ಲಾಕ್ಡೌನ್: ರಾಜ್ಯದ ಕೃಷಿಕರ ಸಂಕಷ್ಟದ ಬಗ್ಗೆ ಶೀಘ್ರದಲ್ಲೇ ಸಿಎಂಗೆ ವರದಿ
ತುಮಕೂರು, ಏಪ್ರಿಲ್ 22: ಕೊರೊನಾ ಹಿನ್ನೆಲೆಯಲ್ಲಿ ಕೃಷಿ ಚಟುವಟಿಕೆಗಳಿಗೆ ಬಾಧಕವಾಗದಂತೆ ನಿಗಾವಹಿಸಲು ಕೃಷಿ ಚಟುವಟಿಕೆಗೆ ಪೂರಕವಾದ ಪರಿಕರಗಳು ಮತ್ತು ಬೋರ್ವೆಲ್, ಟ್ರ್ಯಾಕ್ಟರ್ ರಿಪೇರಿಗೆ ಅವಕಾಶ ಮಾಡಿ ಕೊಡಿ ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ತುಮಕೂರು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ನಡೆದ ಕೃಷಿ ಮತ್ತು ತೋಟಗಾರಿಕಾ ಇಲಾಖೆಯ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಮುಂಗಾರು ಹಂಗಾಮಿಗೆ ಬೇಕಾದ ಬಿತ್ತನೆ ಬೀಜಗಳು, ಗೊಬ್ಬರ ಮತ್ತು ಇನ್ನಿತರ ಅವಶ್ಯಕ ಪರಿಕರಗಳ ಪೂರೈಕೆಯಲ್ಲಿ ಯಾವುದೇ ಕೊರತೆಯಿಲ್ಲ. ರೈತರು ನಿಶ್ಚಿಂತೆಯಿಂದ ಕೃಷಿ ಕಾಯಕ ಮುಂದುವರಿಸಲು ಮನವಿ ಮಾಡಿದರು.
ಇದುವರೆಗೂ ತಾವು ತುಮಕೂರು ಸೇರಿದಂತೆ 26 ಜಿಲ್ಲೆಗಳ ಕೃಷಿ ಪರಿಸ್ಥಿಗಳ ಬಗ್ಗೆ ಅಧ್ಯಯನ ಮಾಡಿದ್ದೇನೆ. ಸರಣಿ ಪರಿಶೀಲನಾ ಸಭೆಗಳನ್ನು ನಡೆಸಿದ್ದೇನೆ. 19 ಜಿಲ್ಲೆಗಳ ಕೃಷಿ ಸ್ಥಿತಿಗತಿ - ಪರಿಹಾರ ಕ್ರಮಗಳ ಬಗ್ಗೆ ಮುಖ್ಯಮಂತ್ರಿ ಅವರಿಗೆ ವರದಿ ಸಲ್ಲಿಸಿದ್ದೇನೆ. ಇನ್ನೂ 4 ಜಿಲ್ಲೆಗಳ ಪರಿಶೀಲನೆ ನಂತರ ಮತ್ತೊಮ್ಮೆ ಸಮಗ್ರ ವರದಿ ಸಲ್ಲಿಸುತ್ತೇನೆ ಎಂದು ವಿವರಿಸಿದರು.
ಎಪಿಎಂಸಿಗಳನ್ನು ಬಲಪಡಿಸಬೇಕಾಗಿದೆ
ಹಣ್ಣು - ತರಕಾರಿಗಳನ್ನು ಹೆಚ್ಚಾಗಿ ಬೆಳೆಯುವ ಪ್ರದೇಶಗಳಲ್ಲಿ ಪ್ರತಿ ತಾಲ್ಲೂಕಿಗೆ ಒಂದರಂತೆ ಶೀತಲ ಶೇಖರಣ ಬೃಹತ್ ಘಟಕಗಳನ್ನು ನಿರ್ಮಾಣ ಮಾಡಬೇಕಾಗಿದೆ. ಎಪಿಎಂಸಿಗಳನ್ನು ಮತ್ತಷ್ಟು ಬಲಪಡಿಸಬೇಕಾಗಿದೆ ಎಂದು ಸಚಿವ ಬಿ.ಸಿ. ಪಾಟೀಲ್ ಅಭಿಪ್ರಾಯಪಟ್ಟರು.
