ಶ್ರೀಧರನ್ ಧೈರ್ಯವಂತ ನಾಯಕ; ಹಾಡಿಹೊಗಳಿದ ನಟ ಮೋಹನ್ ಲಾಲ್
ಪಾಲಕ್ಕಾಡ್, ಏಪ್ರಿಲ್ 2: ಪಾಲಕ್ಕಾಡ್ನಿಂದ ಚುನಾವಣಾ ಕಣಕ್ಕಿಳಿದಿರುವ ಮೆಟ್ರೋ ಮ್ಯಾನ್ ಇ ಶ್ರೀಧರನ್ ಅವರನ್ನು ನಟ ಮೋಹನ್ ಲಾಲ್ ಹಾಡಿ ಹೊಗಳಿದ್ದಾರೆ. ವಿಡಿಯೋ ಸಂದೇಶವನ್ನು ಹಂಚಿಕೊಂಡಿರುವ ಅವರು, "ಶ್ರೀಧರನ್ ಅವರು ಭಾರತದ ಎಲ್ಲಾ ಪ್ರಮುಖ ನಗರಗಳಲ್ಲಿ ಮೆಟ್ರೋ ನಿರ್ಮಾಣವನ್ನು ಸಾಧ್ಯವಾಗಿಸಿದ ಧೈರ್ಯವಂತ ನಾಯಕ. ದೇಶವನ್ನು ಮುನ್ನಡೆಸಲು ಅವರ ಸೇವೆ ಇನ್ನೂ ಅಗತ್ಯವಿದೆ" ಎಂದು ಹೇಳಿದ್ದಾರೆ.
ಪ್ರವಾಹದಲ್ಲಿ ಕುಸಿದು ಬಿದ್ದಿದ್ದ ಪಂಬನ್ ಸೇತುವೆಯನ್ನು ಕೇವಲ 46 ದಿನಗಳಲ್ಲಿ ಮರು ನಿರ್ಮಾಣ ಮಾಡಿದವರು ಅವರು. ಎಲ್ಲರೂ ಅಸಾಧ್ಯ ಅಂದುಕೊಂಡಿದ್ದನ್ನು ಸಾಧ್ಯವಾಗಿಸಿದವರು. ಅಸಾಧ್ಯ ಎಂದುಕೊಂಡಿದ್ದ ಕೊಂಕಣ ರೈಲ್ವೆಯನ್ನು ಸುರಂಗಗಳನ್ನು ನಿರ್ಮಿಸುವ ಮೂಲಕ ನಿಜ ಮಾಡಿದವರು ಎಂದು ಹೊಗಳಿದ್ದಾರೆ.
ಕೊಚ್ಚಿ ಹಾಗೂ ದೆಹಲಿ ಮೆಟ್ರೋ ರೈಲು ನಿರ್ಮಾಣದ ನೇತೃತ್ವ ವಹಿಸಿಕೊಂಡು ದೇಶಕ್ಕೆ ಅಪಾರ ಕೊಡುಗೆ ನೀಡಿದವರು. ನಿಗದಿತ ಸಮಯದಲ್ಲಿ ಯೋಜನೆಯನ್ನು ಮುಗಿಸಿ ಉಳಿದ ಹಣವನ್ನು ಸರ್ಕಾರಕ್ಕೇ ಹಿಂದಿರುಗಿಸಿದ ಶುದ್ಧ ಮನುಷ್ಯ ಅವರು ಎಂದು ಸಂದೇಶದಲ್ಲಿ ಹೊಗಳಿದ್ದಾರೆ. ಅವರು ರಾಜಕೀಯಕ್ಕೆ ಬಂದಿದ್ದು ಒಳಿತಾಯಿತು. ಅವರ ಸೇವೆ ಈ ದೇಶಕ್ಕೆ ಇನ್ನೂ ಅಗತ್ಯವಿದೆ.
ಮೆಟ್ರೊ ಮ್ಯಾನ್ ಕೇರಳದ ರಾಜಕೀಯ ಬದಲಾಯಿಸುತ್ತಾರೆ; ಮೋದಿ
ಮೆಟ್ರೋ ಮ್ಯಾನ್ ಇ ಶ್ರೀಧರನ್ ಪಾಲಕ್ಕಾಡ್ನಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. ಕೇರಳದಲ್ಲಿ 140 ವಿಧಾನಸಭಾ ಕ್ಷೇತ್ರಗಳಿಗೆ ಏಪ್ರಿಲ್ 6ರಂದು ಚುನಾವಣೆ ನಡೆಯಲಿದ್ದು, ಮೇ 2ರಂದು ಫಲಿತಾಂಶ ಪ್ರಕಟಗೊಳ್ಳಲಿದೆ.