ಎಳನೀರು ಲಾರಿ ಹರಿದು 40 ಕುರಿಗಳ ಧಾರುಣ ಸಾವು! ಕಣ್ಣಲ್ಲಿ ನೋಡಲಾಗದ ಮೂಕ ಜೀವಿಗಳ ಅಕ್ರಂದನ
ತುಮಕೂರು, ಮೇ. 06: ಮುಗ್ಧ ಜೀವಿಗಳ ನರಳಾಟ. ರಕ್ತದ ಮಡುವಿನಲ್ಲಿ ಚೀರಾಟ. ಕ್ಷಣಕ್ಕೊಂದು ಪ್ರಾಣ ಬಿಡುತ್ತಿದ್ದ ಮೂಕ ಪ್ರಾಣಿಗಳು!
ಆ ದೃಶ್ಯ ನೋಡಿದ್ರೆ ಎಂಥವರ ಕಣ್ಣಲ್ಲಿ ನೀರು ಬರುತ್ತಿತ್ತು. ಎಳನೀರು ಲಾರಿ ಹರಿದು ನಲವತ್ತಕ್ಕೂ ಹೆಚ್ಚು ಕುರಿಗಳು ಸಾವನ್ನಪ್ಪಿರುವ ಹೃದಯ ವಿದ್ರಾವಕ ಘಟನೆ ಕುಣಿಗಲ್ ಸಮೀಪದ ಗವಿಮಠ ಬ್ರಿಡ್ಜ್ ಬಳಿ ಶುಕ್ರವಾರ ಸಂಭವಿಸಿದೆ.
ಮಡಕಶಿರಾ ತಾಲೂಕಿನ ಗುಡಿಬಂಡೆ ನಿವಾಸಿಯಾದ ರಂಗಮಾರಯ್ಯ, ದೊಡ್ಡ ಮಾರಪ್ಪ, ದೊಡ್ಡ ಈರಪ್ಪ, ಚಂದ್ರಪ್ಪ ಇತರರಿಗೆ ಸೇರಿದ ಎಂಟು ನೂರು ಕುರಿ ಮಂದೆಗಳನ್ನು ಮೇಯಿಸಲು ಕುಣಿಗಲ್ ಕಡೆ ಬಂದಿದ್ದರು. ರೈತರ ಒಲಗಳಲ್ಲಿ ಕುರಿಗಳನ್ನು ಇಟ್ಟು ಒಂದಷ್ಟು ಹಣ ಗಳಿಸಿ ಹೊಟ್ಟೆ ತುಂಬಿಸಿಕೊಳ್ಳುವ ಈ ಕುರಿ ಮಂದೆಯಲ್ಲಿ ಸುಮಾರು 800 ಕುರಿಗಳಿದ್ದವು.
ಗುರುವಾರ ರಾತ್ರಿ ಕುರಿಗಳನ್ನು ಹೊಡೆದುಕೊಂಡು ಹೋಗುತ್ತಿದ್ದರು. ಬೆಳಗಿನ ಜಾವ ಯಮರಾಯನ ರೂಪದಲ್ಲಿ ಬಂದ ಎಳನೀರು ಲಾರಿ ಕುರಿ ಮಂದೆ ಮೇಲೆ ಹರಿದಿದೆ. ಈ ವೇಳೆ ರಸ್ತೆಯಲ್ಲಿ ಹೋಗುತ್ತಿದ್ದ 40 ಕ್ಕಿಂತಲೂ ಹೆಚ್ಚು ಕುರಿಗಳು ಸಾವನ್ನಪ್ಪಿವೆ. ಸುಮಾರು 35 ಕ್ಕಿಂತಲೂ ಹೆಚ್ಚು ಕುರಿಗಳು ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿವೆ. ಕುರಿಗಳ ಸಾವನ್ನು ನೋಡಿ ಮಾಲೀಕರು ರಸ್ತೆಯಲ್ಲಿ ಕಣ್ಣೀರು ಹಾಕಿದ್ದಾರೆ.
ನಾವು ಕುರಿಗಳನ್ನು ಹೊಡೆದುಕೊಂಡು ಊರಿನತ್ತ ತೆರಳಿದ್ದೆವು. ಬೆಳಗಿನ ಜಾವ 3 ಗಂಟೆ ಸುಮಾರಿನಲ್ಲಿ ಅತಿ ವೇಗವಾಗಿ ಬಂದ ಎಳನೀರು ತುಂಬಿದ ಲಾರಿ ಮಂದೆ ಮೇಲೆ ಹರಿಯಿತು. ಇದರ ಪರಿಣಾಮ ಕುರಿಗಳು ಲಾರಿ ಅಡಿ ಸಿಲುಕಿ ಸಿಕ್ಕಿ ಸಾವನ್ನಪ್ಪಿವೆ ಎಂದು ಕುರಿ ಮಂದೆ ಕಾಯುತ್ತಿದ್ದ ಮಾರಪ್ಪ ಪೊಲೀಸರ ಮುಂದೆ ಹೇಳಿಕೆ ದಾಲಿಸಿದ್ದಾರೆ. ಕುಣಿಗಲ್ ಗ್ರಾಮಾಂತರ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಕುರಿಗಳ ಮೇಲೆ ಲಾರಿ ಹತ್ತಿಸಿದ ಚಾಲಕ ವಾಹನ ಸಮೇತ ಪರಾರಿಯಾಗಿದ್ದಾನೆ. ಆತನಿಗಾಗಿ ಶೋಧ ನಡೆಸಲಾಗುತ್ತಿದೆ. ಲಾರಿ ವಿವರ ಕಲೆ ಹಾಕಿದ್ದು ಕೂಡಲೇ ಅತನನ್ನು ಬಂಧಿಸಲಾಗುವುದು ಎಂದು ಕುಣಿಗಲ್ ವಿಭಾಗದ ಡಿವೈಎಸ್ಪಿ ಜಿ.ಆರ್. ರಮೇಶ್ 'ಒನ್ಇಂಡಿಯಾ ಕನ್ನಡ'ಕ್ಕೆ ಸ್ಪಷ್ಟಪಡಿಸಿದ್ದಾರೆ.