ಅಯ್ಯಪ್ಪನ ನೋಡದೆ ಹಿಂದಿರುಗುವುದಿಲ್ಲ : ತೃಪ್ತಿ ದೇಸಾಯಿ ಚಾಲೆಂಜ್
ಕೊಚ್ಚಿನ್, ನವೆಂಬರ್ 16 : ಎಷ್ಟೇ ಪ್ರತಿಭಟನೆ ಮಾಡಲಿ ಅಯ್ಯಪ್ಪ ಸ್ವಾಮಿಯ ದರುಶನ ಮಾಡೇ ಮಾಡುತ್ತೇನೆ ಎಂದು ಪಣ ತೊಟ್ಟಿರುವ, ಲಿಂಗ ಸಮಾನತೆಗಾಗಿ ಹೋರಾಡುತ್ತಿರುವ ತೃಪ್ತಿ ದೇಸಾಯಿ ಅವರಿಗೆ ಬೆಳಿಗ್ಗೆ 4.20ರಿಂದಲೇ ಕೊಚ್ಚಿನ್ ಏರ್ಪೋರ್ಟ್ ನಲ್ಲಿ ದಿಗ್ಬಂಧನ ಹಾಕಲಾಗಿದೆ.
ಐವತ್ತು ವರ್ಷ ದಾಟಿರದ ತೃಪ್ತಿ ದೇಸಾಯಿ ಐದಾರು ಮಹಿಳೆಯರನ್ನು ಸೇರಿಸಿಕೊಂಡು ಶಬರಿಮಲೆಗೆ ಹೊರಟಿದ್ದಾರೆ. ಕೆಲದಿನಗಳ ಬಿಡುವಿನ ನಂತರ ಶಬರಿಮಲೆ ದೇಗುಲ ಇಂದು ಮತ್ತೆ ತೆರೆಯಲಿರುವುದರಿಂದ ಪುಣೆ ಮೂಲದ 'ಭೂಮಾತಾ ಬ್ರಿಗೇಡ್' ಸಂಸ್ಥಾಪಕಿ ತೃಪ್ತಿ ದೇಸಾಯಿ ಶಬರಿಮಲೆ ಕ್ಷೇತ್ರಕ್ಕೆ ಹೊರಟಿದ್ದಾರೆ.
ಎಲ್ಲ ಮಹಿಳೆಯರಿಗೆ ಅಯ್ಯಪ್ಪ ದರ್ಶನಕ್ಕೆ ಅವಕಾಶ ಮಾಡಿಕೊಡಬೇಕೆಂದು ಸರ್ವೋಚ್ಚ ನ್ಯಾಯಾಲಯ ಐತಿಹಾಸಿಕ ತೀರ್ಪು ನೀಡಿದ್ದರೂ, ಇದನ್ನು ಒಪ್ಪದ ಭಕ್ತಾದಿಗಳು, 10ರಿಂದ 50 ವರ್ಷದೊಳಗಿನ ಮಹಿಳೆಯರಿಗೆ ಅಯ್ಯಪ್ಪ ದೇಗುಲದೊಳಗೆ ಪ್ರವೇಶಿಸಲು ಅವಕಾಶ ನೀಡಲೇಬಾರದೆಂದು ಉಗ್ರ ಪ್ರತಿಭಟನೆ ಮಾಡುತ್ತಿದ್ದಾರೆ. ಮುನ್ನೂರಕ್ಕೂ ಹೆಚ್ಚು ಪ್ರತಿಭಟನಾಕಾರರು ಅಲ್ಲಿ ಜಮಾಯಿಸಿದ್ದಾರೆ.
