ಸರ್ಕಾರ ಕೊಟ್ಟ 2 ಎಕರೆ ಜಮೀನನ್ನು ಏನು ಮಾಡಿದ್ರು ಆ ಸಂಗೀತ ವಿದ್ವಾನ್?
ತಿರುವನಂತಪುರ, ಡಿಸೆಂಬರ್ 27: ಹಲವಾರು ಕಲಾವಿದರು ತಾವು ಉನ್ನತ ಸ್ಥಾನಕ್ಕೆ ಹೋದರೂ ತಮಗೆ ಸರ್ಕಾರ ಅದು ಕೊಟ್ಟಿಲ್ಲ, ಇದು ಕೊಟ್ಟಿಲ್ಲ ಎಂದು ಮೂಗು ಮುರಿಯುವವರೇ ಜಾಸ್ತಿ. ಆದರೆ, ದೇಶದ ಖ್ಯಾತ ಸಂಗೀತ ವಿದ್ವಾಂಸರೊಬ್ಬರು ಈ ವಿಷಯದಲ್ಲಿ ಇತರ ಕಲಾವಿದರಿಗೆ ಅಪವಾದವಾಗಿದ್ದಾರೆ.
ಖ್ಯಾತ ಹಿಂದೂಸ್ತಾನಿ ಸಂಗೀತ ವಿದ್ವಾಂಸ ಹಾಗೂ ಸರೋದ್ ವಾದಕ ಉಸ್ತಾದ್ ಅಮ್ಜದ್ ಅಲಿ ಖಾನ್ ಅವರು, ಕೇರಳ ಸರ್ಕಾರ ಉಡುಗೊರೆಯಾಗಿ ನೀಡಿರುವ ಎರಡು ಎಕರೆ ಭೂಮಿಯನ್ನು ವಾಪಸ್ ನೀಡಿ, ಆ ಜಾಗದಲ್ಲಿ ಸರ್ಕಾರ ಒಂದು ಉತ್ತಮ ಆಸ್ಪತ್ರೆ ಕಟ್ಟಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ. ಅಲ್ಲದೇ ಅವರು ಕೇರಳ ಸರ್ಕಾರಕ್ಕೆ ಒಂದಿಷ್ಟು ಸಲಹೆಗಳನ್ನೂ ನೀಡಿದ್ದಾರೆ.
ಚಿತ್ರ ಕೃಪೆ; @AAKSarod
ಕೇರಳ ಸರ್ಕಾರದ ಉಡುಗೊರೆ
ಉಸ್ತಾದ್ ಅಮ್ಜದ್ ಅಲಿ ಖಾನ್ ಅವರು ತಮ್ಮ ಅಪ್ರತಿಮ ಸರೋದ್ ವಾದನದ ಮೂಲಕ ಜಗದ್ವಿಖ್ಯಾತಿಯನ್ನು ಗಳಿಸಿದ್ದಾರೆ. ದೇಶ ವಿದೇಶದಲ್ಲೂ ಅವರ ಸಂಗೀತ ಕಚೇರಿಗಳು ನಡೆಯುತ್ತಾ ಇರುತ್ತೆ. ಈ ಮೂಲಕ ಸರೋದ್ ವಾದನದಲ್ಲಿ ಜಗತ್ತಿನ ತುಂಬ ಭಾರತವನ್ನು ಪ್ರತಿನಿಧಿಸುತ್ತಿದ್ದಾರೆ. ಅಮ್ಜದ್ ಅಲಿ ಖಾನ್ ಅವರ ಈ ಸಂಗೀತ ಸೇವೆಯನ್ನು ಮೆಚ್ಚಿ ಕೇರಳ ಸರ್ಕಾರ ಕಳೆದ ವರ್ಷ ಕೇರಳದ ಕಣ್ಣೂರಿನಲ್ಲಿ ಸಂಗೀತ ಶಾಲೆಯನ್ನು ತೆರೆಯಲು ಎರಡು ಎಕರೆ ಜಮೀನನ್ನು ದಾನ ನೀಡಿತ್ತು.
ಯಡಿಯೂರಪ್ಪ ಕಾರಿಗೆ ಅಡ್ಡಿ, ಪ್ರತಿಭಟನೆ: ಕೇರಳದಲ್ಲಿ ಐವರ ಬಂಧನ
ಅಮ್ಜದ್ ಅಲಿ ಖಾನ್ ಪತ್ರ
ದೇಶಾದ್ಯಂತ ಎದ್ದಿರುವ ರಾಷ್ಟ್ರೀಯ ಪೌರತ್ವ ತಿದ್ದುಪಡೆ ಕಾಯ್ದೆ ವಿರೋಧದ ಪ್ರತಿಭಟನೆ ಬೆನ್ನಲ್ಲೇ ಅಮ್ಜದ್ ಅಲಿ ಖಾನ್ ಅವರು ಜಮೀನು ವಿಚಾರದಲ್ಲಿ ಕೇರಳ ಸರ್ಕಾರಕ್ಕೆ ಬರೆದಿರುವ ಪತ್ರ ಮಹತ್ವ ಪಡೆದುಕೊಂಡಿದೆ. ಕೇರಳ ಸರ್ಕಾರ ಕೇರಳದಲ್ಲಿ ಸಂಗೀತ ಅಕಾಡೆಮಿ ತೆರೆಯಲು ನನಗೆ ಎರಡು ಎಕರೆ ಬೆಲೆಬಾಳುವ ಜಮೀನನ್ನು ನೀಡಿತ್ತು. ಆದರೆ, ಸದ್ಯ ನಾನಿರುವ ಪರಿಸ್ಥಿತಿಯಲ್ಲಿ ಒಂದು ಕಡೆ ಕುಳಿತು ಸಂಗೀತ ಕಛೇರಿ ನಡೆಸಲು ಆಗುವುದಿಲ್ಲ. ಹಾಗಾಗಿ ಕೇರಳ ಸರ್ಕಾರ ನನಗೆ ಕೊಟ್ಟಿರುವ ಜಮೀನನ್ನು ವಾಪಸ್ ಪಡೆದುಕೊಂಡು ಆ ಜಾಗದಲ್ಲಿ ಒಂದು ಸುಂದರ ಆಸ್ಪತ್ರೆ ಕಟ್ಟಲಿ ಎಂದು ಮನವಿ ಮಾಡಿಕೊಂಡಿದ್ದಾರೆ.
