5 ನಿಮಿಷಗಳಲ್ಲೇ 150ಕ್ಕೂ ಹೆಚ್ಚು ಪ್ರಯಾಣಿಕರ ಪ್ರಾಣ ಉಳಿದಿದ್ದು ಹೇಗೆ?
ತಿರುವನಂತಪುರಂ, ಆಗಸ್ಟ್.10: ಕೇರಳದ ಕ್ಯಾಲಿಕಟ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಐಎಕ್ಸ್-1344 ಸಂಖ್ಯೆಯ ಏರ್ ಇಂಡಿಯಾ ವಿಮಾನ ದುರಂತ ಸಂಭವಿಸಿದ ಕೆಲವೇ ಕೆಲವು ನಿಮಿಷಗಳಲ್ಲಿ ಏನೆಲ್ಲ ಬೆಳವಣಿಗೆಗಳು ನಡೆದವು ಎನ್ನುವುದು ಸಾಕಷ್ಟು ಕುತೂಹಲಕಾರಿ ಅಂಶವಾಗಿದೆ.
174 ಪ್ರಯಾಣಿಕರು, ಇಬ್ಬರು ಪೈಲೆಟ್, 6 ಏರ್ ಇಂಡಿಯಾ ಸಿಬ್ಬಂದಿ ಹಾಗೂ 10 ಶಿಶುಗಳೂ ಸೇರಿದಂತೆ 190 ಜನರಲ್ಲಿ ಸಾಧ್ಯವಾದಷ್ಟು ಪ್ರಯಾಣಿಕರ ಪ್ರಾಣ ಉಳಿಸುವುದಕ್ಕಾಗಿ ನಡೆಸಿದ ರಕ್ಷಣಾ ಕಾರ್ಯಾಚರಣೆಯ ಸಮರೋಪಾದಿಯಲ್ಲಿ ನಡೆಯಿತು. ಇದರ ನಡುವೆಯೂ 18 ಮಂದಿ ವಿಮಾನ ದುರಂತದಲ್ಲಿ ಪ್ರಾಣ ಬಿಟ್ಟಿದ್ದು, 150ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.
'ಕೇರಳ ವಿಮಾನ ದುರಂತಕ್ಕೆ ಟೇಬಲ್ಟಾಪ್ ರನ್ವೇ ಕಾರಣವಲ್ಲ'
ಏರ್ ಇಂಡಿಯಾ ವಿಮಾನ ದುರಂತ ಸಂಭವಿಸಿದ ನಂತರದ ಐದು ನಿಮಿಷಗಳಲ್ಲಿ ಏನೆಲ್ಲ ಬೆಳವಣಿಗೆಗಳು ನಡೆದವು ಎನ್ನುವುದರ ಕುರಿತು ಕೇಂದ್ರ ಕೈಗಾರಿಕಾ ಭದ್ರತಾ ಸಿಬ್ಬಂದಿ ನೀಡಿದ ಮಾಹಿತಿ ಆಧರಿಸಿ ಎನ್ ಡಿ ಟಿವಿಯು ವರದಿಯನ್ನು ಪ್ರಕಟಿಸಿದೆ. ಪ್ರತಿಯೊಂದು ನಿಮಿಷಗಳು ಎಷ್ಟೊಂದು ಪ್ರಮುಖ ಮತ್ತು ಮೌಲ್ಯಯುತವಾಗಿತ್ತು ಎನ್ನುವುದನ್ನು ಘಟನೆಯು ಸ್ಪಷ್ಟವಾಗಿ ಹೇಳುವಂತಿದೆ.
ರನ್ ವೇನಲ್ಲೇ ಇತ್ತು 35 ಮೀಟರ್ ಆಳದ ಗುಂಡಿ
ದುಬೈನಿಂದ ಸಿಬ್ಬಂದಿ ಸಹಿತ 190 ಜನರಿದ್ದ ಏರ್ ಇಂಡಿಯಾ ವಿಮಾನವು ರಾತ್ರಿ 7.40 ಗಂಟೆ ಸುಮಾರಿಗೆ ಕ್ಯಾಲಿಕಟ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಪ್ರವೇಶಿಸಿತು. ಇನ್ನೇನು ಲ್ಯಾಂಡಿಂಗ್ ಆಗುವ ಸಂದರ್ಭದಲ್ಲಿ ವಿಮಾನದ ಚಕ್ರವು 35 ಮೀಟರ್ ಆಳದ ಗುಂಡಿಗೆ ಜಾರಿ ಬಿದ್ದಿತು ಎಂದು ಸಿಐಎಸ್ಎಫ್ ಮೂಲಗಳಿಂದ ತಿಳಿದು ಬಂದಿದೆ.
ಸಿಐಎಸ್ಎಫ್ ತಂಡಕ್ಕೆ ಮೊದಲ ಸಂದೇಶ ರವಾನೆ
ಏರ್ ಇಂಡಿಯಾ ವಿಮಾನವು ಸ್ಕಿಡ್ ಆಗುತ್ತಿದ್ದಂತೆ ವಿಮಾನ ನಿಲ್ದಾಣದ 8ನೇ ಗೇಟ್ ಬಳಿಯಿದ್ದ ಸಹಾಯಕ ಸಬ್ ಇನ್ಸ್ ಪೆಕ್ಟರ್ ಅಜಿತ್ ಸಿಂಗ್ ಅವರು ಕೇಂದ್ರ ಕೈಗಾರಿಕಾ ಭದ್ರತಾ ಪಡೆ(ಸಿಐಎಸ್ಎಫ್)ಯ ಕಂಟ್ರೋಲ್ ರೂಮ್ ಗೆ ವಾಕಿ-ಟಾಕಿ ಮೂಲಕ ಮೊದಲ ಸಂದೇಶವನ್ನು ರವಾನಿಸಿದರು.
