ತುಮಕೂರಿನಲ್ಲಿ ಎಎಸ್ಐನಿಂದ ಅತ್ಯಾಚಾರ: ಸೆರೆ, ನ್ಯಾಯಾಂಗ ಬಂಧನ
ತುಮಕೂರು, ಜನವರಿ 17: ಮಾನಸಿಕ ಅಸ್ವಸ್ಥೆಯ ಮೇಲೆ ಅತ್ಯಾಚಾರ ನಡೆಸಿದ ಆರೋಪಿ ಎಎಸ್ಐ ಉಮೇಶ್, ಈ ಕೃತ್ಯಕ್ಕೆ ಸಹಕರಿಸಿದ ಬೊಲೆರೋ ವಾಹನದ ಚಾಲಕ ಈಶ್ವರ ಎಂಬಾತನನ್ನು ಪೊಲೀಸರು ಸೆರೆ ಹಿಡಿದು ಸೋಮವಾರ ಸಂಜೆ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು, ನ್ಯಾಯಾಧೀಶರ ಆದೇಶದ ಮೇರೆಗೆ ಜ.30ರ ವರೆಗೆ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಯಿತು.
ನಗರದ ಹೊರವಲಯದಲ್ಲಿ ತನಗೆ ಪರಿಚಯವಿದ್ದ ಕಲ್ಲು ಕ್ವಾರಿಯ ಮಾಲೀಕನಿಗೆ ಕರೆ ಮಾಡಿ ಆತನ ಬೊಲೆರೊ ವಾಹನವನ್ನು ತರಿಸಿಕೊಂಡು ಎಎಸ್ಐ ಉಮೇಶ್ ಅದೇ ಕಾರಿನಲ್ಲಿ ಮಾನಸಿಕ ಅಸ್ವಸ್ಥೆಯ ಮೇಲೆ ಅತ್ಯಾಚಾರ ಎಸಗಿದ್ದ, ಆರೋಪಿ ಎಎಸ್ಐ ಉಮೇಶ್ ಅನ್ನು ಬಂಧಿಸಿದ ಪೊಲೀಸರು ವಾಹನ ಚಾಲಕ ಈಶ್ವರ್ ಬಂಧಿಸಿ ವಿಚಾರಣೆ ಮಾಡಿದ್ದರು. ನಂತರ ಠಾಣೆಯಿಂದ ಎರಡನೇ ಹೆಚ್ಚುವರಿ ನ್ಯಾಯಾಲಯ ಹಾಗೂ ಜೆಎಂಎಫ್ ಹಿರಿಯ ಶ್ರೇಣಿ ನ್ಯಾಯಾಲಯಕ್ಕೆ ಸೋಮವಾರ ಸಂಜೆ ಹಾಜರುಪಡಿಸಿದ್ದು ನ್ಯಾಯಾಧೀಶ ವೇದಮೂರ್ತಿಯವರು ಜನವರಿ 30ರ ವರೆಗೆ ನ್ಯಾಯಾಂಗ ಬಂಧನದಲ್ಲಿರಲು ಆದೇಶಿದರು.[ತುಮಕೂರಿನಲ್ಲಿ 4 ವರ್ಷದ ಬಾಲಕಿ ಮೇಲೆ ಅತ್ಯಾಚಾರ]
ಇನ್ನು ಸಂತ್ರಸ್ತೆ ಹಾಗೂ ಅವರ ಕುಟುಂಬ ವರ್ಗದವರನ್ನು ರಾಜ್ಯ ಮಹಿಳಾ ಮತ್ತು ಮಕ್ಕಳ ದೌರ್ಜನ್ಯ ತಡೆ ಸಮಿತಿ ಅಧ್ಯಕ್ಷ ವಿ.ಎಸ್. ಉಗ್ರಪ್ಪ ಮತ್ತು ಸದಸ್ಯರು ಭೇಟಿ ಮಾಡಿ ಸಾಂತ್ವನ ಹೇಳಿದ್ದು, ಸಂತ್ರಸ್ತೆಗೆ ₹ 3 ಲಕ್ಷ ಪರಿಹಾರ ನೀಡಲು ಜಿಲ್ಲಾಧಿಕಾರಿಗೆ ಸೂಚಿಸಿರುವುದಾಗಿ ತಿಳಿಸಿದರು.
ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿಬಾಯಿ ಭೇಟಿ ನೀಡಿ ಮಹಿಳೆಗೆ ಸಾಂತ್ವನ ಹೇಳಿದ್ದು, 'ಆರೋಪಿ ಎಎಎಸ್ಐ ಉಮೇಶ್ನನ್ನು ಸೇವೆಯಿಂದ ಸರ್ಕಾರ ವಜಾಗೊಳಿಸಬೇಕು' ಎಂದು ಒತ್ತಾಯಿಸಿದರು.
ಈ ಪ್ರಕರಣ ಸಂಬಂಧ ಎಎಸ್ಐ ಉಮೇಶ್ ಅವರನ್ನು ಸೇವೆಯಿಂದ ವಜಾಗೊಳಿಸಲು ಕ್ರಮ ಕೈಗೊಳ್ಳಲಾಗಿದೆ' ಎಂದು ಕೇಂದ್ರ ವಲಯ ಐಜಿಪಿ ಸೀಮಂತ್ ಕುಮಾರ್ ತಿಳಿಸಿದ್ದು, ಸಂತ್ರಸ್ತೆಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ ವರದಿ ಬಂದ ಮೇಲೆ ಸತ್ಯ ಹೊರಬೀಳಲಿದೆ, ಇನ್ನು ಜೀಪಿನ ಚಾಲಕ ಸಹ ಹಿರಿಯ ಅಧಿಕಾರಿಗಳಿಗೆ ಯಾವುದೇ ಮಾಹಿತಿ ನೀಡಿರಲಿಲ್ಲ ಹೀಗಾಗಿ ಚಾಲಕನ ವಿರುದ್ಧವೂ ಕ್ರಮ ಕೈಗೋಳ್ಳುತ್ತೇವೆ ಎಂದರು.