ತುಮಕೂರು ವಾಪಸ್ ಕೊಡಿ: ದೇವೇಗೌಡರಿಗೆ ಪರಮೇಶ್ವರ್ ಮನವಿ
Recommended Video
ಬೆಂಗಳೂರು, ಮಾರ್ಚ್ 15: ತುಮಕೂರು ಕ್ಷೇತ್ರವನ್ನು ವಾಪಸ್ ಬಿಟ್ಟುಕೊಡುವಂತೆ ಜೆಡಿಎಸ್ ವರಿಷ್ಠ ದೇವೇಗೌಡ ಅವರ ಬಳಿ ಮನವಿ ಮಾಡಿದ್ದೇನೆ ಎಂದು ಉಪಮುಖ್ಯಮಂತ್ರಿ, ತುಮಕೂರು ಉಸ್ತುವಾರಿ ಸಚಿವ ಜಿ.ಪರಮೇಶ್ವರ್ ಹೇಳಿದ್ದಾರೆ.
ಇದೇ ವಿಷಯ ಚರ್ಚಿಸಲು ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿ ಆನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಪರಮೇಶ್ವರ್, ದೇವೇಗೌಡರೇ ತುಮಕೂರಿನಲ್ಲಿ ಸ್ಪರ್ಧಿಸುವುದಾದರೆ ನಮ್ಮ ಅಭ್ಯಂತರವಿಲ್ಲ ಆದರೆ ಬೇರೆಯವರು ಸ್ಪರ್ಧಿಸುವುದಾದರೆ ತುಮಕೂರು ನಮಗೇ ಬಿಟ್ಟುಕೊಡಬೇಕು ಎಂದು ಕೇಳಿರುವುದಾಗಿ ಅವರು ಹೇಳಿದ್ದಾರೆ.
ತುಮಕೂರು 'ಕೈ' ಬಿಟ್ಟಿದ್ದಕ್ಕೆ ನಾಯಕರಲ್ಲಿ ಅತೃಪ್ತಿ, ಹೈಕಮಾಂಡ್ಗೆ ದೂರು ಸಾಧ್ಯತೆ
ಎಲ್ಲಾ ಹಾಲಿ ಸಂಸದರಿಗೆ ಟಿಕೆಟ್ ನೀಡಬೇಕು ಎಂದು ಸ್ಕ್ರೀನಿಂಗ್ ಕಮಿಟಿಯಲ್ಲಿ ನಿರ್ಧಾರ ಮಾಡಿಕೊಂಡಿದ್ದೆವು, ಆದರೆ ದೇವೇಗೌಡ ಅವರು ರಾಹುಲ್ ಗಾಂಧಿ ಅವರೊಂದಿಗೆ ಸಭೆ ನಡೆಸಿ ತುಮಕೂರನ್ನು ತಮಗೆ ಪಡೆದುಕೊಂಡಿದ್ದಾರೆ ಎಂದು ಪರಮೇಶ್ವರ್ ಹೇಳಿದ್ದಾರೆ.
'ದೇವೇಗೌಡರೇ ಸ್ಪರ್ಧಿಸುವುದಾದರೆ ಅಭ್ಯಂತರವಿಲ್ಲ'
ತುಮಕೂರಿನಲ್ಲಿ ಹಾಲಿ ಸಂಸದರಿದ್ದಾರೆ, ಅವರು ಜನಮೆಚ್ಚುಗೆ ಗಳಿಸಿದ್ದಾರೆ ಅವರಿಗೆ ಟಿಕೆಟ್ ನೀಡುವುದು ಸರಿಯಾದ ಕ್ರಮ. ದೇವೇಗೌಡ ಅವರೇ ತುಮಕೂರಿನಿಂದ ಸ್ಪರ್ಧಿಸುವುದಾದರೆ ಸ್ಪರ್ಧಿಸಲಿ ನಮ್ಮ ಅಭ್ಯಂತರ ಇಲ್ಲ ಆದರೆ ಬೇರೆಯವರು ಸ್ಪರ್ಧಿಸುವುದಾದರೆ ಹಾಲಿ ಸಂಸದ ಮುದ್ದಹನುಮೇಗೌಡ ಅವರಿಗೆ ಟಿಕೆಟ್ ನೀಡಬೇಕು ಎಂದು ಪರಮೇಶ್ವರ್ ಹೇಳಿದ್ದಾರೆ.
ಸೀಟು ಹಂಚಿಕೆ ಬಳಿಕ ಬದಲಾದ ದೇವೇಗೌಡರ ಚುನಾವಣಾ ಲೆಕ್ಕಾಚಾರ
ಖರ್ಗೆ ಜತೆ ಪರಮೇಶ್ವರ್ ಮಾತುಕತೆ
ಹಿರಿಯ ನಾಯಕ ಮಲ್ಲಿಕಾರ್ಜುನ್ ಖರ್ಗೆ ಅವರ ಬಳಿ ಇದೇ ವಿಷಯವನ್ನು ಪರಮೇಶ್ವರ್ ಅವರು ಮಾತನಾಡಿದ್ದು, ಇದನ್ನು ಹೈಕಮಾಂಡ್ ಗಮನಕ್ಕೆ ತಂದು ತುಮಕೂರನ್ನು ವಾಪಸ್ ಪಡೆಯುವ ಪ್ರಯತ್ನವನ್ನು ಪರಮೇಶ್ವರ್ ಆರಂಭಿಸಿದ್ದಾರೆ.
ತುಮಕೂರಿನಿಂದ ಕೆ.ಎನ್.ರಾಜಣ್ಣ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕೆ?
ಸಿದ್ದರಾಮಯ್ಯ ವಿರುದ್ಧವೂ ಅಸಮಾಧಾನ
ಮೈತ್ರಿ ಸೂತ್ರದ ಪ್ರಕಾರ ಕಾಂಗ್ರೆಸ್ಗೆ ಸೇರಬೇಕಾಗಿದ್ದ ತುಮಕೂರು ಕ್ಷೇತ್ರವು ಜೆಡಿಎಸ್ ಪಾಲಾಗುವಲ್ಲಿ ಸಿದ್ದರಾಮಯ್ಯ ಅವರ ಪಾತ್ರವೂ ಇದೆ ಹಾಗಾಗಿ ಅವರ ವಿರುದ್ಧವೂ ಖರ್ಗೆ ಮತ್ತು ಪರಮೇಶ್ವರ್ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.
ಸಿದ್ದರಾಮಯ್ಯ ವಿರುದ್ಧವೂ ಪ್ರತಿಭಟನೆ
ತುಮಕೂರು ಕ್ಷೇತ್ರವನ್ನು ಜೆಡಿಎಸ್ಗೆ ಬಿಟ್ಟುಕೊಟ್ಟಿದ್ದಕ್ಕೆ ತುಮಕೂರಿನಲ್ಲಿ ಕಾಂಗ್ರೆಸ್ ಕಾರ್ಯಕರ್ತರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಪ್ರತಿಭಟನೆಗಳನ್ನು ನಡೆಸುತ್ತಿದ್ದಾರೆ. ಸಿದ್ದರಾಮಯ್ಯ ವಿರುದ್ಧ ಹಾಗೂ ಜೆಡಿಎಸ್ ವರಿಷ್ಠರ ವಿರುದ್ಧವೂ ತುಮಕೂರಿನಲ್ಲಿ ಆಕ್ರೋಶದ ಮಾತುಗಳು ಕೇಳಿಬರುತ್ತಿವೆ.