ಜಿ.ಪಂ. ಸದಸ್ಯನ ಮನೆಯಲ್ಲಿ ಅಪ್ರಾಪ್ತ ಬಾಲಕಿ ನಿಗೂಡ ಸಾವು!
ತುಮಕೂರು, ಸೆ. 28: ಬಿಜೆಪಿ ಮುಖಂಡ ಹಾಗೂ ಹಾಲಿ ಜಿಲ್ಲಾ ಪಂಚಾಯಿತಿ ಸದಸ್ಯನ ಮನೆಯಲ್ಲಿ 17 ವರ್ಷದ ಅಪ್ರಾಪ್ತ ಬಾಲಕಿಯೊಬ್ಬಳು ಅನುಮಾನಸ್ಪದವಾಗಿ ಸಾವನ್ನಪ್ಪಿರುವ ಘಟನೆ ತುಮಕೂರಿನ ಆದರ್ಶ ನಗರದಲ್ಲಿ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.
ಶಾಂತಿ ನಗರದ ನಿವಾಸಿ 17 ವರ್ಷದ ಬಾಲಕಿ ಮನುಶ್ರೀ ಬಿಜೆಪಿ ಮುಖಂಡ ಹಾಗೂ ಹಾಲಿ ಜಿಲ್ಲಾ ಪಂಚಾಯಿತಿ ಸದಸ್ಯ ರಾಮಾಂಜಿನಪ್ಪ ಮನೆಯಲ್ಲಿ ಶುಕ್ರವಾರ ಮಧ್ಯಾಹ್ನದ ವೇಳೆಗೆ ನಿಗೂಢವಾಗಿ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ. ಆ ಮನೆಯ ಮಲಗುವ ಕೋಣೆಯ ಹಾಸಿಗೆ ಮೇಲೆ ಮಲಗಿದಂತಿರುವ ಮನುಶ್ರೀ ಮೃತದೇಹದ ಫೋಟೊ, ಹಾಗೂ ಬೀರುವುನ ಹ್ಯಾಂಡಲ್ನಲ್ಲಿ ಬಿಳಿ ಬಣ್ಣದ ವಸ್ತ್ರ ಕಟ್ಟಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಅನುಮಾನಗಳನ್ನು ಹುಟ್ಟುಹಾಕಿದೆ.
ಒಂಟಿ ಮಹಿಳೆಯನ್ನು ಇರಿದು ಕೊಂದಿದ್ದ ಸೈಕೋಗಳಿಗೆ ಗುಂಡೇಟು
ಮೂಲತಃ ತುಮಕೂರು ತಾಲ್ಲೂಕಿನ ನಾಗವಲ್ಲಿ ಸಮೀಪದ ಬಿದರೆಕಟ್ಟೆ ಗ್ರಾಮದ ಶಿವಣ್ಣ ಹಾಗೂ ಮಂಜುಳ ದಂಪತಿ ಸುಮಾರು ವರ್ಷಗಳಿಂದ ಶಾಂತಿನಗರದಲ್ಲಿಯೇ ವಾಸವಿದ್ದಾರೆ ಎಂಬ ಮಾಹಿತಿಯಿದೆ. ತಂದೆ ಶಿವಣ್ಣ ಪಾನಿಪೂರಿ ಅಂಗಡಿ ನಡೆಸುತ್ತಿದ್ದಾರೆ. ತಾಯಿ ಮಂಜುಳ ಜಿಲ್ಲಾ ಪಂಚಾಯಿತಿ ಸದಸ್ಯ ರಾಮಾಂಜಿನಪ್ಪ ಮನೆಯಲ್ಲಿ ಮನೆಗೆಲಸ ಮಾಡುತ್ತಿದ್ದಾರೆ ಎಂಬ ಮಾಹಿತಿಯಿದೆ.
ತರಾತುರಿಯಲ್ಲಿ ಅಂತ್ಯಕ್ರಿಯೆ?
