ಗಾಯಕ ಯೇಸುದಾಸ್ ಪತ್ರಕ್ಕೆ ಸ್ಪಂದನೆ, ಪದ್ಮನಾಭ ದೇಗುಲ ಭೇಟಿಗೆ ಒಪ್ಪಿಗೆ
ತಿರುವನಂತಪುರಂ, ಸೆಪ್ಟೆಂಬರ್ 18: "ನಮಗೆಲ್ಲ ಯೇಸುದಾಸ್ ಅವರ ಹಿಂದುತ್ವದ ಮೇಲಿನ ನಂಬಿಕೆ ಬಗ್ಗೆ ಗೊತ್ತಿದೆ. ಈ ಬಗ್ಗೆ ಅವರು ಘೋಷಣೆಯನ್ನೇ ಮಾಡಿದ್ದಾರೆ. ಅವರು ದೇವಸ್ಥಾನಕ್ಕೆ ಭೇಟಿ ನೀಡುವುದರಲ್ಲಿ ಯಾವುದೇ ಆಕ್ಷೇಪವಿಲ್ಲ" ಎಂದು ತಿರುವನಂತಪುರಂ ಅನಂತಪದ್ಮನಾಭ ದೇವಾಲಯದ ಅಧಿಕಾರಿಗಳು ಹೇಳಿದ್ದಾರೆ.
ತಿರುವನಂತಪುರದಲ್ಲಿರುವ ಅನಂತ ಪದ್ಮನಾಭ ಸ್ವಾಮಿ ದೇವರ ಪೂಜೆಗೆ ಅವಕಾಶ ಮಾಡಿಕೊಡಬೇಕು ಎಂದು ಗಾಯಕ ಯೇಸುದಾಸ್ ಅವರು ದೇವಾಲಯದ ಆಡಳಿತ ಮಂಡಳಿಗೆ ಪತ್ರ ಬರೆದಿದ್ದರು. ಅದಕ್ಕೆ ಪ್ರತಿಕ್ರಿಯೆಯಾಗಿ ಮೇಲ್ಕಂಡ ಪ್ರತಿಕ್ರಿಯೆ ಬಂದಿದೆ.
ಗಾಯಕ ಯೇಸುದಾಸ್ ಬಿಚ್ಚಿಟ್ಟ ದೇವರ ಅನುಗ್ರಹ ಪಡೆಯುವ ರಹಸ್ಯ
ತಿರುವನಂತಪುರದಲ್ಲಿರುವ ಅನಂತ ಪದ್ಮನಾಭ ದೇಗುಲದಲ್ಲಿ ಹಿಂದೂ ಧರ್ಮದ ಬಗ್ಗೆ ನಂಬಿಕೆ ಇರುವವರನ್ನು ಮಾತ್ರ ಒಳಗೆ ಬಿಡಲಾಗುತ್ತದೆ. "ಗಾಯಕ ಯೇಸುದಾಸ್ ಅವರ ಹುಟ್ಟಿನಿಂದ ಕ್ರಿಶ್ಚಿಯನ್ನರು. ಅವರೊಂದು ಮನವಿ ಕಳಿಸಿದ್ದಾರೆ ಮತ್ತು ಹಿಂದೂ ಧರ್ಮದ ಬಗ್ಗೆ ಅವರಿಗಿರುವ ನಂಬಿಕೆ ಬಗ್ಗೆ ಅದರಲ್ಲಿ ತಿಳಿಸಿದ್ದಾರೆ" ಎಂದು ದೇವಾಲಯದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ದೇವಾಲಯದ ಕಾರ್ಯ ನಿರ್ವಹಣಾಧಿಕಾರಿ ವಿ.ರತೀಸನ್ ಮಾಧ್ಯಮದ ಜತೆ ಮಾತನಾಡಿ, ಗಾಯಕ ಯೇಸುದಾಸ್ ಅವರು ಯಾವ ದಿನದಂದು ದೇವಾಲಯಕ್ಕೆ ಬರುವುದಾಗಿ ತಿಳಿಸಿಲ್ಲ. ಆದರೆ ಸಂದೇಶ ತಂದವರ ಪ್ರಕಾರ ವಿಜಯದಶಮಿಯಂದು ಬರಲು ಅಪೇಕ್ಷಿಸಿದ್ದಾರೆ. ಸೆಪ್ಟೆಂಬರ್ ಮೂವತ್ತಕ್ಕೆ ವಿಜಯದಶಮಿ ಇದೆ.
ನಮ್ಮ ನಿಯಮಗಳ ಪ್ರಕಾರ, ಯಾರಿಗೆ ಹಿಂದೂ ಧರ್ಮದ ಮೇಲೆ ನಂಬಿಕೆ ಇದೆಯೋ ಅವರು ದೇವಾಲಯಕ್ಕೆ ಬರಬಹುದು ಮತ್ತು ಪೂಜೆ ಸಲ್ಲಿಸಬಹುದು. ಅದರ ಮೇಲೆ ಯಾವುದೇ ನಿರ್ಬಂಧವಿಲ್ಲ ಎಂದು ಅವರು ತಿಳಿಸಿದ್ದಾರೆ.
ಯೇಸುದಾಸ್ ರಿಂದ ಕೊಲ್ಲೂರಿನಲ್ಲಿ ಚಂಡಿಕಾ ಹೋಮ, ಜನ್ಮ ದಿನಾಚರಣೆ
ವಿದೇಶೀಯರು ಹಾಗೂ ಹಿಂದೂಯೇತರರು ದೇವಾಲಯದ ಒಳಗೆ ಬರುವ ಮುಂಚೆ ಹಿಂದೂ ಧರ್ಮದ ಬಗ್ಗೆ ತಮಗಿರುವ ನಂಬಿಕೆ ಬಗ್ಗೆ ಘೋಷಣೆ ಮಾಡಬೇಕು ಎಂಬ ನಿಯಮವಿದೆ ಎಂದು ಅಧಿಕಾರಿ ಹೇಳಿದ್ದಾರೆ.
ರೋಮನ್ ಕ್ಯಾಥೋಲಿಕ್ ಕುಟುಂಬಕ್ಕೆ ಸೇರಿದ ಗಾಯಕ ಯೇಸುದಾಸ್ ಅವರಿಗೆ ಈ ಹಿಂದೆ ಗುರುವಾಯೂರಿನ ಕೃಷ್ಣ ದೇಗುಲಕ್ಕೆ ಅನುಮತಿ ನಿರಾಕರಿಸಲಾಗಿತ್ತು. ಆದರೆ ಯೇಸುದಾಸ್ ಅವರು ಶಬರಿಮಲೆಯ ಅಯ್ಯಪ್ಪ ದೇಗುಲ ಹಾಗೂ ಕರ್ನಾಟಕದ ಕೊಲ್ಲೂರಿನಲ್ಲಿರುವ ಮೂಕಾಂಬಿಕಾ ದೇಗುಲಕ್ಕೆ ಆಗಾಗ ಭೇಟಿ ನೀಡುತ್ತಾರೆ.