ಸಿದ್ದಗಂಗಾ ಮಠಕ್ಕೆ ಸುದೀಪ್ ಭೇಟಿ; ಕಿಚ್ಚನ ಜೊತೆ ಇಂದ್ರಜಿತ್
ತುಮಕೂರು, ಸೆಪ್ಟೆಂಬರ್ 1: ನಾಳೆ (ಸೆ. 2) ಸ್ಯಾಂಡಲ್ ವುಡ್ ನಟ ಸುದೀಪ್ ಹುಟ್ಟುಹಬ್ಬವಿದ್ದು, ಈ ಹಿನ್ನೆಲೆಯಲ್ಲಿ ಇಂದು ಸಿದ್ದಗಂಗಾ ಮಠಕ್ಕೆ ಸುದೀಪ್ ಭೇಟಿ ನೀಡಿ ಶಿವಕುಮಾರ ಶ್ರೀಗಳ ಗದ್ದುಗೆಯ ದರ್ಶನ ಪಡೆದುಕೊಂಡರು.
Recommended Video
ಈ ಬಾರಿ ಹುಟ್ಟುಹಬ್ಬ ಆಚರಿಸಿಕೊಳ್ಳದಿರಲು ಸುದೀಪ್ ತೀರ್ಮಾನಿಸಿದ್ದಾರೆ. ಹೀಗಾಗಿ ಮಠಕ್ಕೆ ಭೇಟಿ ಕೊಟ್ಟು ಗದ್ದುಗೆ ದರ್ಶನ ಪಡೆದರು. ಸುದೀಪ್ ಜೊತೆ ನಿರ್ದೇಶಕ ಇಂದ್ರಜೀತ್ ಲಂಕೇಶ್ ಕೂಡ ಮಠಕ್ಕೆ ಭೇಟಿ ಕೊಟ್ಟು ಗದ್ದುಗೆಗೆ ಪೂಜೆ, ಕುಂಕುಮಾರ್ಚನೆ ಮಾಡಿ ದರ್ಶನ ಪಡೆದುಕೊಂಡರು.
ಶಿವಮೊಗ್ಗ ಜಿಲ್ಲೆಯ 4 ಸರ್ಕಾರಿ ಶಾಲೆಗಳನ್ನು ದತ್ತು ಪಡೆದ ನಟ ಕಿಚ್ಚ ಸುದೀಪ್
"ಈ ವರ್ಷ ಹುಟ್ಟು ಹಬ್ಬ ಆಚರಿಸಲ್ಲ"
ಈ ವರ್ಷ ಪರಿಸ್ಥಿತಿ ಸರಿಯಿಲ್ಲ. ಆದ್ದರಿಂದ ಈ ಬಾರಿ ಹುಟ್ಟುಹಬ್ಬವನ್ನು ನಿಮ್ಮ ಜೊತೆ ಆಚರಣೆ ಮಾಡುತ್ತಿಲ್ಲ ಎಂದಿರುವ ಸುದೀಪ್, ನಿಮ್ಮ ಶುಭಾಶಯಗಳು ನನಗೆ ಮುಖ್ಯ ಹಾಗೂ ನಾನೇ ಹೇಳಿದಂತೆ, ನಿಮ್ಮನ್ನು ಕಾಣುವ ಸಂತೋಷವನ್ನು ಬೇರೆ ಯಾವುದೂ ನನಗೆ ನೀಡುವುದಿಲ್ಲ. ಆದರೆ ಸದ್ಯಕ್ಕೆ ನಿಮ್ಮಲ್ಲಿ ಕೋರುವುದೇನೆಂದರೆ ಹೆಚ್ಚಿನ ಸಂಖ್ಯೆಯಲ್ಲಿ ಸೇರಿ ಎಲ್ಲೂ ಹುಟ್ಟುಹಬ್ಬ ಆಚರಿಸಬೇಡಿ. ಯಾವುದೇ ಸಂಭ್ರಮಾಚರಣೆ ಹಾಗೂ ಕಾರ್ಯಕ್ರಮಗಳು ಬೇಡ. ಸಾಧ್ಯವಾದರೆ ನಿಮ್ಮ ಸುತ್ತಮುತ್ತಲಿನ ಪ್ರದೇಶದ ಕೆಲವರಿಗೆ ಯಾವುದಾದರೂ ರೀತಿ ಸಹಾಯ ಮಾಡಿ ಎಂದು ಮನವಿ ಮಾಡಿಕೊಂಡರು.
