ತುಮಕೂರು ಮಹಾನಗರ ಪಾಲಿಕೆಯಲ್ಲಿ ಭಾರಿ ಅಕ್ರಮ ಬಯಲು
ತುಮಕೂರು, ಮಾರ್ಚ್ 09: ತುಮಕೂರಿನ ಮಹಾನಗರಪಾಲಿಕೆಯಲ್ಲಿ ನಡೆದಿರುವ ಭಾರಿ ಅಕ್ರಮವೊಂದು ಅಲ್ಲಿನ ಸಿಬ್ಬಂದಿಗಳಿಂದಲೇ ಬಯಲಾಗಿದೆ.
ಪಾಲಿಕೆಯಲ್ಲಿ ಸುಮಾರು 4,914 ಅಕ್ರಮ ಖಾತೆಗಳನ್ನು ಮಾಡಿರುವುದಾಗಿ ತಿಳಿದುಬಂದಿದೆ. ಫೆಬ್ರವರಿ 15 ರವರೆಗಿನ ಲೆಕ್ಕ ಇದಾಗಿದ್ದು, ಈ ಕುರಿತು ಕಂದಾಯ ಇಲಾಖೆ ಆಯುಕ್ತರಾದ ಮಂಜುನಾಥ ಅವರು ಪೌರಾಡಳಿತ ನಿರ್ದೇಶಕರಿಗೆ ಪತ್ರ ಮುಖೇನ ತಿಳಿಸಿದ್ದಾರೆ. ಈ ಪತ್ರದ ಪ್ರತಿಯನ್ನು ಪಾಲಿಕೆ ಸಿಬ್ಬಂದಿಗಳೇ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.
'ತುಮಕೂರಿನ ಜೆಡಿಎಸ್ ಅಭ್ಯರ್ಥಿ ಗೋವಿಂದರಾಜು ವ್ಯಭಿಚಾರ ರಾಜಕಾರಣ'
ನಿರ್ದೇಶಕರಿಗೆ ಬರೆದ ಪತ್ರದಿಂದಾಗಿ ವಿಷಯ ಬಹಿರಂಗವಾಗಿದ್ದು, ಇದು ಸ್ಥಳೀಯವಾಗಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ಪಾಲಿಕೆಯ ವಿರೋಧ ಪಕ್ಷ ಬೆಂಬಲಿತ ಸದಸ್ಯರು ಹಗರಣದ ತನಿಖೆಗೆ ಒತ್ತಾಯಿಸುತ್ತಿದ್ದಾರೆ.
ಕಳೆದ ತಿಂಗಳಿನಿಂದ ಪಾಲಿಕೆ ವ್ಯಾಪ್ತಿಯ ಅಸೆಸ್ಮೆಂಟ್ ರಿಜಿಸ್ಟರ್ಗಳಲ್ಲಿನ ದಾಖಲಾತಿಗಳನ್ನು ಪರಿಶೀಲಿಸಿ ನಿಯಮ ಬಾಹಿರ ಸ್ವತ್ತುಗಳನ್ನು ಬೇರ್ಪಡಿಸುವ ಕಾರ್ಯ ಚಾಲ್ತಿಯಲ್ಲಿತ್ತು ಆ ಸಮಯದಲ್ಲಿ 4,994 ಅಕ್ರಮ ಖಾತೆಗಳನ್ನು ಮಾಡಿರುವುದು ಬೆಳಕಿಗೆ ಬಂದಿದೆ.
ಅಕ್ರಮ ಖಾತೆಗಳ ಕುರಿತು ಕಂದಾಯ ಇಲಾಖೆ ಹಾಗೂ ಇನ್ನಿತರ ಇಲಾಖೆಗಳಿಗೆ ಸಾಕಷ್ಟು ದೂರುಗಳು ಬಂದಿದ್ದವು ಹಾಗಾಗಿ ಕಂದಾಯ ಇಲಾಖೆಯು ಪರಿಶೀಲನೆಗೆ ಮುಂದಾಗಿತ್ತು.
ಅಕ್ರಮ ಖಾತೆ ಮಾಡಿರುವ ಬಗ್ಗೆ ಈಗ ಪೌರಾಡಳಿತ ನಿರ್ದೇಶಕರಿಗೆ ದೂರು ಸಲ್ಲಿಸಲಾಗಿದ್ದು, ಅವರು ಯಾವ ರೀತಿಯ ಕ್ರಮ ಜರುಗಿಸುತ್ತಾರೊ ಕಾದು ನೋಡಬೇಕಿದೆ.