ಗುಬ್ಬಿ ಅಮಾನುಷ ಪ್ರಕರಣ: ಅಭಿಷೇಕ್ ಗೆ ರು.1 ಲಕ್ಷ ನೆರವು
ತುಮಕೂರು, ಜನವರಿ 19: ಗುಬ್ಬಿಯಲ್ಲಿ ಯುವತಿಯನ್ನು ಚುಡಾಯಿಸದ ಎಂಬ ಕಾರಣಕ್ಕೆ ಅಮಾನುಷವಾಗಿ ಮನಬಂದಂತೆ ಥಳಿಸಿದ ಪ್ರಕರಣ ಕುರಿತಂತೆ ಯುವಕನ ಪರಿವಾರಕ್ಕೆ ಎಸ್ಸಿ,ಎಸ್ಟಿ ದೌರ್ಜನ್ಯ ಕಾಯ್ದೆಯಡಿ 1 ಲಕ್ಷ ನೆರವು ನೀಡಲಾಗಿದೆ. ಇದರ ಅಂಗವಾಗಿ ರು. 25,000 ಚೆಕ್ಕನ್ನು ವಿತರಿಸಲಾಯಿತು.
ಗುಬ್ಬಿಯ ಸುಭಾಷ್ ನಗರದಲ್ಲಿ ಯುವತಿಯನ್ನು ಚುಡಾಯಿಸಿದ ಎಂಬ ಕಾರಣಕ್ಕೆ ಯುವತಿಯ ಪರಿವಾರದವರು ಸಂಚು ರೂಪಿಸಿ ಆತನನ್ನು ತೋಟದ ಮನೆಗೆ ಕರೆಸಿ ಅಮಾನುಷವಾಗಿ ಮನಬಂದಂತೆ ಥಳಿಸಿ ಚಪ್ಪಲಿ ಹಾರಹಾಕಿ ಅವಮಾನ ಮಾಡಿದ್ದರು. ಈ ಸಂಬಂಧ ಯುವಕನ ಪೋಷಕರು ಗುಬ್ಬಿ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಪೊಲೀಸರು ಏಳು ಮಂದಿಯನ್ನು ಬಂಧಿಸಿದ್ದರು. ಅಲ್ಲದೆ ಯುವಕನನ್ನು ಜಿಲ್ಲಾ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು.[ಹುಡುಗಿಯನ್ನು ಕೆಣಕಿದವನ ಬೆತ್ತಲು ಮಾಡಿ ಬಗ್ಗುಬಡಿದ ಜನ]
ಈ ವೇಳೆ ಪರಿಶಿಷ್ಟ ಜಾತಿ ಮತ್ತು ಪಂಗಡದ ಆಯೋಗದ ಅಧ್ಯಕ್ಷ ಮುನಿಯಪ್ಪ ಆಸ್ಪತ್ರೆಗೆ ಆಗಮಿಸಿ ಯುವಕನ ಆರೋಗ್ಯದ ಬಗ್ಗೆ ವಿಚಾರಿಸಿದರು. ಪರಿವಾರದೊಂದಿಗೆ ಬೆರೆತು ಮಾತನಾಡಿದರು. ಇದೊಂದು ಅಮಾನುಷ ಕೃತ್ಯವಾಗಿ ನಾಗರಿಕ ಸಮಾಜ ತಲೆ ತಗ್ಗಿಸುವಂತಾಗಿದೆ ಎಂದರು. ನಂತರ ಎಸ್ಸಿ,ಎಸ್ಟಿ ದೌರ್ಜನ್ಯ ಕಾಯ್ದೆಯಡಿ 1 ಲಕ್ಷ ನೆರವು ಬಂದಿರುವುದಾಗಿ ತಿಳಿಸಿ ಮೊದಲ ಹಂತದ ರು. 25,000 ಚೆಕ್ಕನ್ನು ನೀಡಿದರು.[ಗುಬ್ಬಿ ಯುವಕನ ವಿವಸ್ತ್ರಗೊಳಿಸಿ ಬಡಿದ 7 ಜನರ ಬಂಧನ]
ಹಲ್ಲೆಗೊಳಗಾದ ಯುವಕನ ಕುಟುಂಬಕ್ಕೆ ಸಾಂತ್ವನ ಹೇಳಿದ ಜಿಲ್ಲಾಧಿಕಾರಿಗಳು ಜಿಲ್ಲಾಡಳಿತದಿಂದ ಈ ಕುಟುಂಬಕ್ಕೆ ಎರಡು ಪ್ರವಾಸಿ ಟ್ಯಾಕ್ಸಿಗಳನ್ನು ಕೊಡಿಸುವ ಭರವಸೆ ನೀಡಿದರು.