"ಅಭಿಮಾನಿಗಳಿಗೆ ಕಿಚ್ಚನ ಮನವಿ"
ನನ್ನ ಹುಟ್ಟು ಹಬ್ಬದ ಪ್ರಯುಕ್ತ ನನ್ನ ಕೈಲಾದ ಕೊಡುಗೆ ಕೊಡಬೇಕು ಅನ್ನುವ ಆಸೆಯಿಂದ ಬಂದಿದ್ದೇನೆ. ಈ ಬಾರಿ ಸರಳವಾಗಿ ನನ್ನ ಹುಟ್ಟುಹಬ್ಬ ಆಚರಿಸಲು ನಿರ್ಧರಿಸಿದ್ದೇನೆ. ಅಭಿಮಾನಿಗಳು ಯಾರೂ ಮನೆ ಬಳಿ ಬರುವುದು ಬೇಡ. ಅಲ್ಲಿ ಸೇರಿದರೆ ಎಲ್ಲರೂ ಹತ್ತಿರವೇ ನಿಲ್ಲುತ್ತಾರೆ. ವಾಪಸ್ ಮನೆಗಳಿಗೆ ಸುರಕ್ಷಿತವಾಗಿ ಹೋಗುತ್ತಾರೆ ಅನ್ನುವ ನಂಬಿಕೇನೂ ನನಗಿಲ್ಲ. ನನ್ನ ತಂದೆ ತಾಯಿನಾ ನೋಡಿ ತುಂಬಾ ದಿನವೇ ಆಯ್ತು. ದಿನಾ ಅವರ ಆಶೀರ್ವಾದ ಇಲ್ಲದೇ ಮನೆಯಿಂದ ಹೊರಗೇ ಬರುತ್ತಿರಲ್ಲ ಎಂದು ಹೇಳಿದರು.
ಇಂದ್ರಜಿತ್ ಬಗ್ಗೆ ಸುದೀಪ್ ಮಾತು
ಸ್ಯಾಂಡಲ್ ವುಡ್ ಡ್ರಗ್ಸ್ ಮಾಫಿಯಾ ವಿಚಾರವಾಗಿ ಮಾತನಾಡಿದ ಸುದೀಪ್, ಅದರ ಕುರಿತಾಗಿ ನಾನು ಮಠದಲ್ಲಿ ಮಾತಾಡೋದಿಲ್ಲ. ಇಂದ್ರಜಿತ್ ನನಗೆ ತುಂಬಾ ವರ್ಷದ ಪರಿಚಯ. ಸಿನಿಮಾ ರಂಗಕ್ಕೆ ಬರುವ ಮೊದಲಿನಿಂದಲೂ ಒಟ್ಟಿಗಿದ್ದೇವೆ. ಅವರೊಟ್ಟಿಗೆ ಕಾಣಿಸಿಕೊಂಡ ಮಾತ್ರಕ್ಕೆ ಏನೂ ಆಗಿಲ್ಲ. ಅವ್ರ ಒಳ್ಳೆ ಕೆಲ್ಸ, ಕೆಟ್ಟ ಕೆಲ್ಸ ಎಲ್ಲದ್ರಲ್ಲೂ ನಾನು ಭಾಗಿ ಆಗಿದ್ದೀನಿ ಅಂತಾನ? ಎಂದು ಪ್ರಶ್ನಿಸಿದರು.
ಮಠದ ವತಿಯಿಂದ ಕಾಣಿಕೆ
ಮಠಕ್ಕೆ ಭೇಟಿ ಕೊಟ್ಟು ಶಿವಕುಮಾರ ಶ್ರೀಗಳ ಗದ್ದುಗೆ ದರ್ಶನ ಪಡೆದುಕೊಂಡ ಕಿಚ್ಚ ಸುದೀಪ್ ಹಾಗೂ ಇಂದ್ರಜಿತ್ ಲಂಕೇಶ್ ಗೆ ಅರ್ಚಕರು ಶಿವಕುಮಾರ ಶ್ರೀಗಳ ಭಾವಚಿತ್ರವನ್ನು ಕಾಣಿಕೆಯಾಗಿ ಕೊಟ್ಟು ಸನ್ಮಾನಿಸಿದರು.