ಕೇರಳ ಸರ್ಕಾರಕ್ಕೆ ನೀಡಿರುವ ಸಲಹೆಗಳೇನು
ಪ್ರತಿಯೊಬ್ಬ ವ್ಯಕ್ತಿಯ ಆರೋಗ್ಯ ಪಾಲನೆ ಅಲ್ಲಿನ ಸರ್ಕಾರದ ಮಹತ್ತರ ಕಾರ್ಯ. ಆದರೆ, ನಮ್ಮ ದೇಶದಲ್ಲಿ ಬಡಜನರು ಉತ್ತಮ ಆರೋಗ್ಯ ಸೇವೆಯನ್ನು ಪಡೆಯಲು ಸಾಧ್ಯವಾಗುತ್ತಿಲ್ಲ. ನನಗೆ ಸರ್ಕಾರ ನೀಡಿರುವ ಭೂಮಿಯಲ್ಲಿ ಒಂದು ವಿಶ್ವದರ್ಜೆಯ ಆಸ್ಪತ್ರೆಯನ್ನು ಕೇರಳ ಸರ್ಕಾರ ಕಟ್ಟಲಿ. ಅಲ್ಲಿ ಧರ್ಮಾತೀತವಾಗಿ ಎಲ್ಲರಿಗೂ ಉತ್ತಮ ಚಿಕಿತ್ಸೆಯನ್ನು ನೀಡಲಿ. ಇದಕ್ಕೆ ಖಾಸಗಿ ಸಂಸ್ಥೆಗಳ ಸಹಕಾರ ಪಡೆದುಕೊಂಡು ಒಂದು ಮಾದರಿ ಆಸ್ಪತ್ರೆ ನಿರ್ಮಿಸಿ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರಿಗೆ ಈ ಮೇಲ್ ಮೂಲಕ ಬರೆದಿರುವ ಪತ್ರದಲ್ಲಿ ಮನವಿ ಮಾಡಿದ್ದಾರೆ. ಪೌರತ್ವ ಪ್ರತಿಭಟನೆ ಬಗ್ಗೆ ಮಾತನಾಡಿರುವ ಅವರು, ಸದ್ಯ ದೇಶದ ಪರಿಸ್ಥಿತಿಯನ್ನು ಅರ್ಥಮಾಡಿಕೊಂಡು ಶಾಂತಿ ಸೌಹಾರ್ದತೆಯಿಂದ ಬಾಳುವಂತಾಗಲಿ ಎಂದು ಹೇಳಿದ್ದಾರೆ.
ಮಂಗಳೂರು ಪೊಲೀಸರ ದೌರ್ಜನ್ಯದ ಭೀಕರ ಅನುಭವ ಹಂಚಿಕೊಂಡ ಕೇರಳ ಪತ್ರಕರ್ತರು
ಅಮ್ಜದ್ ಅಲಿ ಖಾನ್ ಬಗ್ಗೆ
ಗ್ವಾಲಿಯರ ಸಂಗೀತ ಪರಂಪರೆಯಿಂದ ಬಂದಿರುವ ಅಮ್ಜದ್ ಅಲಿ ಖಾನ್ ಅವರು 1975 ಅಕ್ಟೊಬರ್ 9 ರಂದು ಜನಿಸಿದ್ದಾರೆ. ಸ್ವಾತಂತ್ರಪೂರ್ವ ಭಾರತದಲ್ಲಿ ಖ್ಯಾತ ಸರೋದ್ ವಾದಕರಾಗಿದ್ದ ಹಫೀಜ್ ಅಲಿ ಖಾನ್ ಅವರ ಮಗ ಅಮ್ಜದ್ ಅಲಿ ಖಾನ್ ಅವರು. ಅಮ್ಜದ್ ಅವರು ಕೂಡ ಸರೋದ್ ವಾದನ ಒಲಿಸಿಕೊಂಡು ಈಗ ಪ್ರಪಂಚದ ಒಬ್ಬ ಶ್ರೇಷ್ಠ ಸರೋದ್ ವಾದಕರಾಗಿದ್ದಾರೆ. ೨೦೦೧ ರಲ್ಲಿ ಇವರಿಗೆ ಪದ್ಮ ವಿಭೂಷಣ ಪ್ರಶಸ್ತಿ ಸಂದಿದೆ.