170 ಅಡಿಕೆ ಮರ ಕಡಿದ ಅಧಿಕಾರಿಗಳು: ಅಜ್ಜಿಯ ಆಕ್ರಂದನ
ತುಮಕೂರು, ಮಾರ್ಚ್ 9: ತೋಟದ ತುಂಬ ಬೆಳೆದು ನಿಂತಿದ್ದ ಅಡಿಕೆ ಮರಗಳು ಧರೆಗೆ ಉರಿಳಿದೆ. 170 ಅಡಿಕೆ ಮರ ಹಾಗೂ 25 ತೆಂಗಿನ ಮರಗಳನ್ನು ಕಡಿದು ಹಾಕಲಾಗಿದೆ. ಇದನ್ನು ನೋಡಿ ಮಕ್ಕಳನ್ನು ಕಳೆದುಕೊಂಡ ಹಾಗೆ ಅಜ್ಜಿ ಕಣ್ಣೀರು ಹಾಕುತ್ತಿದ್ದಾರೆ. ಈ ಬೇಸರದ ಘಟನೆ ಗುಬ್ಬಿಯಲ್ಲಿ ನಡೆದಿದೆ.
Recommended Video
ಅಡಿಕೆಗೆ ಒಳ್ಳೆಯ ಬೆಲೆ ಬಂದಿದೆ ಎಂದು ರೈತರು ಒಂದು ಕಡೆ ಖುಷಿಯಾಗಿದ್ದಾರೆ. ಆದರೆ, ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ತಿಪ್ಪೂರುನಲ್ಲಿ ಅಜ್ಜಿ ಸಿದ್ದಮ್ಮ ತಾನು ಬೆಳೆಸಿದ ಮರಗಳನ್ನು ಕಡಿದು ಹಾಕಿದ್ದಾರೆ ಎಂದು ಬಿಕ್ಕಿ ಬಿಕ್ಕಿ ಅಳುತ್ತಿದ್ದಾರೆ. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ತುಮಕೂರಿನ 25 ವರ್ಷಗಳ ಹಿಂದಿನ ಕೊಲೆ ಪ್ರಕರಣ: ಆರೋಪಿ ಸಿಕ್ಕಿಬಿದ್ದಿದ್ಹೇಗೆ?
ಭೂಮಿ ವಿವಾದ ಇದೆ ಎಂಬ ಕಾರಣಕ್ಕೆ ಜಿಲ್ಲಾಧಿಕಾರಿಗಳ ಆದೇಶವನ್ನು ಉಲ್ಲಂಘನೆ ಮಾಡಿ, ತಹಶೀಲ್ದಾರ್, ಕಂದಾಯ ನಿರೀಕ್ಷಕ ಹಾಗೂ ಗ್ರಾಮ ಲೆಕ್ಕಿಗರು ಮರಗಳನ್ನು ಕಡಿದು ಹಾಕಿ ಅಜ್ಜಿಗೆ ದೌರ್ಜನ್ಯ ಎಸಗಿದ್ದಾರೆ ಎನ್ನುವ ಆರೋಪ ಬಂದಿದೆ.
ಜಾತ್ರೆ ನಡೆಯಬೇಕಿದ್ದ ಸ್ಥಳ
''ತಿಪ್ಪೂರು ಗ್ರಾಮದಲ್ಲಿ ಕೋಡಿ ಕೆಂಪಮ್ಮ ದೇವಾಲಯದ ಜಾತ್ರೆ ಇತ್ತು. ಆ ಜಾತ್ರೆ ನಡೆಯುವ ಜಾಗದ ಭೂಮಿ ವಿವಾದದಲ್ಲಿತ್ತು ಜಿಲ್ಲಾಧಿಕಾರಿಗಳು ಜಮೀನನ್ನು ತೆರವುಗೊಳಿಸಲು ಸೂಚಿಸಿದ್ದರು. ಆದರೆ, ಗ್ರಾಮ ಲೆಕ್ಕಿಗ ಮತ್ತು ಕಂದಾಯಾಧಿಕಾರಿಯ ಲೋಪದಿಂದಾಗಿ ಸಿದ್ದಮ್ಮ ಅವರ ತೋಟವನ್ನು ಸಂಪೂರ್ಣವಾಗಿ ನೆಲಸಮ ಮಾಡಲಾಗಿದೆ. ತಹಶೀಲ್ದಾರ್ ಕೂಡ ಅದನ್ನು ಪರಿಶೀಲಿಸುವ ಗೋಜಿಗೆ ಹೋಗದೆ ಮಹಿಳಾ ರೈತರೊಬ್ಬರ ತೋಟವನ್ನು ಧ್ವಂಸ ಮಾಡಲಾಗಿದೆ.'' ಎಂದು ಆರೋಪ ಮಾಡಲಾಗಿದೆ.