ಪ್ಯಾಕೇಟುಗಳ ಮೂಲಕ ಮಾರಾಟ ಮಾಡುವುದು ಸೂಕ್ತ
ರಾಜ್ಯದಲ್ಲಿ ಅತಿ ಹೆಚ್ಚಿನ ಪ್ರಮಾಣದಲ್ಲಿ ಗುಣಮಟ್ಟದ ಅನಾನಸ್ - ಕಲ್ಲಂಗಡಿ ಹಣ್ಣುಗಳನ್ನು ಬೆಳೆಯುತ್ತಾರೆ. ಸಮರ್ಪಕ ಪ್ರಮಾಣದಲ್ಲಿ ಮಾರಾಟವಾಗದ ಕಾರಣ ಅವುಗಳು ಕೊಳೆತು ಹೋಗುತ್ತಿವೆ. ಈ ಹಿನ್ನೆಲೆಯಲ್ಲಿ ಕೃಷಿಕರ ಪರಿಶ್ರಮ ವ್ಯರ್ಥವಾಗದಂತೆ ಮೌಲ್ಯವರ್ಧನಾ ಘಟಕಗಳ ಸ್ಥಾಪನೆಗೆ ಉದ್ದೇಶಿಸಲಾಗಿದೆ. ಇದರಿಂದ ಹಣ್ಣುಗಳ ಜ್ಯೂಸ್ ಮಾಡಿ ಹೆಚ್ಚು ಅವಧಿ ಬಾಳಿಕೆ ಬರುವ ಪ್ಯಾಕೇಟುಗಳ ಮೂಲಕ ಮಾರಾಟ ಮಾಡುವುದು ಸೂಕ್ತ ಎಂದರು ಸಚಿವ ಬಿ.ಸಿ. ಪಾಟೀಲ್.
ಶಿಸ್ತುಕ್ರಮ ಕೈಗೊಳ್ಳಲಾಗುವುದು
ರೈತರಿಗೆ ಉತ್ತಮ ಗುಣಮಟ್ಟದ ಬಿತ್ತನೆಬೀಜ, ಗೊಬ್ಬರಗಳು, ಕೀಟನಾಶಕಗಳು ಇನ್ನಿತರ ಪರಿಕರಗಳನ್ನು ಪೂರೈಸಲು ರಾಜ್ಯ ಸರ್ಕಾರ ಶ್ರಮಿಸುತ್ತಿದೆ. ಎಲ್ಲಿಯಾದರೂ ಇವುಗಳ ಕಳಪೆ ಮಾರಾಟ ಕಂಡು ಬಂದು ರೈತರಿಗೆ ತೊಂದರೆಯಾದರೆ ಆಯಾ ಜಿಲ್ಲೆಯ ಜಂಟಿ ಕೃಷಿ ನಿರ್ದೇಶಕರು, ತಾಲ್ಲೂಕಿನ ಸಹಾಯಕ ಕೃಷಿ ನಿರ್ದೇಶಕರನ್ನು ನೇರ ಹೊಣೆಗಾರರನ್ನಾಗಿ ಮಾಡಲಾಗುವುದು. ಅವರ ಮೇಲೆ ಕಠಿಣ ಶಿಸ್ತುಕ್ರಮ ಕೈಗೊಳ್ಳಲಾಗುವುದು ಎಂದು ಸೂಚಿಸಿದರು.
ಕಟ್ಟೆಚ್ಚರದ ಸ್ಥಿತಿಯಲ್ಲಿಡಲಾಗಿದೆ
ಕೃಷಿ ಇಲಾಖೆಯ ಜಾಗೃತ ದಳವನ್ನು ಕಟ್ಟೆಚ್ಚರದ ಸ್ಥಿತಿಯಲ್ಲಿಡಲಾಗಿದೆ. ಈಗಾಗಲೇ ರಾಜ್ಯದ ವಿವಿಧೆಡೆ ಸರಣಿ ದಾಳಿಗಳನ್ನು ನಡೆಸಿ ಕಳಪೆ ಬಿತ್ತನೆಬೀಜ, ಇನ್ನಿತರ ಪರಿಕರಗಳನ್ನು ಜಪ್ತಿ ಮಾಡಲಾಗಿದೆ. ಸಂಬಂಧಿಸಿದ ಅಂಗಡಿಗಳ ಲೈಸನ್ಸ್ ಗಳನ್ನು ಅಮಾನತ್ತಿನಲ್ಲಿಡಲಾಗಿದೆ. ಮಾಲೀಕರ ಮೇಲೆ ಕ್ರಿಮಿನಲ್ ಮೊಕದ್ದಮೆ ಹೂಡಲಾಗಿದೆ ಎಂದು ವಿವರಿಸಿದರು. ಸಭೆ ಬಳಿಕ ನೇರ ಸಿದ್ದಗಂಗಾ ಮಠಕ್ಕೆ ತೆರಳಿದ ಸಚಿವ ಬಿ.ಸಿ. ಪಾಟೀಲ್, ಸಿದ್ದಗಂಗಾ ಶ್ರೀಗಳನ್ನು ಭೇಟಿ ಮಾಡಿ ಆಶೀರ್ವಾದ ಪಡೆದರು.