ಕೇರಳದಲ್ಲಿ ಮತ್ತೆ ನಿಪಾಹ್ ವೈರಸ್ ಭೀತಿ, ಓರ್ವ ಆಸ್ಪತ್ರೆಗೆ ದಾಖಲು
ತಿರುವನಂತಪುರಂ, ಜೂನ್ 3: ಕೇರಳದಲ್ಲಿ ಮತ್ತೆ ನಿಪಾಹ್ ವೈರಸ್ ಭೀತಿ ಎದುರಾಗಿದೆ, 23 ವರ್ಷದ ವ್ಯಕ್ತಿಯೊಬ್ಬ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಕಳೆದ ವರ್ಷ ನಿಪಾಹ್ ವೈರಸ್ನಿಂದಾಗಿ 17 ಮಂದಿ ಮೃತಪಟ್ಟಿದ್ದರು. ವೈರಲ್ ಇನ್ಫೆಕ್ಷನ್ ಹಾಗೂ ನಿಪಾಹ್ ವೈರಸ್ ಲಕ್ಷಣಗಳಿದ್ದ ಕಾರಣ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ ಎಂದು ಎರ್ನಾಕುಲಮ್ ಜಿಲ್ಲೆಯ ವೈದ್ಯಾಧಿಕಾರಿ ಡಾ. ಎಂ.ಕೆ.ಕುಟ್ಟಪ್ಪನ್ ತಿಳಿಸಿದ್ದಾರೆ.
ಮಾರಣಾಂತಿಕ ನಿಪಾಹ್ ವೈರಸ್ ಹೇಗೆ ಹರಡುತ್ತೆ ? ಮುನ್ನೆಚ್ಚರಿಕೆ ಏನು?
ಈಗಾಗಲೇ ವ್ಯಕ್ತಿಯ ರಕ್ತದ ಸ್ಯಾಂಪಲ್ ತೆಗೆದು ಎರಡು ಇನ್ಸ್ಟಿಟ್ಯೂಟ್ ಗಳಿಗೆ ಕಳುಹಿಸಲಾಗಿದೆ.ಯಾರೂ ಆತಂಕಪಡುವ ಅಗತ್ಯವಿಲ್ಲ ವರದಿ ಇಂದು ಕೈಸೇರಲಿದೆ ಎಂದು ತಿಳಿಸಿದ್ದಾರೆ.
ಕೆಲವು ದಿನಗಳ ಹಿಂದೆಯೂ ಸಾಕಷ್ಟು ಮಂದಿ ಚಿಕಿತ್ಸೆಗೆಂದು ಬಂದಿದ್ದರು ಆದರೆ ವರದಿಯಲ್ಲಿ ನಿಪಾಹ್ ವೈರಸ್ ಇಲ್ಲ ಎಂದು ಬಂದಿತ್ತು. ಎರ್ನಾಕುಲ್ ವಿದ್ಯಾರ್ಥಿ ಇಡುಕಿಗೆ ತರಬೇತಿಗಾಗಿ ಬಂದಿದ್ದ, ಮನೆಗೆ ವಾಪಸಾದಾಗ ತೀವ್ರ ಜ್ವರ ಕಾಣಿಸಿಕೊಂಡಿತ್ತು ಎಂದು ಆರೋಗ್ಯ ಸಚಿವೆ ಕೆಕೆ ಶೈಲಜಾ ಮಾಹಿತಿ ನೀಡಿದ್ದಾರೆ.
ನಿಪಾಹ್ ವೈರಸ್ ಎಂದರೇನು? ಮಾರಣಾಂತಿಕ ಜ್ವರದ ಕುರಿತು ಮಾಹಿತಿ
ಸಾಮಾನ್ಯವಾಗಿ ಈ ನಿಪಾಹ್ ವೈರಾಣುಗಳು, ಒಂದು ಬಗೆಯ ಬಾವಲಿಯಿಂದ (ಫ್ರೂಟ್ ಬ್ಯಾಟ್ಸ್) ಹರಡಬಹುದಾದ ವೈರಸ್ ಆಗಿದ್ದು, ಈ ವೈರಸ್ ಸೋಂಕು ತಗುಲಿರುವ ವ್ಯಕ್ತಿಯ ಸಂಪರ್ಕಕ್ಕೆ ಬೇರೆ ವ್ಯಕ್ತಿ ಬಂದರೆ ಅಂದರೆ, ಸೋಂಕಿನಿಂದ ಕೂಡಿದ ವ್ಯಕ್ತಿಯ ಜೊಲ್ಲು, ಎಂಜಲು, ಅಥವಾ ವಾಂತಿಯ ಸ್ಪರ್ಶವಾದರೆ ಈ ವೈರಾಣು ಬೇರೊಬ್ಬರಿಗೆ ಹರಡುತ್ತದೆ.
