ನೆರೆ ಪರಿಹಾರ ಬಂದಿಲ್ಲ: ಮೋದಿ ಎದುರೇ ಯಡಿಯೂರಪ್ಪ ಅಸಮಾಧಾನ
ತುಮಕೂರು, ಜನವರಿ 02: ಹೈಕಮಾಂಡ್ ಎದುರು ಯಡಿಯೂರಪ್ಪ ಮೌನವಾಗಿರುತ್ತಾರೆ. ಹೈಕಮಾಂಡ್ ನ ಕೈಗೊಂಬೆಯಾಗಿ ಯಡಿಯೂರಪ್ಪ ವರ್ತಿಸುತ್ತಾರೆ ಎಂದೆಲ್ಲಾ ವಿಪಕ್ಷಗಳು ಸಿಎಂ ಬಗ್ಗೆ ಟೀಕೆ ಮಾಡುತ್ತಲೇ ಇರುತ್ತಾರೆ. ಆದರೆ ಯಡಿಯೂರಪ್ಪ ಈ ಅಪವಾದಗಳಿಗೆ ವಿರುದ್ಧ ವರ್ತನೆಯನ್ನು ತೋರಿದ್ದಾರೆ.
ತುಮಕೂರಿನಲ್ಲಿ ಆಯೋಜಿಸಿದ್ದ 'ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆ' ಅಡಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಯಡಿಯೂರಪ್ಪ, 'ಕೇಂದ್ರದಿಂದ ಬರಬೇಕಾದ ನೆರೆ ಪರಿಹಾರ ಇನ್ನೂ ಬಂದಿಲ್ಲ' ಎಂದು ಹೇಳಿದರು.
ಪ್ರಧಾನಿ ಮೋದಿಯವರೇ, ನಿಮ್ಮನ್ನು ಸಿದ್ದಗಂಗಾ ಪವಿತ್ರಭೂಮಿ ಕ್ಷಮಿಸದು
'ನೆರೆಯಿಂದಾಗಿ ಕರ್ನಾಟಕಕ್ಕೆ ಸಾವಿರಾರು ಕೋಟಿ ನಷ್ಟವಾಗಿದೆ. ನೆರೆ ಪರಿಹಾರದ ಮೊದಲ ಹಂತದ ಪರಿಹಾರ ಕೇಂದ್ರದಿಂದ ಬಂದಿದೆ, ಆದರೆ ಎರಡನೇಯ ಹಂತದ ಪರಿಹಾರ ಇನ್ನೂ ಬಂದಿಲ್ಲ' ಎಂದು ಯಡಿಯೂರಪ್ಪ ವೇದಿಕೆ ಮೇಲೆ ಹೇಳಿದರು.
'ಎರಡನೇ ಹಂತದ ಪರಿಹಾರವನ್ನು ಆದಷ್ಟು ಶೀಘ್ರವಾಗಿ ಬಿಡುಗಡೆ ಮಾಡಬೇಕು ಎಂದು ಕೈ ಮುಗಿದು ಕೇಳಿಕೊಳ್ಳುತ್ತೇನೆ' ಎಂದು ಯಡಿಯೂರಪ್ಪ ಮೋದಿ ಅವರಿಗೆ ನೇರ ಮನವಿಯನ್ನು ಭಾಷಣದ ಮುಖಾಂತರ ಮಾಡಿದರು.
ಯಡಿಯೂರಪ್ಪ ಅವರು ತಮ್ಮ ಭಾಷಣ ಮುಗಿಸಿದ ಬಳಿಕ ಮೋದಿ ಅವರ ಬಳಿ ತೆರಳು ಚರ್ಚೆ ಮಾಡಿದರು. ನೆರೆ ಪರಿಹಾರದ ಬಗ್ಗೆಯೇ ಮೋದಿ ಅವರೊಂದಿಗೆ ಸಿಎಂ ಚರ್ಚಿಸಿದರು ಎನ್ನಲಾಗುತ್ತಿದೆ.
'ಉತ್ತರ ಕೊಡ್ರಿ ಮೋದಿಯವರೇ' ಎಂದು ಗಂಟು ಬಿದ್ದ ಸಿದ್ದರಾಮಯ್ಯ...
ಭಾಷಣದ ವೇಳೆ ಮತ್ತೊಂದು ಮನವಿಯನ್ನು ಮೋದಿ ಮುಂದಿಟ್ಟ ಯಡಿಯೂರಪ್ಪ, ರಾಜ್ಯಕ್ಕೆ 50,000 ಕೋಟಿ ಅನುದಾನವನ್ನು ನೀರಾವರಿಗಾಗಿ ಬಿಡುಗಡೆ ಮಾಡಬೇಕು ಎಂದು ಸಹ ಕೇಳಿದರು.
ಮೋದಿ ಅವರು ತಮ್ಮ ಭಾಷಣದಲ್ಲಿ ನೆರೆ ಪರಿಹಾರ ಬಿಡುಗಡೆ ವಿಷಯವಾಗಲಿ ಅಥವಾ ನೀರಾವರಿಗೆ ಹೆಚ್ಚುವರಿ ಅನುದಾನ ನೀಡುವ ವಿಷಯವಾಗಲಿ ಪ್ರಸ್ತಾಪ ಮಾಡಲೇ ಇಲ್ಲ.
ಯಡಿಯೂರಪ್ಪ ಸಿಎಂ ಆಗಿ ಅಧಿಕಾರ ಸ್ವೀಕಾರ ಮಾಡಿದ ಕೆಲವೇ ದಿನಗಳಲ್ಲಿ ರಾಜ್ಯದಲ್ಲಿ ಭಾರಿ ನೆರೆ ಬಂದಿತ್ತು. ನೆರೆಯಿಂದಾಗಿ ಕೋಟ್ಯಂತರ ರೂಪಾಯಿ ನಷ್ಟವಾಗಿತ್ತು.