ತುಮಕೂರು; ಕಾಂಗ್ರೆಸ್ ಸೇರುವುದಾಗಿ ಜೆಡಿಎಸ್ ನಾಯಕರ ಘೋಷಣೆ
ತುಮಕೂರು, ಅಕ್ಟೋಬರ್ 26; ಗುಬ್ಬಿ ಕ್ಷೇತ್ರದ ಜೆಡಿಎಸ್ ಶಾಸಕ ಎಸ್. ಆರ್. ಶ್ರೀನಿವಾಸ್ ಜೆಡಿಎಸ್ ಪಕ್ಷದಿಂದ ದೂರವಾಗುತ್ತಿದ್ದಾರೆ. ಜಿಲ್ಲೆಯಲ್ಲಿ ಪಕ್ಷಕ್ಕೆ ಮತ್ತೊಂದು ಹಿನ್ನಡೆಯಾಗಿದ್ದು, ಮಾಜಿ ಸಚಿವ ಚೆನ್ನಿಗಪ್ಪ ಪುತ್ರರು ಕಾಂಗ್ರೆಸ್ ಸೇರುವುದಾಗಿ ಘೋಷಣೆ ಮಾಡಿದ್ದಾರೆ.
ಕೊರಟಗೆರೆಯ ಬೈಚೇನಹಳ್ಳಿ ಆಂಜನೇಯಸ್ವಾಮಿ ದೇವಾಲಯದಲ್ಲಿ ಮಾತನಾಡಿದ ಚೆನ್ನಿಗಪ್ಪ ಪುತ್ರರಾದ ಅರುಣ್ ಕುಮಾರ್ ಮತ್ತು ವೇಣುಗೋಪಾಲ್ ಡಿಸೆಂಬರ್ನಲ್ಲಿ ಕಾಂಗ್ರೆಸ್ ಪಕ್ಷವನ್ನು ಸೇರುತ್ತೇವೆ ಎಂದು ಘೋಷಣೆ ಮಾಡಿದ್ದಾರೆ.
ಮೋಸಕ್ಕೆ ಬೇಸತ್ತು ಜೆಡಿಎಸ್ ಗೂಡು ಬಿಡುವರೇ ಗುಬ್ಬಿ ವಾಸಣ್ಣ !
ಕಾಂಗ್ರೆಸ್ ಪಕ್ಷ ಸೇರುವ ಜೊತೆಗೆ ಕೊರಟಗೆರೆಯಲ್ಲಿ ಮಾಜಿ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ ಗೆಲುವಿಗೆ ಶ್ರಮಿಸುತ್ತೇವೆ ಎಂದು ಹೇಳಿದ್ದಾರೆ. ಇದರಿಂದಾಗಿ ತುಮಕೂರು ಜಿಲ್ಲೆಯಲ್ಲಿ ಜೆಡಿಎಸ್ ಪಕ್ಷಕ್ಕೆ ಮತ್ತೊಂದು ಹಿನ್ನಡೆಯಾಗಿದೆ.
ಕಾಂಗ್ರೆಸ್ ಸೇರುವುದಾಗಿ ಘೋಷಿಸಿದ ಪ್ರಭಾವಿ ಜೆಡಿಎಸ್ ನಾಯಕ!
ಚೆನ್ನಿಗಪ್ಪ ಪುತ್ರ ಡಿ. ಸಿ. ಗೌರಿಶಂಕರ್ ತುಮಕೂರು ಗ್ರಾಮಾಂತರ ಕ್ಷೇತ್ರದ ಜೆಡಿಎಸ್ ಶಾಸಕರು. ಅವರ ಸಹೋದರರಾದ ಅರುಣ್ ಕುಮಾರ್ ಮತ್ತು ವೇಣುಗೋಪಾಲ್ ಕಾಂಗ್ರೆಸ್ ಸೇರುವುದಾಗಿ ಘೋಷಣೆ ಮಾಡಿದ್ದು, ಕುತೂಹಲಕ್ಕೆ ಕಾರಣವಾಗಿದೆ.