ಈ ಸೋಂಕು ಪತ್ತೆಯಾಗಿದ್ದು ಮೊದಲು ಮಲೇಶಿಯಾದಲ್ಲಿ
ನಿಪಾಹ್ ವೈರಾಣುವನ್ನು ಮೊದಲ ಬಾರಿಗೆ 1998ರಲ್ಲಿ ಮಲೇಷ್ಯಾದಲ್ಲಿ ಗುರುತಿಸಲಾಯಿತು. ಆದರೆ ಆ ಸಂದರ್ಭದಲ್ಲಿ ಈ ಸೋಂಕು ಹಂದಿಗಳ ಮುಖಾಂತರ ಹಬ್ಬುತ್ತಿತ್ತು. ಎನ್ಸಿಫಾಲಿಟಿಸ್-ಇನ್ಡ್ಯೂಸಡ್ ಮಯೋಕಾರ್ಡಿಟಿಸ್ (ಎನ್ಇಎಂ) ಮಾದರಿಯ ವೈರಸ್ ಆಗಿರುವ ನಿಪಾಹ್, ಹೆಂಡ್ರಾ ವೈರಾಣುವನ್ನೇ ಹೋಲುತ್ತದೆ ಎಂದು ವೈದ್ಯರು ಅಭಿಪ್ರಾಯಪಟ್ಟಿದ್ದರು. ಅಂದೇ ವೈದ್ಯರು ಈ ವೈರಾಣು, ಹಂದಿ, ಕೋಳಿಯಂತಹ ಮಾಂಸಾಹಾರದಿಂದ ಈ ವೈರಾಣು ಹರಡಲ್ಪಡುತ್ತದೆ ಎಂದು ಶಂಕಿಸಿದ್ದರು.
ನಿಪಾಹ್ ಸೋಂಕು ತಗುಲಿದೆ ಗೊತ್ತಾಗುವುದು ಹೇಗೆ
ನಿಪಾಹ್ ಸೋಂಕು ನಮ್ಮನ್ನು ಆವರಿಸಿದರೆ, ಮೊದಲಿಗೆ ಅದು ಮೆದುಳಿನ ಮೇಲೆ ತನ್ನ ದುಷ್ಪರಿಣಾಮ ಬೀರುತ್ತದೆ. ಆರಂಭಲ್ಲಿ ಮೆದುಳಿನ ನರಮಂಡಲದ ಮೇಲೆ ದಾಳಿ ಮಾಡುವ ವೈರಾಣು ಪತ್ತೆಯಾಗಲು 5ರಿಂದ 14 ದಿನಗಳೇ ಬೇಕಾಗುತ್ತದೆ. ಸಾಮಾನ್ಯ ಜ್ವರ, ವಿಪರೀತ ತಲೆನೋವು, ಅತಿಯಾದ ಆಯಾಸ, ಅತಿಯಾದ ನಿದ್ರಾಹೀನತೆ, ದಿಗ್ಭ್ರಮೆ ಮತ್ತು ಮಾನಸಿಕ ಗೊಂದಲ ಈ ಸೋಂಕಿನ ಲಕ್ಷಣಗಳಾಗಿವೆ.
'ನಿಪಾಹ್' ಹರಡದಂತೆ ಎಚ್ಚರವಹಿಸುವುದೇ ಮೊದಲ ಚಿಕಿತ್ಸೆ
ನಿಪಾಹ್ ವೈರಸ್ನಿಂದ ದೂರವಿರಲು ಏನು ಮಾಡಬೇಕು
ಯಾವುದೇ ರೀತಿಯ ಸೋಂಕುಗಳಾದರೂ ಅದರ ನಿರ್ಮೂಲನೆ ಅಥವಾ ನಿಯಂತ್ರಣ ಮನಷ್ಯನ ರೋಗ ನಿರೋಧಕ ಸಾಮರ್ಥ್ಯದ ಮೇಲೆ ಆಧಾರಿತವಾಗಿರುತ್ತದೆ. ಹೀಗಾಗಿ ನಮ್ಮ ದೇಹದ ರೋಗ ನಿರೋಧಕ ಶಕ್ತಿ ಹೆಚ್ಚಿಸಬಲ್ಲ ಆಹಾರ ಪದಾರ್ಥಗಳು, ಡಯಟ್ ಗಳನ್ನು ಪಾಲಿಸುವುದು ಉತ್ತಮ. ಅಲ್ಲದೆ ರೋಗ ನಿರೋಧಕ ಶಕ್ತಿ ಹೆಚ್ಚಿಸಬಲ್ಲ ಹರ್ಬಲ್ ಟೀ (ಗಿಡಮೂಲಿಕಾ ಚಹಾ) ಅಥವಾ ವಿವಿಧ ಬಗೆಯ ಕಷಾಯಗಳನ್ನು ಆಗಾಗ ಸೇವಿಸುತ್ತಿರಬೇಕು.
ಯಾರಿಗೆ ಹೆಚ್ಚು ಅಪಾಯ
ಈ ವೈರಸ್ ಮನುಷ್ಯರಿಗಷ್ಟೇ ಅಲ್ಲದೆ ಹಂದಿಗಳಿಗಳು ಹಾಗೂ ಇನ್ನಿತರೆ ಸಾಕು ಪ್ರಾಣಿಗಳಿಗೆ ಹರಡಬಲ್ಲದ್ದಾಗಿದೆ, ಆದಷ್ಟು ಸಾಕು ಪ್ರಾಣಿಗಳನ್ನು ಹೊರಗೆ ಕಳುಹಿಸದೆ ಮನೆಯಲ್ಲೇ ಇರಿಸಿಕೊಳ್ಳುವುದು ಉತ್ತಮ.