ಐದು ನಿಮಿಷದಲ್ಲೇ ಏನೇನಾಯಿತು ಗೊತ್ತಾ?
- ರಾತ್ರಿ 7.41 ಗಂಟೆ - ಕೇಂದ್ರ ಕೈಗಾರಿಕಾ ಭದ್ರತಾ ಪಡೆಯ ನಿಯಂತ್ರಣ ಕೊಠಡಿಯಿಂದ ವಾಯು ಸಂಚಾರ ನಿಯಂತ್ರಣಾಲಯ ಮತ್ತು ಸಿಐಎಸ್ಎಫ್ ನ ತ್ವರಿತ ಕಾರ್ಯಪಡೆಗೆ ಸಂದೇಶವನ್ನು ರವಾನಿಸಲಾಯಿತು.
- ರಾತ್ರಿ 7.42 ಗಂಟೆ - ವಿಮಾನ ನಿಲ್ದಾಣದ ಅಗ್ನಿಶಾಮಕ ಕೇಂದ್ರವನ್ನು ಎಚ್ಚರಿಕೆ ಸಂದೇಶವನ್ನು ನೀಡಲಾಯಿತು.
- ರಾತ್ರಿ 7.43 ಗಂಟೆ - ಸಿಐಎಸ್ಎಫ್ ತಂಡವು ವಿಮಾನ ನಿಲ್ದಾಣದ ಆರೋಗ್ಯ ಇಲಾಖೆಗೆ ಮಾಹಿತಿ ರವಾನಿಸಲಾಯಿತು.
- ರಾತ್ರಿ 7.44 ಗಂಟೆ - ಸಿಐಎಸ್ಎಫ್ ನಿಯಂತ್ರಣ ಕೊಠಡಿಯಿಂದ ವಿಮಾನ ನಿಲ್ದಾಣದ ಟರ್ಮಿನಲ್ ಮ್ಯಾನೇಜರ್, ವಿಮಾನ ನಿಲ್ದಾಣದ ನಿರ್ದೇಶಕರನ್ನು ಸಂಪರ್ಕಿಸಿದ ನಂತರದಲ್ಲಿ ವಿಮಾನ ನಿಲ್ದಾಣ ಆರೋಗ್ಯ ಇಲಾಖೆಗೆ ಎರಡನೇ ಬಾರಿ ಕರೆ ಮಾಡಲಾಯಿತು.
- ರಾತ್ರಿ 7.45 ಗಂಟೆ - ಸಿಐಎಸ್ಎಫ್ ನಿಯಂತ್ರಣ ಕೊಠಡಿಯು ಸ್ಥಳೀಯ ಪೊಲೀಸರು ಮತ್ತು ಏಜೆನ್ಸಿಯ ಘಟಕಗಳಿಗೆ ಮಾರ್ಗಗಳನ್ನು ತಿಳಿಸಲಾಯಿತು.
7 ನಿಮಿಷಗಳಲ್ಲೇ ಜಾಗೃತರಾದರು ಏರ್ ಪೋರ್ಟ್ ಸುತ್ತಲಿನ ಜನ
ಏರ್ ಇಂಡಿಯಾ ವಿಮಾನ ದುರಂತವು ಸಂಭವಿಸಿದ ಐದರಿಂದ ಏಳು ನಿಮಿಷಗಳಲ್ಲಿ ಏರ್ ಪೋರ್ಟ್ ಸುತ್ತಮುತ್ತಲಿನ ಪ್ರದೇಶದಲ್ಲಿ ವಾಸವಿದ್ದ ಜನರು ಜಾಗೃತರಾದರು. ಏರ್ ಪೋರ್ಟ್ ಸುತ್ತಲಿನ ಗೇಟ್ ಗಳ ಹತ್ತಿರ ನೆರೆದರು. ವಿಮಾನದಲ್ಲಿದ್ದ ಪ್ರಯಾಣಿಕರ ಸಂಖ್ಯೆಯನ್ನು ಗಮನದಲ್ಲಿಟ್ಟುಕೊಂಡು ಸಾರ್ವಜನಿಕರು ಕೂಡಾ ರಕ್ಷಣಾ ಕಾರ್ಯಾಚರಣೆಯಲ್ಲಿ ಭಾಗವಹಿಸಲು ಕ್ಯಾಲಿಕಟ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಡೆಪ್ಯುಟಿ ಕಮಾಂಡೆಂಟ್ ಅನುಮತಿ ನೀಡಿದರು. ಇದೊಂದು ಸಮಯೋಚಿತ ನಿರ್ಧಾರವಾಗಿತ್ತು ಎಂದು ಸಿಐಎಸ್ಎಫ್ ಮೂಲಗಳು ತಿಳಿಸಿವೆ.