ಎರಡನೇ ಮಗಳಾದ ಮನುಶ್ರೀ ತಾಯಿಯೊಂದಿಗೆ ರಾಮಾಂಜಿನಪ್ಪ ಮನೆಗೆ ಮನೆಗೆಲಸಕ್ಕೆ ಹೋಗುತ್ತಿದ್ದಳು. ಶುಕ್ರವಾರ ತಾಯಿ ಮಂಜುಳ ಬದಲಾಗಿ ಮನುಶ್ರೀ ಒಬ್ಬಳೇ ತೆರಳಿದ್ದಳು ಎನ್ನಲಾಗಿದ್ದು ಮಧ್ಯಾಹ್ನದ ವೇಳೆಗೆ ಮನುಶ್ರೀ ನಿಗೂಢವಾಗಿ ಮೃತಪಟ್ಟಿದ್ದಾಳೆ. ಬೆಳಗಾಗುವುದರೊಳಗೆ ಮರಣೋತ್ತರ ಪರೀಕ್ಷೆ ನಡೆಸಿದ ಅಧಿಕಾರಿಗಳು ಪೋಷಕರಿಗೆ ಮೃತದೇಹ ಹಸ್ತಾಂತರಿಸಿದ್ದು ಪೋಷಕರು ತರಾತುರಿಯಲ್ಲಿ ಅಂತ್ಯಕ್ರಿಯೆ ನೆರವೇರಿಸಿದ್ದಾರೆ.
ಆತ್ಮಹತ್ಯೆ ಮಾಡಿಕೊಂಡಿದ್ದಾಳೆ
ಮನುಶ್ರೀ ಸಾವಿನ ಬಗ್ಗೆ ತಂದೆ ಶಿವಣ್ಣ ಮಗಳು ಆತ್ಮಹತ್ಯೆ ಮಾಡಿ ಕೊಂಡಿದ್ದಾಳೆ ಎಂದು ಹೇಳಿದ್ದಾರೆ. ಕಳೆದ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಅನುತ್ತೀರ್ಣಳಾಗಿದ್ದ ಮನುಶ್ರೀ ಪುನಃ ಪರೀಕ್ಷೆ ಬರೆಯಲು ನಿರಾಕರಿಸಿದ್ದಳಂತೆ. ಆ ಕಾರಣಕ್ಕೆ ಬೈದಿದ್ದೆ. ಇದರಿಂದ ಮನನೊಂದು ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಶಿವಣ್ಣ ಮಹಿತಿ ನೀಡಿದ್ದಾರೆ.
ಜಿಲ್ಲಾ ಪಂಚಾಯಿತಿ ಸದಸ್ಯ ರಾಮಾಂಜಿನಪ್ಪ ಅವರು, ಮೃತ ಬಾಲಕಿಯ ಬಗ್ಗೆ ನನಗೆ ಹೆಚ್ಚು ಮಾಹಿತಿ ಇಲ್ಲಾ ಎಂದಿದ್ದಾರೆ. ಅವರ ತಂದೆ ತಾಯಿಗಳು ಮನೆಗೆ ಬಂದು ಆಕೆಯನ್ನ ನಿಂದಿಸಿದ್ದರು. ಇದರಿಂದ ಮನನೊಂದು ಬಾಲಕಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಹೇಳಿಕೆ ಕೊಟ್ಟಿದ್ದಾರೆ.
ಆತ್ಮಹತ್ಯೆ ಮಾಡಿಕೊಳ್ಳುವ ಮನಸ್ಥಿಯವಳಲ್ಲ
ಆದರೆ ಮನುಶ್ರೀ ಆತ್ಮಹತ್ಯೆ ಮಾಡಿಕೊಳ್ಳುವ ಮನಸ್ಥಿಯವಳಲ್ಲ. ಮನುಶ್ರೀಯ ಸಾವಿನ ಸುದ್ದಿ ತಿಳಿದ ಬಳಿಕವೇ ಪೋಷಕರು ರಾಮಾಂಜಿನಪ್ಪ ಮನೆಗೆ ಹೋಗಿದ್ದಾರೆ. ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಅನುತ್ತೀರ್ಣಳಾದಾಗಲೂ ಮನುಶ್ರೀ ಧೃತಿಗೆಡದೆ ಸಕರಾತ್ಮವಾಗಿ ಮಾತನಾಡುತ್ತಿದ್ದಳು. ಹೀಗಾಗಿ ಆತ್ಮಹತ್ಯೆ ಮಾಡಿಕೊಳ್ಳುವ ಹುಡುಗಿ ಮನಸ್ಥಿತಿ ಅವಳಲ್ಲ.