ಸಿದ್ದಮ್ಮನ ಆಕ್ರಂದನ
''ಸಿದ್ದಮ್ಮ ನೀರು, ಗೊಬ್ಬರ ಹಾಕಿ ಮರಗಳನ್ನು ಬೆಳೆಸಿದ್ದರು. ಅವರಿಗೆ ಸೇರಿದ್ದ ತೆಂಗು ಮತ್ತು ಅಡಿಕೆ ಮರಗಳು ಕಣ್ಣೆದುರೇ ನೆಲಕ್ಕುರುಳಿವೆ. ಜಿಲ್ಲಾಧಿಕಾರಿ ಆದೇಶವನ್ನೇ ಧಿಕ್ಕರಿಸಿದ ತಹಶೀಲ್ದಾರ್ ಮುಂದೆ ನಿಂತು ಸಿದ್ದಮ್ಮನವರಿಗೆ ಸೇರಿದ ಅಡಿಕೆ ಮತ್ತು ತೆಂಗಿನ ಮರಗಳನ್ನು ಕಡಿಸಿಹಾಕಿದ್ದಾರೆ. ತಾನು ಬೆಳೆಸಿದ ಫಲ ನೀಡುತ್ತಿದ್ದ ಮರಗಳು ಕಡಿದ್ದನ್ನು ನೋಡಿ ಸಿದ್ದಮ್ಮ ಮಕ್ಕಳು ಕಳೆದುಕೊಂಡಂತೆ ಅಳುತ್ತಿದ್ದಾರೆ.'' ಎಂದು ಸೋಷಿಯಲ್ ಮೀಡಿಯಾದಲ್ಲಿ ಬಾಲಾಜಿ ಎ ಕುಂಬ್ಳೆ ಎನ್ನುವವರು ವಿಡಿಯೋ ಹಂಚಿಕೊಂಡಿದ್ದಾರೆ.
ತುಮಕೂರು-ಗುಬ್ಬಿ ಜೋಡಿ ಹಳಿ ರೈಲು ಸಂಚಾರಕ್ಕೆ ಮುಕ್ತ
ತಹಶೀಲ್ದಾರ್ ಪ್ರತಿಕ್ರಿಯೆ
ಈ ಘಟನೆ ಬಗ್ಗೆ ತಹಶೀಲ್ದಾರ್ ಎಂ ಮಮತಾ ಪ್ರತಿಕ್ರಿಯೆ ನೀಡಿದ್ದಾರೆ. ''ನಾವು ದೇವಸ್ಥಾನಕ್ಕೆ ಸೇರಿದ ಮರಗಳನ್ನು ಮಾತ್ರ ಕಡಿದಿದ್ದೇವೆ. ಮುಜರಾಯಿ ಇಲಾಖೆಗೆ ಸೇರಿದ ಉಡುಸಲಮ್ಮ ದೇವಸ್ಥಾನದಲ್ಲಿ ಜಾತ್ರೆ ಇದೆ. ಊರಿನ ಗ್ರಾಮಸ್ಥರರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರು. ಹೀಗಾಗಿ, ಜಿಲ್ಲಾಧಿಕಾರಿಗಳು ಜಾತ್ರೆ ನಡೆಸಲು ಅವಕಾಶ ಮಾಡಿಕೊಂಡಿ ಎಂದು ಸೂಚನೆ ನೀಡಿದ್ದರು.'' ಎಂದಿದ್ದಾರೆ.
ತಪ್ಪು ಸಂದೇಶ ನೀಡುತ್ತಿದ್ದಾರೆ
''ಸಿದ್ದಮ್ಮನ ವಿಡಿಯೋ ಮೂಲಕ ತಪ್ಪು ಸಂದೇಶವನ್ನು ನೀಡುತ್ತಿದ್ದಾರೆ. ನಾವು ಯಾವುದೇ ರೈತರಿಗೆ ಸೇರಿದ ಮರಗಳನ್ನು ಕಡಿದಿಲ್ಲ. ತೆರವಿಗೂ ಮುಂಚೆ ದೇವಸ್ಥಾನದ 4 ಅರ್ಚಕರ ಅನುಮತಿ ಪಡೆದು, ಪತ್ರಕ್ಕೆ ಸಹಿ ಹಾಕಿಸಿಕೊಂಡಿದ್ದೇವೆ. ಆಗ ಯಾವ ಮಹಿಳೆಯು ಕೇಳಲಿಲ್ಲ. ಈಗ ಮಹಿಳಾ ದಿನಾಚರಣೆಯ ದಿನ ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ಬಿಟ್ಟಿದ್ದಾರೆ.'' ಎಂದು ತಹಶೀಲ್ದಾರ್ ಪ್ರತಿಕ್ರಿಯೆ ನೀಡಿದ್ದಾರೆ.