರೆ. ಈ ಹಿನ್ನೆಲೆಯಲ್ಲೇ ನರಭಕ್ಷಕ ಚಿರತೆಗೆ ಮತ್ತೊಂದು ಮಗು ಬಲಿಯಾಗಿದ್ದು, ಅರಣ್ಯಾಧಿಕಾರಿಗಳ ವಿರುದ್ಧ ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ತುಮಕೂರಿನ ಬನ್ನಿಕುಪ್ಪೆ ಅರಣ್ಯದಲ್ಲಿ ಮಹಿಳೆಯನ್ನು ಕೊಂದು ತಿಂದಿರುವ ಚಿರತೆ