ಶಬರಿಮಲೆ ಪ್ರವೇಶಕ್ಕೆ ಸಜ್ಜಾದ ತೃಪ್ತಿ ದೇಸಾಯಿ: ಪ್ರತಿಭಟನೆಯ ಸ್ವಾಗತ
ಪುಣೆಯಲ್ಲಿ ನೆಲೆಸಿದ್ದರೂ ಕರ್ನಾಟಕದ ನಿಪ್ಪಾಣಿಯವರಾದ ತೃಪ್ತಿ ದೇಸಾಯಿ ಅವರು ಹಿಂದೆ ಕೂಡ, ಮಹಾರಾಷ್ಟ್ರದಲ್ಲಿರುವ ಶನಿ ಶಿಂಗಣಾಪುರ, ಹಾಜಿ ಅಲಿ ದರ್ಗಾ, ಮಹಾಲಕ್ಷ್ಮೀ ದೇವಸ್ಥಾನ, ತ್ರಯಂಬಕೇಶ್ವರ ಶಿವನ ದೇವಸ್ಥಾನದಲ್ಲಿ ಕೂಡ ಮಹಿಳೆಯರಿಗೆ ಪ್ರವೇಶಿಸಲು ಅವಕಾಶ ಮಾಡಿಕೊಡಬೇಕೆಂದು ಹೋರಾಡಿ ಯಶಸ್ವಿಯಾಗಿದ್ದಾರೆ. ಈಗ ಶಬರಿಮಲೆ ದೇವಸ್ಥಾನವನ್ನೂ ಪ್ರವೇಶಿಸಬೇಕೆಂದು ಹಠ ಹಿಡಿದಿದ್ದಾರೆ.
ಏರ್ಪೋರ್ಟಲ್ಲಿ ತೃಪ್ತಿ ದೇಸಾಯಿಗೆ ದಿಗ್ಬಂಧನ
ಕೊಚ್ಚಿ ವಿಮಾನ ನಿಲ್ದಾಣದಿಂದ ಹೊರಗೆ ಹೋಗುವ ಎಲ್ಲ ಪ್ರಮುಖ ಗೇಟುಗಳಲ್ಲಿ ಪ್ರತಿಭಟನಾಕಾರರು ದಿಗ್ಬಂಧನ ಹಾಕಿದ್ದಾರೆ. ತೃಪ್ತಿ ದೇಸಾಯಿಗೆ ರಕ್ಷಣೆ ನೀಡುತ್ತಿರುವ ಪೊಲೀಸರು ಮತ್ತೊಂದು ಗೇಟಿನಿಂದ ಹೊರ ಕರೆದುಕೊಂಡು ಹೋಗಲು ಯತ್ನಿಸಿದರೂ ಅಲ್ಲಿಯೂ ಪ್ರತಿಭಟನಾಕಾರರು ತೃಪ್ತಿಯನ್ನು ಹೋಗಲು ಬಿಡುತ್ತಿಲ್ಲ. ಇದರಿಂದ ಕೊಚ್ಚಿ ವಿಮಾನ ನಿಲ್ದಾಣದಲ್ಲಿ ತ್ವೇಷಮಯ ಪರಿಸ್ಥಿತಿ ನಿರ್ಮಾಣವಾಗಿದೆ. ಪ್ರತಿಭಟನಾಕಾರರು ಶಾಂತಿಯುತವಾಗಿ ಪ್ರತಿಭಟನೆ ಮಾಡುತ್ತಿದ್ದಾರಾದರೂ, ಪೊಲೀಸರು ಬಲವಂತವಾಗಿ ತೃಪ್ತಿಯನ್ನು ಕರೆದೊಯ್ಯಲು ಯತ್ನಿಸಿದರೆ ಉಗ್ರ ಪ್ರತಿಭಟನೆ ಮಾಡುವುದಾಗಿ ಎಚ್ಚರಿಸಿದ್ದಾರೆ.
ಶಬರಿಮಲೆ: ಕೇರಳ ಸಿಎಂ ಪಿಣರಾಯಿ ಮುಂದಿಟ್ಟ ಹೊಸ ಸೂತ್ರಕ್ಕೆ ತಂತ್ರಿಗಳೇ ಬೇಸ್ತು?
