ತುಮಕೂರಿನಲ್ಲಿ ಬಸ್ ಪಲ್ಟಿ: 6 ಮಂದಿ ಸ್ಥಳದಲ್ಲೇ ಸಾವು, 20 ಮಂದಿಗೆ ಗಾಯ
ತುಮಕೂರು, ಅಕ್ಟೋಬರ್ 30: ತುಮಕೂರಿನಲ್ಲಿ ಸಂಭವಿಸಿದ ಬಸ್ ಭೀಕರ ಅಪಘಾತದಲ್ಲಿ 6 ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದು 20 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.
ತುಮಕೂರಿನ ಕೊರಟಗೆರೆ ಬಳಿಯಲ್ಲಿ ಖಾಸಗಿ ಬಸ್ ಪಲ್ಟಿಯಾಗಿ 6 ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ತುಮಕೂರಿಗೆ ಸಾಗುತ್ತಿದ್ದ ವಿಜಯಲಕ್ಷ್ಮೀ ಎಂಬ ಖಾಸಗಿ ಬಸ್ ಚಾಲಕನ ನಿಯಂತ್ರಣ ತಪ್ಪಿ ಇದ್ದಕ್ಕಿದ್ದಂತೆ ರಸ್ತೆಯಿಂದ ಕೆಳಕ್ಕೆ ಇಳಿದಿದೆ. ರಸ್ತೆಯಿಂದ ಕೆಳಕ್ಕೆ ಇಳಿಯುತ್ತಿದ್ದಂತೆ ಪಲ್ಟಿ ಹೊಡೆದಿದ್ದು, ಅಪಘಾತದ ಸ್ಥಳದಲ್ಲೇ 6 ಮಂದಿ ಸಾವನ್ನಪ್ಪಿದ್ದಾರೆ. 20ಕ್ಕೂ ಹೆಚ್ಚು ಮಂದಿಗೆ ಗಂಭೀರ ಗಾಯಗಳಾಗಿವೆ.
ಕೊರಟಗೆರೆಯಿಂದ ತುಮಕೂರಿಗೆ ಹೋಗುತ್ತಿದ್ದ ವಿಜಯಲಕ್ಷ್ಮೀ ಬಸ್ ಪಲ್ಟಿ ಹೊಡೆದಿದ್ದು, ಹೆಚ್ಚಿನ ವಿವರಗಳು ಇನ್ನೂ ಲಭ್ಯವಾಗಿಲ್ಲ. ಕೊರಟಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗಾಯಗೊಂಡಿರುವವರನ್ನು ಜಿಲ್ಲಾಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲು ಮಾಡಲಾಗಿದ್ದು, ಈ ಪೈಕಿ ಮೂವರ ಮಂದಿ ಚಿಂತಾಜನಕವಾಗಿದೆ ಎನ್ನಲಾಗಿದೆ. ಇನ್ನು ಈ ಭಾಗದಲ್ಲಿ ಖಾಸಗಿ ಬಸ್ಗಳ ಉಪಟಳ ಹೆಚ್ಚಾಗಿದ್ದು, ಮೀತಿ ಮೀರಿದ ವೇಗದಿಂದ ಖಾಸಗಿ ಬಸ್ಗಳು ಇಲ್ಲಿನ ಜನತೆಯ ಜೀವದ ಜೊತೆಗೆ ಚೆಲ್ಲಾಟವಾಡುತ್ತಿದ್ದಾರೆ ಅಂತ ಸ್ಥಳೀಯ ಜನತೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇನ್ನೂ ಜಿಲ್ಲಾಡಳಿತ ಈ ಬಗ್ಗೆ ಕೂಡಲೇ ಕ್ರಮ ಕೈಗೊಳ್ಳಬೇಕು, ಈ ಭಾಗದಲ್ಲಿ ಸಂಚಾರ ಮಾಡುವ ಖಾಸಗಿ ಬಸ್ಗಳ ಮೇಲೆ ಕಾನೂನುಕ್ರಮ ಕೈಗೊಳ್ಳಬೇಕು ಅಂತ ಒತ್ತಾಯಿಸಿದ್ದಾರೆ. ಘಟನಾ ಸ್ಥಳಕ್ಕೆ ಕೊರಟಗೆರೆ ಪೊಲೀಸರು ಭೇಟಿ ನೀಡಿದ್ದು, ತನಿಖೆ ನಡೆಸುತ್ತಿದ್ದಾರೆ.