ಸ್ಕೂಲ್ ಬಸ್ನಲ್ಲಿ ಮಕ್ಕಳನ್ನು ಲಾಕ್ ಮಾಡಿ, ಮದ್ಯದಂಗಡಿಗೆ ಹೋಗಿದ್ದ ಚಾಲಕ
ತುಮಕೂರು, ಅಕ್ಟೋಬರ್ 17: ಬಸ್ಸಿನಲ್ಲಿಯೇ ಬಂಧಿಯಾಗಿದ್ದ ಏಳು ಮಕ್ಕಳನ್ನು ತುಮಕೂರು ಸ್ಥಳೀಯರು ರಕ್ಷಿಸಿದ್ದಾರೆ.
ಮಕ್ಕಳನ್ನು ಮನೆಗೆ ಬಿಡದೆ ಬಸ್ನಲ್ಲಿಯೇ ಲಾಕ್ ಮಾಡಿ ಚಾಲಕ ಮದ್ಯದಂಗಡಿಗೆ ತೆರಳಿದ್ದ ಘಟನೆ ಬೆಳಕಿಗೆ ಬಂದಿದೆ.
ಮಧುಗಿರಿ ತಾಲೂಕಿನ ಚಿರಕ್ ಪಬ್ಲಿಕ್ ಸ್ಕೂಲ್ ಬಸ್ ಚಾಲಕ ಬಸವರಾಜು ಇಂತಹ ಅಮಾನವೀಯ ಘಟನೆಯನ್ನು ಎಸಗಿದ ವ್ಯಕ್ತಿ.
ಸೋಮವಾರ ಶಾಲೆ ಮುಗಿದ ತಕ್ಷಣ ಮಕ್ಕಳು ಎಂದಿನಂತೆ ಮನೆಗೆ ತೆರಳಲು ಬಸ್ ಹತ್ತಿದ್ದಾರೆ, ಆದರೆ, ಕೆಲವರನ್ನು ಮಾತ್ರ ಮನೆಗೆ ಡ್ರಾಪ್ ಮಾಡಿರುವ ಬಸ್ ಚಾಲಕ ಉಳಿದ 5 ಮಕ್ಕಳನ್ನು ಬಸ್ ಒಳಗೆ ಬಿಟ್ಟು ಲಾಕ್ ಮಾಡಿ ಕುಡಿಯಲು ತೆರಳಿದ್ದಾನೆ.
ಸಂಜೆ 5 ಗಂಟೆಗೆ ಮನೆಗೆ ಬರಬೇಕಿದ್ದ ಮಕ್ಕಳು 7 ಗಂಟೆಯಾದರೂ ಮನೆಗೆ ಬಾರದಿದ್ದನ್ನು ಕಂಡು ಗಾಬರಿಗೆ ಒಳಗಾದ ಪೋಷಕರು ತಕ್ಷಣ ಶಾಲೆಗೆ ತೆರಳಿ ವಿಚಾರಿಸಿದ್ದಾರೆ. ಪರಿಣಾಮ ಶಾಲಾ ಸಿಬ್ಬಂದಿಗಳು ಸಹ ಆತಂಕಕ್ಕೆ ಒಳಗಾಗಿದ್ದಾರೆ.
ಇಂತಹ ಸಿಬ್ಬಂದಿಗೆ ಕೆಲಸ ನೀಡಿರುವ ಕುರಿತು ಮಕ್ಕಳ ಪೋಷಕರು ಶಾಲಾ ಸಿಬ್ಬಂದಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ. ಇದೀಗ ಕುಡುಕ ಚಾಲಕ ಬಸವರಾಜ್ ನಾಪತ್ತೆಯಾಗಿದ್ದು ಆತನ ವಿರುದ್ಧ ಪ್ರಕರಣ ದಾಖಲಾಗಿದೆ.
ಈ ವೇಳೆ ನಡುರಸ್ತೆಯಲ್ಲಿ ನಿಂತಿದ್ದ ಬಸ್ನಲ್ಲಿ ಮಕ್ಕಳ ಕಿರುಚುವ ಶಬ್ಧ ಕೇಳಿ ಸ್ಥಳೀಯರೆ ಮಕ್ಕಳನ್ನು ರಕ್ಷಿಸಿ ಸುರಕ್ಷಿತವಾಗಿ ಮನೆಗೆ ತಲುಪಿಸಿದ್ದಾರೆ.