ಅಯ್ಯಪ್ಪನ ದರ್ಶನ ಪಡೆಯದೆ ಹಿಂದಿರುಗುವುದಿಲ್ಲ
"ನಾವು ಅಯ್ಯಪ್ಪನ ದರ್ಶನ ಪಡೆಯದೆ ಮಹಾರಾಷ್ಟ್ರಕ್ಕೆ ಹಿಂದಿರುಗುವುದಿಲ್ಲ" ಎಂದು ಪ್ರತಿಭಟನಾಕಾರರಿಗೆ ಸವಾಲು ಹಾಕಿದ್ದಾರೆ ಇನ್ನೂ ಐವತ್ತರೊಳಗಿನ ತೃಪ್ತಿ ದೇಸಾಯಿ. ಪ್ರತಿಭಟನಾಕಾರರು ನಮ್ಮನ್ನು ಹೆದರಿಸುತ್ತಿದ್ದಾರೆಯೆ? ಅಥವಾ ನಾವು ಹೇಗೆ ಶಬರಿಮಲೆಗೆ ಹೋಗುತ್ತೇವೆ ಎಂದು ಅವರೇ ಹೆದರಿದ್ದಾರೆಯೆ? ಎಂದು ವ್ಯಂಗ್ಯವಾಡಿರುವ ಅವರು, ಒಂದು ಬಾರಿ ನಿಳಕ್ಕಲ್ ತಲುಪಿದ ಮೇಲೆ ಶಬರಿಮಲೆಗೆ ಹೋಗಿಯೇ ಹೋಗುತ್ತೇವೆ, ಹೇಗೆ ತಡೆಯುತ್ತಾರೆ ನೋಡೇ ಬಿಡೋಣ ಎಂದು ಪ್ರತಿಭಟನಾಕಾರರಿಗೆ ಚಾಲೆಂಜ್ ಮಾಡಿದ್ದಾರೆ.
ಶಬರಿಮಲೆ ಬರ್ತಿದ್ದಾರೆ ತೃಪ್ತಿ ದೇಸಾಯಿ, ಸರ್ಕಾರವೇ ಭರಿಸಬೇಕಂತೆ ವೆಚ್ಚ
ತೃಪ್ತಿಯನ್ನು ಕರೆದೊಯ್ಯಲು ಟ್ಯಾಕ್ಸಿ ಚಾಲಕರ ಹಿಂದೇಟು
ನಿಳಕ್ಕಲ್ ತಲುಪಲು ಕೊಚ್ಚಿಯಿಂದ ತೃಪ್ತಿ ದೇಸಾಯಿ ಮತ್ತು ಮಹಿಳಾ ಬಳಗ ಎರಡು ಮೂರು ಟ್ಯಾಕ್ಸಿಗಳನ್ನು ಮೊದಲೇ ಬುಕ್ ಮಾಡಿದ್ದರೂ, ಪ್ರತಿಭಟನೆಯಿಂದಾಗಿ ಟ್ಯಾಕ್ಸಿ ಚಾಲಕರು ಬರಲು ಹಿಂದೇಟು ಹಾಕುತ್ತಿದ್ದಾರೆ. ಅವರನ್ನು ನಿಳಕ್ಕಲ್ ಗೆ ಕರೆದೊಯ್ದರೆ ಟ್ಯಾಕ್ಸಿಯನ್ನು ನಜ್ಜುಗುಜ್ಜು ಮಾಡುವುದಾಗಿ ಪ್ರತಿಭಟನಾಕಾರರು ಬೆದರಿಸಿದ್ದರಿಂದ ಟ್ಯಾಕ್ಸಿ ಚಾಲಕರೂ ಬರಲು ಹಿಂಜರಿಯುತ್ತಿದ್ದಾರೆ. ಬೇರೆ ದಾರಿ ಕಾಣದೆ ತೃಪ್ತಿ ದೇಸಾಯಿ ಮತ್ತು ಸಂಗಡಿಗರು ಏರ್ಪೋರ್ಟ್ ನಲ್ಲಿ ಬೆಳಗಿನ ತಿಂಡಿಯನ್ನು ನೆಲದ ಮೇಲೆಯೇ ಕುಳಿತು ಮುಗಿಸಿದರು.