ಒಂದೊಮ್ಮೆ ಆತ್ಮಹತ್ಯೆ ಮಾಡಿಕೊಂಡಿದ್ದರೂ, ಬೆರೆಯವರ ಮನೆಯಲ್ಲಿ ಆತ್ಮಹತ್ಯೆ ಯಾಕೆ ಮಾಡಿಕೊಳ್ಳುತ್ತಾರೆ? ಎಂದು ಸ್ಥಳೀಯರು ಆರೋಪಿಸಿದ್ದಾರೆ. ಮನುಶ್ರೀ ಮೇಲೆ ಅತ್ಯಾಚಾರ ಯತ್ನ ನಡೆದಿರಬಹುದು ಇದೇ ಕಾರಣಕ್ಕೆ ಹತ್ಯೆಯಾಗಿರಬಹುದು ಪ್ರಕರಣವನ್ನು ಮುಚ್ಚಿಹಾಕಲು ಪೋಷಕರಿಗೆ ಬೆದರಿಸಿ ಸುಳ್ಳು ಹೇಳಿಕೆ ನೀಡುವಂತೆ ಮಾಡಿದ್ದಾರೆ ಎಂದೂ ಸ್ಥಳೀಯ ನಿವಾಸಿಗಳುಆರೋಪಿಸಿದ್ದಾರೆ. ಆದರೆ ಆ ಬಗ್ಗೆ ಯಾವುದೇ ಖಚಿತತೆ ಇಲ್ಲ.
ಪ್ರಕರಣ ಮುಚ್ಚುಹಾಕುವ ಪ್ರಯತ್ನ?
ರಾಮಾಂಜಿನಪ್ಪ ಹಾಲಿ ಜಿ ಪಂ ಸದಸ್ಯರಾಗಿದ್ದು ಅವರ ಮೂವರು ಮಕ್ಕಳು ಉನ್ನತ ಮಟ್ಟದ ಅಧಿಕಾರಿಗಳಿದ್ದಾರೆ ಎಲ್ಲರೂ ಸೇರಿ ತಮ್ಮ ಪ್ರಭಾವ ಬಳಸಿ ಪ್ರಕರಣವನ್ನು ವ್ಯವಸ್ಥಿತವಾಗಿ ಮುಚ್ಚಿಹಾಕುವ ಪ್ರಯತ್ನ ನಡೆಸಿದ್ದಾರೆ ಎಂದೂ ಸ್ಥಳೀಯರು ದೂರುತ್ತಿದ್ದಾರೆ ಎನ್ನಲಾಗಿದೆ. ಇದಕ್ಕೆ ಪೂರಕವೆಂಬಂತೆ ಘಟನೆ ನಡೆದು ಒಂದು ದಿನ ಕಳೆದರೂ ಪೋಲಿಸ್ ಹಿರಿಯ ಅಧಿಕಾರಿಗಳಿಗೆ ಸರಿಯಾದ ಮಾಹಿತಿ ಇಲ್ಲಾ ಎಂದರೆ ಇದು ಪೊಲೀಸರ ನಿರ್ಲಕ್ಷ್ಯನಾ ಅಥವಾ ಪ್ರಕರಣ ಮುಚ್ಚಿಹಾಕುವ ಯತ್ನನಾ ಎಂಬ ಅನುಮಾನ ವ್ಯಕ್ತವಾಗಿದೆ. ಈಗಾಗಿ ಈ ಪ್ರಕರಣವನ್ನು ಉನ್ನತ ಮಟ್ಟದಲ್ಲಿ ತನಿಖೆ ನಡೆಸಿದ್ದೆ ಆದರೆ ಸತ್ಯಾಸತ್ಯತೆ ತಿಳಿಯಲಿದೆ ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.