ಶಿರಾ: 20 ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ಬಿಜೆಪಿ ಗೆಲುವು ಸಾಧಿಸಲಿದೆ
ತುಮಕೂರು, ನವೆಂಬರ್ 3: ಶಿರಾ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ 20 ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ಗೆಲುವು ಸಾಧಿಸಲಿದ್ದಾರೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ ವಿಜಯೇಂದ್ರ ಅಭಿಪ್ರಾಯಪಟ್ಟರು.
ಮಂಗಳವಾರ ಮತದಾನದ ನಂತರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಯಾವ ಕ್ಷೇತ್ರದಲ್ಲಿ ಭಾರತೀಯ ಜನತಾ ಪಕ್ಷಕ್ಕೆ ಶಕ್ತಿ ಇರಲಿಲ್ಲವೋ, ಅಲ್ಲಿ ಗೆಲ್ಲುವ ಸವಾಲು ನಮ್ಮ ಮುಂದಿತ್ತು. ನಮ್ಮೆಲ್ಲಾ ಮುಖಂಡರ ಒಗ್ಗಟ್ಟಿನ ಫಲವಾಗಿ ಗೆಲುವು ನಿಶ್ಚಿತವಾಗಿದ್ದು, ಸಂತೃಪ್ತಿಯಿಂದ ಬೆಂಗಳೂರಿಗೆ ವಾಪಸಾಗುತ್ತಿದ್ದೇವೆ ಎಂದರು.
ಉಪ ಚುನಾವಣೆ; ಆರ್. ಆರ್. ನಗರಕ್ಕಿಂತ ಶಿರಾದಲ್ಲೇ ಹೆಚ್ಚು ಮತದಾನ
ಶೇ.80ಕ್ಕೂ ಹೆಚ್ಚು ಮತದಾನ ಮಾಡಿರುವ ಶಿರಾ ಕ್ಷೇತ್ರದ ಮತದಾರರು ಹಾಗೂ ನಮ್ಮ ಎಲ್ಲಾ ಮುಖಂಡರು, ಕಾರ್ಯಕರ್ತರನ್ನು ಅಭಿನಂದಿಸುವುದಾಗಿ ಹೇಳಿದರು. ಕಾಂಗ್ರೆಸ್ ಹಾಗೂ ಜೆಡಿಎಸ್, ಭಾರತೀಯ ಜನತಾ ಪಕ್ಷವನ್ನು ಲೆಕ್ಕಕ್ಕೆ ಇಟ್ಟುಕೊಂಡಿರಲಿಲ್ಲ. ವಾರದಿಂದ ಶಿರಾ ರಾಜಕೀಯ ಚಿತ್ರಣವೇ ಬದಲಾಗಿದ್ದು, ಫಲಿತಾಂಶ ಬಿಜೆಪಿ ಪರವಾಗಿರಲಿದೆ ಎಂದು ಭರವಸೆ ವ್ಯಕ್ತಪಡಿಸಿದರು.
ಶಿರಾ ಕ್ಷೇತ್ರದಲ್ಲಿ ಬದಲಾವಣೆಯ ಸುನಾಮಿ ಎದ್ದಿದ್ದು, ಮಹಿಳೆಯರು ಹಾಗೂ ಯುವಕರು ಬಿಜೆಪಿ ಪರವಾಗಿ ಮತ ನೀಡಿದ್ದಾರೆ, ವಿರೋಧಿಗಳ ಘಟಾನುಘಟಿ ನಾಯಕರ ಮಾತಿಗೆ ಜನರು ಮರಳಾಗಿಲ್ಲ, ಶಿರಾ ಕ್ಷೇತ್ರದ ಇತಿಹಾಸದಲ್ಲಿಯೇ ಅತೀ ಹೆಚ್ಚಿನ ಅಂತರ ಗೆಲುವನ್ನು ಬಿಜೆಪಿ ಅಭ್ಯರ್ಥಿ ಸಾಧಿಸಲಿದ್ದಾರೆ, ಹಳೆ ಮೈಸೂರು ಭಾಗದಲ್ಲಿ ಬಿಜೆಪಿ ಗೆಲುವು ಮುಂದುವರಿಸುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಸುದ್ದಿಗೋಷ್ಟಿಯಲ್ಲಿ ತುಮಕೂರು ನಗರ ಶಾಸಕ ಜಿ.ಬಿ ಜ್ಯೋತಿಗಣೇಶ್, ಬಿಜೆಪಿ ಜಿಲ್ಲಾಧ್ಯಕ್ಷ ಬಿ.ಸುರೇಶ್ ಗೌಡ, ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ್ ಸೇರಿದಂತೆ ಮತ್ತಿತರರು ಇದ್ದರು.