ಶಾಸಕರಿಗೇ ತಿಳಿಯದೇ ಗುಬ್ಬಿಯಲ್ಲಿ ಜೆಡಿಎಸ್ ಸಮಾವೇಶ!
ತುಮಕೂರು ಜಿಲ್ಲೆಯಲ್ಲಿ ಹಲವಾರು ಜೆಡಿಎಸ್ ನಾಯಕರು ಕಾಂಗ್ರೆಸ್ ಸೇರಲಿದ್ದಾರೆ. ಎಂಎಲ್ಸಿ, ಜೆಡಿಎಸ್ ನಾಯಕ ಬೆಮಲ್ ಕಾಂತರಾಜು, ಎಸ್. ಆರ್. ಶ್ರೀನಿವಾಸ್ ಸಹ ಕಾಂಗ್ರೆಸ್ ಸೇರಲಿದ್ದಾರೆ ಎಂಬ ಸುದ್ದಿಗಳು ಹಬ್ಬಿದೆ.
ಎಸ್. ಆರ್. ಶ್ರೀನಿವಾಸ್ ಗೈರು; ಗುಬ್ಬಿ ಕ್ಷೇತ್ರದ ಜೆಡಿಎಸ್ ಶಾಸಕ ಎಸ್. ಆರ್. ಶ್ರೀನಿವಾಸ ಸಹ ಜೆಡಿಎಸ್ ಪಕ್ಷ ತೊರೆಯಲಿದ್ದಾರೆ ಎಂಬ ಸುದ್ದಿ ಇದೆ. ಗುಬ್ಬಿಯಲ್ಲಿ ಸೋಮವಾರ ನಡೆದ ಜೆಡಿಎಸ್ ಪಕ್ಷದ ಸಮಾವೇಶಕ್ಕೆ ಎಸ್. ಆರ್. ಶ್ರೀನಿವಾಸ್ ಗೈರಾಗಿದ್ದರು. ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಸಮಾವೇಶಕ್ಕೆ ಆಗಮಿಸಿದ್ದರೂ ಕ್ಷೇತ್ರದ ಶಾಸಕರೇ ಪಕ್ಷದ ಸಮಾವೇಶದಿಂದ ದೂರವುಳಿದಿದ್ದರು.
ಬಿಜೆಪಿ ಮುಖಂಡ ಬಿ. ಎಸ್. ನಾಗರಾಜ್ ಜೆಡಿಎಸ್ ಪಕ್ಷ ಸೇರ್ಪಡೆ ಅಂಗವಾಗಿ ಗುಬ್ಬಿಯಲ್ಲಿ ಬೃಹತ್ ಸಮಾವೇಶ ಆಯೋಜನೆ ಮಾಡಲಾಗಿತ್ತು. ಕ್ಷೇತ್ರದ ಶಾಸಕ ಎಸ್. ಆರ್. ಶ್ರೀನಿವಾಸ್ ಮತ್ತು ಅವರ ಬೆಂಬಲಿಗರು ಸಮಾವೇಶಕ್ಕೆ ಆಗಮಿಸಲಿಲ್ಲ.
ಸಮಾವೇಶದಲ್ಲಿ ಮಾತನಾಡಿದ್ದ ಕುಮಾರಸ್ವಾಮಿ, "ಕಳೆದ ಲೋಕಸಭೆ ಚುನಾವಣೆಯಲ್ಲಿ ತುಮಕೂರು ಕ್ಷೇತ್ರದಲ್ಲಿ ಎಚ್. ಡಿ. ದೇವೇಗೌಡರನ್ನು ಸೋಲಿಸಲು ಕಾಂಗ್ರೆಸ್ ನಾಯಕರ ಜೊತೆ ಸೇರಿಕೊಂಡು ಚಿತಾವಣೆ ಮಾಡಿದರು. ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಅವರು ಕಣಕ್ಕಿಳಿದರೆ ಕೆಲವರು ಅವರನ್ನು ಸೋಲಿಸಲು ಪಿತೂರಿ ನಡೆಸಿದರು" ಎಂದು ಹೇಳಿದ್ದರು.
