ಜೆಡಿಎಸ್ ಪಕ್ಷದಲ್ಲಿ ಬಿ-ಫಾರಂ ಪಡೆಯಲು ದುಡ್ಡು ಕೊಡಬೇಕು: ಕೆ.ಎನ್ ರಾಜಣ್ಣ
ತುಮಕೂರು, ಸೆಪ್ಟೆಂಬರ್ 16: ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡರ ಜೆಡಿಎಸ್ ಪಕ್ಷದಲ್ಲಿ ಚುನಾವಣಾ ಟಿಕೆಟ್ ಪಡೆಯಲು ಅಭ್ಯರ್ಥಿಗಳೇ ದುಡ್ಡು ಕೊಡಬೇಕು ಎಂದು ಮಾಜಿ ಶಾಸಕ ಕೆ.ಎನ್ ರಾಜಣ್ಣ ಆರೋಪಿಸಿದ್ದಾರೆ.
ತುಮಕೂರು ಜಿಲ್ಲೆ ಶಿರಾ ವಿಧಾನ ಸಭಾ ಕ್ಷೇತ್ರದ ಉಪ ಚುನಾವಣೆ ಹಿನ್ನೆಲೆಯಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಕೆ.ಎನ್ ರಾಜಣ್ಣ, ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರ ಜೊತೆ ಮಾತನಾಡಿ ಬಂದಿದ್ದೇನೆ. ಶಿರಾ ಕ್ಷೇತ್ರದಲ್ಲಿ ಹಿಂದುಳಿದ ಸಮುದಾಯಕ್ಕೆ ಟಿಕೆಟ್ ನೀಡಬೇಕು ಅನ್ನುವುದು ನನ್ನ ಅಭಿಪ್ರಾಯ'' ಎಂದು ತಿಳಿಸಿದರು.
ಕ್ಷೇತ್ರ ಬದಲಾವಣೆ: ಅಡ್ಡಗೋಡೆಯ ಮೇಲೆ ದೀಪ ಇಟ್ಟ ಸಿದ್ದರಾಮಯ್ಯ
ಬಿಹಾರ ವಿಧಾನಸಭೆ ಚುನಾವಣೆಯ ಸಂದರ್ಭದಲ್ಲಿ ಶಿರಾ ಕ್ಷೇತ್ರಕ್ಕೂ ಉಪ ಚುನಾವಣೆ ನಡೆಯಬಹುದು ಎಂದು ಅಂದುಕೊಂಡಿದ್ದೇನೆ. ಅದಕ್ಕೂ ಮುಂಚೆಯೇ ನಡೆಯಬಹುದು ಹೇಳುವುದಕ್ಕೆ ಬರುವುದಿಲ್ಲ. ಟೆಕೆಟ್ ವಿಚಾರದಲ್ಲಿ ರಾಜ್ಯದ ಮುಖಂಡರು ಯಾವ ತೀರ್ಮಾನ ಮಾಡುತ್ತಾರೋ ಗೊತ್ತಿಲ್ಲ ಎಂದರು.
ಇದೇ ಸಂದರ್ಭದಲ್ಲಿ ಮಾತು ಮುಂದುವರೆಸಿ, "ನನಗೆ ಟಿಕೆಟ್ ಕೊಟ್ಟರೆ ಮಾತ್ರ ಸಾಲದು, ಪಕ್ಷದಿಂದ ದುಡ್ಡು ಕೊಡಬೇಕು. ದುಡ್ಡು ಇಲ್ಲದೇ ಟಿಕೆಟ್ ತೆಗೆದುಕೊಂಡು ಏನು ಮಾಡಲಿ" ಎಂದು ಮಧುಗಿರಿ ಮಾಜಿ ಶಾಸಕ ಕೆ.ಎನ್ ರಾಜಣ್ಣ ಪ್ರಶ್ನಿಸಿದರು.
ಯಾರು ದುಡ್ಡು ಕೊಡಬೇಕು ಎಂಬ ಪ್ರಶ್ನೆಗೆ ಉತ್ತರಿಸಿರುವ ಕೆ.ಎನ್ ರಾಜಣ್ಣ, ಪಕ್ಷವೇ ನಮಗೆ ದುಡ್ಡು ಕೊಡಬೇಕು. ಇದೇನು ದೇವೇಗೌಡರ ಪಕ್ಷನಾ, ಅಭ್ಯರ್ಥಿಗಳೇ ದುಡ್ಡು ಕೊಟ್ಟು ಬಿ-ಫಾರ್ಮ್ ತಗೊಂಡು ಬರೋಕೆ.? ಎಂದು ತಿಳಿಸಿದರು.
ಕಾಂಗ್ರೆಸ್ ಪಕ್ಷ ಟಿಕೆಟ್ ಕೊಟ್ಟ ಹಣವನ್ನು ಕೊಡಬೇಕು. ದೇವೇಗೌಡರ ಪಕ್ಷದಲ್ಲಿ ಟಿಕೆಟ್ ಪಡೆಯಲೂ ಅಭ್ಯರ್ಥಿಗಳು ದುಡ್ಡು ಕೊಡಬೇಕು. ಆದರೆ ಕಾಂಗ್ರೆಸ್ ಪಕ್ಷದಲ್ಲಿ ಟಿಕೆಟ್ ಕೊಟ್ಟು ಪಕ್ಷವೇ ಅಭ್ಯರ್ಥಿಗಳಿಗೆ ಹಣ ಕೊಡುತ್ತದೆ ಎಂದು ಮಾಜಿ ಶಾಸಕ ಕೆ.ಎನ್ ರಾಜಣ್ಣ ತಿಳಿಸಿದ್ದಾರೆ.
ಇತ್ತೀಚಿಗೆ ಮಾಜಿ ಶಾಸಕ ಕೆ.ಎನ್ ರಾಜಣ್ಣ ಅವರು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರನ್ನು ಭೇಟಿ ಮಾಡಿದ್ದರು. ಈ ಸಂದರ್ಭದಲ್ಲಿ ಶಿರಾ ಕ್ಷೇತ್ರದ ಟಿಕೆಟ್ ಕುರಿತು ಮಾತನಾಡಿದ್ದರು. ಶಿರಾ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಗೆ ಕೆ.ಎನ್ ರಾಜಣ್ಣ ಮತ್ತು ಮಾಜಿ ಸಚಿವ ಟಿ.ಬಿ ಜಯಚಂದ್ರ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ.