ನಡೆಯದ ಪುಂಡನ ದಬ್ಬಾಳಿಕೆ; ರೈತರಿಗೆ ಮರಳಿತು ಬಗರ್ಹುಕುಂ ಜಮೀನು
ತುಮಕೂರು, ಜೂ. 8: ಶಿರಾ ತಾಲೂಕು ಬುಕ್ಕಾಪಟ್ಟಣ ಹೋಬಳಿಯ ಹೊನ್ನೇನಹಳ್ಳಿ ಗ್ರಾಮದ ಸರ್ವೆ ನಂಬರ್ 61 ರಲ್ಲಿ ಬಗರ್ ಹುಕುಂ ಸಾಗುವಳಿ ಸಮಿತಿಯಲ್ಲಿ ಮುಂಜೂರಾದ ಫಲಾನುಭವಿ ರೈತರನ್ನು ಸಾಗುವಳಿ ಮಾಡಲು ಬಿಡದೆ ಹೆದರಿಸಿ, ದಬ್ಬಾಳಿಕೆಯಿಂದ ಭೀಮರಾಜು ಉರುಫ್ ಭೀಮಾ ಬೋವಿ ಬಿನ್ ಹನುಮಂತ ಭೋವಿ ಎಂಬಾತನು ವಶಪಡಿಸಿಕೊಂಡಿದ್ದನು.
ಸುಮಾರು ನಾಲ್ಕು ವರ್ಷ ವರ್ಷಗಳಿಂದ ರೈತರು ಸಾಗುವಳಿ ಮಾಡಲು ಹೋದಾಗ ದೌರ್ಜನ್ಯಕ್ಕೊಳಗಾಗಿ ನ್ಯಾಯಕ್ಕಾಗಿ ಜನಪ್ರತಿನಿಧಿಗಳನ್ನು ಹಾಗೂ ಅಧಿಕಾರಿಗಳನ್ನು ಕಂಡರೂ ಯಾವುದೇ ಪ್ರಯೋಜನವಾಗಿರಲಿಲ್ಲ. ತಹಶೀಲ್ದಾರ್ ಮಮತಾರವರಿಗೆ ರೈತರು ದೂರು ನೀಡಿದಾಗ ಅದನ್ನು ದಾಖಲಿಸಿಕೊಂಡು ಈತನನ್ನು ಕರೆಸಿ ವಿಚಾರಣೆ ನಡೆಸಿ ದಿನಾಂಕ 7 -6 -2022 ರಂದು ಬೆಳಿಗ್ಗೆ 9.30 ರಿಂದ ಡಿವೈಎಸ್ಪಿ ಸಹಯೋಗದೊಂದಿಗೆ ತಹಸೀಲ್ದಾರ್ ಮಮತಾ ದಿಡೀರ್ ಕಾರ್ಯಾಚರಣೆ ನಡೆಸಿ, ಒತ್ತುವರಿ ಜಮೀನನ್ನು ತೆರವು ಮಾಡಿಸಿ ಮಂಜೂರು ಆಗಿರುವ ಜಮೀನನ್ನು ಅಳತೆ ಮಾಡಿ 18 ಎಕರೆ ಜಮೀನನ್ನು 9 ಫಲಾನುಭವಿಗಳಿಗೆ ಹಸ್ತಾಂತರ ಮಾಡಿದ್ದಾರೆ.
