20-30 ಕೋಟಿ ನೀಡಿದ್ದರೆ ಮೈತ್ರಿ ಸರಕಾರ ಉಳಿಸಬಹುದಿತ್ತು: ಎಚ್ ಡಿ ಕುಮಾರಸ್ವಾಮಿ
ನೊಣವಿನಕೆರೆ (ತಿಪಟೂರು ತಾ., ತುಮಕೂರು), ಸೆಪ್ಟೆಂಬರ್ 9: "ಇನ್ನು ನಾಲ್ಕು ತಿಂಗಳು ಮಾತ್ರ ಈಗಿನ ರಾಜ್ಯ ಸರಕಾರ ಅಸ್ತಿತ್ವದಲ್ಲಿ ಇರುತ್ತದೆ. ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಬರುವಾಗ ನಾನು ಖುಷಿಯಿಂದ ಬಂದೆ. ಅಧಿಕಾರ ಉಳಿಸಿಕೊಳ್ಳಬೇಕು ಅಂದಿದ್ದರೆ ನನಗೆ ಅದ್ಯಾವ ಲೆಕ್ಕವೂ ಆಗಿರಲಿಲ್ಲ" ಎಂದು ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಸೋಮವಾರ ಹೇಳಿದರು.
ಸಮುದಾಯ ಭವನ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಾನು ಪಾಪದ ಹಣ ಸಂಗ್ರಹ ಮಾಡಿ, 20-30 ಕೋಟಿ ರುಪಾಯಿ ನೀಡಿದ್ದರೆ ಸರಕಾರ ಉಳಿಸಬಹುದಿತ್ತು. ಅದರ ಅವಶ್ಯಕತೆ ಇಲ್ಲ. ನನಗೆ ದೇವರು ಹಾಗೂ ನೀವು ಕೊಟ್ಟ ಅಧಿಕಾರ ಇದೆ ಎಂದು ವೇದಿಕೆಯಲ್ಲೇ ಇದ್ದ ಉಪ ಮುಖ್ಯಮಂತ್ರಿ ಅಶ್ವಥ್ ನಾರಾಯಣ್ ಗೆ ಟಾಂಗ್ ಕೊಟ್ಟರು.
"ಕಾಂಗ್ರೆಸ್ ನಲ್ಲಿರುವ ಉತ್ತಮ ನಾಯಕ, ಮಹಾನ್ ರಾಜಕಾರಣಿ ಡಿಕೆಶಿ"
ಮುಖ್ಯಮಂತ್ರಿ ಸ್ಥಾನದಿಂದ ಇಳಿದು ಬರುವಾಗ ಆರೂವರೆ ಸಾವಿರ ಕೋಟಿ ರುಪಾಯಿ ಖಜಾನೆಯಲ್ಲಿಟ್ಟಿದ್ದೆ. ನಾನು ಮನೆಯಲ್ಲಿ ಹೆದರಿಕೊಂಡು ಕೂರಲ್ಲ. ನಿಮಗಾಗಿ ಹೋರಾಟ ಮಾಡ್ತೀನಿ. ಸಾಲಮನ್ನಾ ಬಗ್ಗೆ ಪುಸ್ತಕ ಪ್ರಿಂಟ್ ಮಾಡಲಾಗುತ್ತಿದೆ. ರೈತರ ಹಣ ದೋಖಾ ಮಾಡಲಿಲ್ಲ. ಪ್ರವಾಹ ಬಂದಿದೆ, ಜನರು ಬೀದಿಯಲ್ಲಿ ಮಲಗಿದ್ದಾರೆ. ನಾನು ಮುಖ್ಯಮಂತ್ರಿ ಆಗಿದ್ದಾಗ ಪ್ರವಾಹ ಆಗಿದ್ದರೆ, ಎಲ್ಲಿದ್ದೀಯಪ್ಪಾ ಕುಮಾರ ಅನ್ನೋರು. ಆದರೆ ಇವತ್ತು ಮಾತೇ ಇಲ್ಲ ಎಂದರು.
ದೇವೇಗೌಡರು ಅಧಿಕಾರದಲ್ಲಿ ಇರಲಿ, ಬಿಡಲಿ ಅವರ ಮೇಲೆ ನಿಮಗೆ ಪ್ರೀತಿ ಇದ್ದೇ ಇದೆ. ಇದಕ್ಕೆ ಅಭಿನಂದನೆ. ಅವರ ಜೊತೆ ಇದ್ದವರು ಕೆಲವರು ಬೆನ್ನಿಗೆ ಚೂರಿ ಹಾಕಿದರು. ಆದರೂ ಸಮಾಜದ ಪ್ರೀತಿ ಕಡಿಮೆಯಾಗಲಿಲ್ಲ. ಒಂದು ಕಾಲದಲ್ಲಿ ನಾವು ಹಾಗೂ ಡಿ. ಕೆ. ಶಿವಕುಮಾರ್ ಹೋರಾಟ ಮಾಡಿದೆವು. ಇವತ್ತು ಜೊತೆಯಲ್ಲಿ ಇದ್ದೀವಿ ಎಂದು ಕುಮಾರಸ್ವಾಮಿ ಹೇಳಿದರು.
ಉಪಮುಖ್ಯಮಂತ್ರಿ ಅಶ್ವಥ್ ನಾರಾಯಣ್ ಮಾತನಾಡಿ, ಒಬ್ಬ ನಾಯಕ ಯಾವುದಕ್ಕಾಗಿ ಇರುತ್ತಾನೆ ಎಂಬುದು ಮುಖ್ಯವಾದ ವಿಚಾರ. ನಾಯಕ ಆದವನು ಎಲ್ಲವನ್ನೂ ತ್ಯಾಗ ಮಾಡಬೇಕು. ಸರ್ವಸ್ವವನ್ನೂ ತ್ಯಾಗ ಮಾಡಿದಾಗ ಮಾತ್ರ ಜತೆಗೆ ಇರುವವರು ಅವರ ಬೆಂಬಲವನ್ನು ನಮಗೆ ಕೊಡುತ್ತಾರೆ ಎನ್ನುವ ಮೂಲಕ ಪರೋಕ್ಷವಾಗಿ ಅತೃಪ್ತರನ್ನು ಸರಿಯಾಗಿ ಬಳಸಿಕೊಳ್ಳಲಿಲ್ಲ ಎಂದರು.
ಒಬ್ಬ ನಾಯಕ ಮೈ ಮರೆಯುವ ಕೆಲಸ ಮಾಡಬಾರದು. ಸಮಾಜಕ್ಕಾಗಿ ಬದುಕಿದರೆ ಮಾತ್ರ ಉತ್ತಮ ನಾಯಕನಾಗಿ ಇರಲು ಸಾಧ್ಯ. ನಾನು ಈ ಸ್ಥಾನದಲ್ಲಿ ಇರುವುದು ಜನರಿಗೆ ಒಳ್ಳೆಯದು ಮಾಡುವುದಕ್ಕೆ ಎಂದರು. ಈ ವೇಳೆ ಎಚ್. ಡಿ. ಕುಮಾರಸ್ವಾಮಿ ಅವರ ಪರವಾಗಿ ಬೆಂಬಲಿಗರು ಘೋಷಣೆ ಕೂಗಿದರು.