ಕಾಂಗ್ರೆಸ್ ಮುಖಂಡರ ಮನೆಯಲ್ಲಿ ಮಧ್ಯರಾತ್ರಿ ಕುಳಿತು ಏನೆಲ್ಲ ಮಸಲತ್ತು ಮಾಡಿದರು ಎಂಬುದು ಗೊತ್ತಿದೆ. ತಮ್ಮ ಆರೋಗ್ಯ ಸ್ಥಿತಿ, ಶಾಸಕರ ನಡವಳಿಕೆ ಬಗ್ಗೆ ಮಾತನಾಡುತ್ತಲೇ ಕುಮಾರಸ್ವಾಮಿ ಭಾವುಕರಾದರು.
ಬೆಮಲ್ ಕಾಂತರಾಜು; ಸದ್ಯ ವಿಧಾನ ಪರಿಷತ್ ಸದಸ್ಯರಾಗಿರುವ ಬೆಮಲ್ ಕಾಂತರಾಜ್ ಸಹ ಜೆಡಿಎಸ್ ಪಕ್ಷ ತೊರೆಯುವುದಾಗಿ ಘೋಷಣೆ ಮಾಡಿದ್ದಾರೆ. ಕೆಲವು ದಿನಗಳ ಹಿಂದೆ ಈ ಕುರಿತು ಮಾತನಾಡಿದ್ದ ಅವರು, "ನಾನು ಜೆಡಿಎಸ್ ಪಕ್ಷದಲ್ಲಿ ಇರುವಾಗವೇ ಎಚ್. ಡಿ. ಕುಮಾರಸ್ವಾಮಿ ಬೆಮಲ್ ಕಾಂತರಾಜ್ ಯಾರು? ಎಂದು ಕೇಳಿದ್ದಾರೆ. ಅಂದರೆ ನಾನು ಯಾರು ಎಂದು ಗೊತ್ತಿಲ್ಲ ಅಂತಾನೆ ಅರ್ಥ, ಹಾಗಾಗಿ ನಾನು ಕಾಂಗ್ರೆಸ್ ಸೇರುತ್ತಿದ್ದೇನೆ" ಎಂದು ಹೇಳಿದ್ದರು.
"ನಾನು ಈಗಾಗಲೇ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ, ಮಾಜಿ ಉಪ ಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ ಭೇಟಿ ಮಾಡಿದ್ದೇನೆ. ಮುಂದಿನ ಚುನಾವಣೆಯಲ್ಲಿ ಎಂಎಲ್ಸಿ ಸ್ಥಾನ ತ್ಯಾಗ ಮಾಡಲು ಸಿದ್ಧವಾಗಿದ್ದೇನೆ" ಎಂದು ಬೆಮಲ್ ಕಾಂತರಾಜ್ ತಿಳಿಸಿದ್ದರು.
ಬೆಮಲ್ ಕಾಂತರಾಜ್ 2022ರಲ್ಲಿ ನಡೆಯುವ ವಿಧಾನ ಪರಿಷತ್ ಚುನಾವಣೆಯಲ್ಲಿ ತಮ್ಮ ಸೀಟನ್ನು ಕಾಂಗ್ರೆಸ್ಗೆ ಬಿಟ್ಟುಕೊಡಲಿದ್ದಾರೆ. 2023ರ ವಿಧಾನಸಭೆ ಚುನಾವಣೆಗೆ ತುರುವೇಕೆರೆ ಕ್ಷೇತ್ರದಿಂದ ಅವರು ಕಾಂಗ್ರೆಸ್ ಅಭ್ಯರ್ಥಿಯಾಗಲಿದ್ದಾರೆ ಎಂಬ ಸುದ್ದಿ ಹಬ್ಬಿದೆ.