ನ.17ಕ್ಕೆ ತೃಪ್ತಿ ದೇಸಾಯಿ ಜತೆ ಆರು ಮಹಿಳೆಯರು ಶಬರಿಮಲೆ ದೇಗುಲಕ್ಕೆ, ರಕ್ಷಣೆಗಾಗಿ ಮನವಿ
ಕೇರಳ ಸರಕಾರಕ್ಕೂ ತೃಪ್ತಿ ಸವಾಲು
ಕೇರಳ ಸರಕಾರಕ್ಕೆ ಕೂಡ ತೃಪ್ತಿ ದೇಸಾಯಿ ಅವರು ಸವಾಲು ಹಾಕಿದ್ದಾರೆ. ಸುಪ್ರೀಂ ಕೋರ್ಟ್ ಮಹಿಳೆಯರಿಗೆ ಶಬರಿಮಲೆಯ ಅಯ್ಯಪ್ಪ ದೇಗುಲ ಪ್ರವೇಶಿಸಲು ಅವಕಾಶ ಮಾಡಿಕೊಟ್ಟಿದ್ದರಿಂದ, ಪ್ರತಿಭಟನೆಯ ಹಿನ್ನೆಲೆಯಲ್ಲಿ ತಮಗೆ ಏನಾದರೂ ಹೆಚ್ಚೂಕಡಿಮೆಯಾದರೆ ಅದಕ್ಕೆ ಸರಕಾರವೇ ಜವಾಬ್ದಾರಿ ಎಂದಿದ್ದಾರೆ. ಅಲ್ಲದೆ, ತಮಗೆ ಸರ್ವರೀತಿಯ ಭದ್ರತೆ ನೀಡುವುದಲ್ಲದೆ, ತಮ್ಮ ಎಲ್ಲ ಖರ್ಚುಗಳನ್ನು ಕೇರಳ ಸರಕಾರವೇ ಭರಿಸಬೇಕು ಎಂದೂ ಆಗ್ರಹಿಸಿದ್ದಾರೆ. ಕೇರಳ ಸರಕಾರಕ್ಕೆ ಈ ಪ್ರಕರಣ ಬಿಸಿತುಪ್ಪವಾಗಿ ಪರಿಣಮಿಸಿದೆ. ಸರ್ವೋಚ್ಚ ನ್ಯಾಯಾಲಯದ ಆದೇಶವನ್ನು ಪಾಲಿಸುವುದೋ, ಶತಮಾನದ ಪದ್ಧತಿಯನ್ನೇ ಪಾಲಿಸಬೇಕೆಂದು ಪಟ್ಟುಹಿಡಿದಿರುವ ಭಕ್ತರನ್ನು ಬೆಂಬಲಿಸುವುದೋ?