ಸ್ಮಶಾನ ಜಾಗವಿಲ್ಲದೇ ರಸ್ತೆಯಲ್ಲೇ ಶವ ಇಟ್ಟುಕೊಂಡು ಕೂತ ದಲಿತರು
ಸರ್ಕಾರಿ ಜಮೀನು ಒತ್ತುವರಿ: ಪ್ರಕರಣ ದಾಖಲು
ರೈತರ ಮೇಲೆ ದಬ್ಬಾಳಿಕೆ ಮಾಡಿ ಸ್ವತಃ ತಾನೇ ಸುಳ್ಳು ಕೇಸ್ ದಾಖಲಿಸುತ್ತಿದ್ದ ಭೀಮರಾಜು ಮತ್ತು ಕುಟುಂಬದವರ ಮೇಲೆ ಪ್ರಕರಣ ಇದೀಗ ದಾಖಲಾಗಿದೆ. ಇದೇ ವ್ಯಕ್ತಿ ಒತ್ತುವರಿ ಮಾಡಿಕೊಂಡಿದ್ದ ಜಮೀನಿನಲ್ಲಿ ಕಾಡು ಪ್ರಾಣಿಗಳ ತಲೆ ಮತ್ತು ಮೂಳೆ ಸಿಕ್ಕಿವೆ.ಪ್ರಾಣಿಗಳನ್ನು ಬೇಟೆ ಆಡಲು ಬಳಸುತ್ತಿದ್ದ ಸ್ಫೋಟಕ ವಸ್ತುಗಳು ಹಾಗೂ ಆಯುಧಗಳು ದೊರಕಿವೆ. ಇದಕ್ಕೆ ಸಂಬಂಧಿಸಿದಂತೆ ಆತನ ಮೇಲೆ ಅರಣ್ಯ ಇಲಾಖೆಯಿಂದ ಮತ್ತು ಪೊಲೀಸ್ ಇಲಾಖೆಯಿಂದ ಪ್ರತ್ಯೇಕ ಪ್ರಕರಣ ದಾಖಲು ಮಾಡಲಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಸರ್ಕಾರಿ ಜಮೀನನ್ನು ಒತ್ತುವರಿ ಮಾಡುವ ಭೂ ಮಾಫಿಯಾದವರಿಗೆ ತಹಶೀಲ್ದಾರ್ ಮತ್ತು ಡಿವೈಎಸ್ಪಿ ತಂಡ ಕಾನೂನಿನ ಅಡಿಯಲ್ಲಿ ಪಾಠ ಕಲಿಸಿದ್ದಾರೆ.
ಭೂ ಮಾಫಿಯಾ ಮಾಡುವವರಿಗೆ ಎಚ್ಚರಿಕೆ
ಈ ಮೂಲಕ ತಾಲ್ಲೂಕಿನಲ್ಲಿ ಭೂ ಮಾಫಿಯಾ ಮಾಡುವವರಿಗೆ ಎಚ್ಚರಿಕೆ ಗಂಟೆಯಾಗಿದೆ. ರೈತರ ಪರವಾಗಿ ಕೆಲಸ ನಿರ್ವಹಿಸಿ ಅವರಿಗೆ ನ್ಯಾಯ ಕೊಡಿಸಲು ಮುಂದಾದ ಶಿರಾ ತಾಲ್ಲೂಕು ದಂಡಾಧಿಕಾರಿ ಹಾಗೂ ತಹಸೀಲ್ದಾರ್ ಮಮತ.ಎಂ ಹಾಗೂ ಡಿವೈಎಸ್ಪಿ ಕುಮಾರಪ್ಪ ಅವರ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಒತ್ತುವರಿ ಭೂಮಿ ತೆರವು ಕಾರ್ಯಾಚರಣೆಯಲ್ಲಿ ಸಿಪಿಐ ರವಿಕುಮಾರ್, ಪಿಎಸ್ಐ ಭಾಸ್ಕರ್, ಪಿಎಸ್ಐ ಫಾಲಾಕ್ಷ ಪ್ರಭು, ಗ್ರೇಡ್ 2 ತಹಸೀಲ್ದಾರ್ ಮಂಜುನಾಥ್ ಮತ್ತು ರಾ.ನಿ ಉಮೇಶ್ ,ಗ್ರಾಮ ಲೆಕ್ಕಿಗರು ಸರ್ವೆಯರ್ ಹಾಜರಿದ್ದರು.
(ಒನ್ಇಂಡಿಯಾ ಸುದ್ದಿ)