ಮಂಡಲ-ಮಕರವಿಳಕ್ಕು ಯಾತ್ರೆ ಆರಂಭ
ಎಲ್ಲ ವಯೋಮಾನದ ಮಹಿಳೆಯರಿಗೆ ದೇಗುಲ ಪ್ರವೇಶಿಸಲು ಮತ್ತು ಪೂಜೆ ಸಲ್ಲಿಸಲು ಅವಕಾಶ ಮಾಡಿಕೊಡಬೇಕೆಂದು ಸೆಪ್ಟೆಂಬರ್ 28ರಂದು ಸರ್ವೋಚ್ಚ ನ್ಯಾಯಾಲಯದ ತೀರ್ಪು ಬಂದ ನಂತರ ಮೂರನೇ ಬಾರಿ ದೇವಸ್ಥಾನ ದರುಶನಕ್ಕೆ ತೆರೆಯಲಿದೆ. ಶುಕ್ರವಾರವೇ ಮಂಡಲ-ಮಕರವಿಳಕ್ಕು ಯಾತ್ರೆಯ ಸೀಸನ್ ಆರಂಭವಾಗುತ್ತಿದೆ. ಆದರೆ, ಕಳೆದ ಎರಡು ಬಾರಿ ಸಹ ಯಾವುದೇ ಮಹಿಳೆ ಪ್ರವೇಶಿಸಲು ಸಾಧ್ಯವಾಗಿಲ್ಲ. ಋತುಮತಿಯಾಗಿರುವ ಮಹಿಳೆ ಅಯ್ಯಪ್ಪ ಸ್ವಾಮಿಯ ದರ್ಶನ ಮಾಡಬಾರದು ಎಂದು ಶತಮಾನಗಳ ಹಳೆಯ ಸಂಪ್ರದಾಯ ಚಾಲ್ತಿಯಲ್ಲಿ ಇದ್ದುದರಿಂದ, ಎಷ್ಟೇ ಭದ್ರತೆ ನೀಡಿದರೂ ಯಾವುದೇ ಮಹಿಳೆ ಪ್ರವೇಶಿಸಲು ಭಕ್ತಾದಿಗಳು ಮತ್ತು ಪ್ರತಿಭಟನಾಕಾರರು ಅವಕಾಶ ಮಾಡಿಕೊಡುತ್ತಿಲ್ಲ.
ಶಾಂತಿ ಕದಡಲು ತೃಪ್ತಿ ಬಂದಿದ್ದಾರೆ : ಆರೋಪ
ತೃಪ್ತಿ ದೇಸಾಯಿ ಅವರು ಶಬರಿಮಲೆಗೆ ಅಯ್ಯಪ್ಪ ಸ್ವಾಮಿಯ ದರ್ಶನಕ್ಕೆಂದು ಬರುತ್ತಿಲ್ಲ. ಆದರೆ, ಅವರು ಶತಮಾನಗಳಷ್ಟು ಹಳೆಯದಾದ ಸಂಪ್ರದಾಯವನ್ನು ಮುರಿದು ಇಲ್ಲಿನ ಶಾಂತಿಗೆ ಭಂಗ ತರಲೆಂದೇ ಬರುತ್ತಿದ್ದಾರೆ ಎಂಬುದು ಭಕ್ತರ ಆಕ್ರೋಶದ ಕಿಡಿನುಡಿ. ಮಹಿಳಾ ಅಯ್ಯಪ್ಪ ಭಕ್ತರು, ಬಿಜೆಪಿ ಕಾರ್ಯಕರ್ತರು ಕೊಚ್ಚಿ ಏರ್ಪೋರ್ಟ್ ಹೊರಗಡೆ ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ. ಪುಣೆಯಲ್ಲಿ ನೆಲೆಸಿದ್ದರೂ ಕರ್ನಾಟಕದ ನಿಪ್ಪಾಣಿಯವರಾದ ತೃಪ್ತಿ ದೇಸಾಯಿ ಅವರು ಹಿಂದೆ ಕೂಡ, ಮಹಾರಾಷ್ಟ್ರದಲ್ಲಿರುವ ಶನಿ ಶಿಂಗಣಾಪುರ, ಹಾಜಿ ಅಲಿ ದರ್ಗಾ, ಮಹಾಲಕ್ಷ್ಮೀ ದೇವಸ್ಥಾನ, ತ್ರಯಂಬಕೇಶ್ವರ ಶಿವನ ದೇವಸ್ಥಾನದಲ್ಲಿ ಕೂಡ ಮಹಿಳೆಯರಿಗೆ ಪ್ರವೇಶಿಸಲು ಅವಕಾಶ ಮಾಡಿಕೊಡಬೇಕೆಂದು ಹೋರಾಡಿ ಯಶಸ್ವಿಯಾಗಿದ್ದಾರೆ.