ಶಬರಿಮಲೆ ಪ್ರವೇಶಕ್ಕೆ 'ವನಿತಾ ಮದಿಲ್'; ಬೇಕಲ್ ನಲ್ಲಿ ಕಲ್ಲುತೂರಾಟ
ತಿರುವನಂತಪುರಂ, ಜನವರಿ 1: ಕೇರಳ ರಾಜ್ಯ ಸರಕಾರ ವಿಶಿಷ್ಟವಾಗಿ ಹೊಸ ಆಚರಿಸಲು ಮುಂದಾಗಿದ್ದು, ಅಂತೂ ಆ ಕಾರ್ಯಕ್ರಮ ಭಾರೀ ಯಶಸ್ಸು ಪಡೆದಿದೆ. ಮೂವತ್ತು ಲಕ್ಷಕ್ಕೂ ಹೆಚ್ಚು ಮಹಿಳೆಯರು ಮಂಗಳವಾರ ಆರುನೂರಾ ಇಪ್ಪತ್ತು ಕಿ.ಮೀ. ಉದ್ದದ ಗೋಡೆ (ವನಿತಾ ಮದಿಲ್) ನಿರ್ಮಿಸಿದರು. ಶಬರಿಮಲೆ ದೇಗುಲಕ್ಕೆ ಮಹಿಳೆಯರಿಗೆ ಪ್ರವೇಶ ದೊರೆಯಬೇಕು ಎಂಬ ನಿರ್ಣಯ ಬೆಂಬಲಿಸುವ ಸಲುವಾಗಿ ಹೀಗೆ ಮಾಡಲಾಗಿತ್ತು.
ಕಾಸರಗೋಡುವಿನಿಂದ ತಿರುವನಂತಪುರಂ ತನಕ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ಈ ಗೋಡೆ ನಿರ್ಮಿಸಲಾಗಿತ್ತು. ಕಾಸರಗೋಡು ಜಿಲ್ಲೆಯ ಬೇಕಲ್ ನಲ್ಲಿ ಮಹಿಳೆಯರ ಮೇಲೆ ಕಲ್ಲು ತೂರಾಟ ನಡೆದ ಬಗ್ಗೆ ವರದಿ ಆಗಿದೆ. ಎಲ್ಲ ವಯೋಮಾನದ ಮಹಿಳೆಯರಿಗೂ ಶಬರಿ ಮಲೆ ದೇಗುಲಕ್ಕೆ ಪ್ರವೇಶ ನೀಡಬೇಕು ಎಂಬ ಸುಪ್ರೀಂ ಕೋರ್ಟ್ ತೀರ್ಪನ್ನು ಅನುಷ್ಠಾನಕ್ಕೆ ತರಬೇಕು ಎನ್ನುವ ಕೇರಳ ಸರಕಾರದ ತೀರ್ಮಾನ ಬೆಂಬಲಿಸಿ ಹೀಗೊಂದು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಅಯ್ಯಪ್ಪ ಭಕ್ತರು ಬೆಚ್ಚಿ ಬೀಳಿಸುವ ಕೇರಳದ ಗುಪ್ತಚರ ಇಲಾಖೆ ವರದಿ
ಈ ವನಿತಾ ಮದಿಲ್ ಕಾರ್ಯಕ್ರಮವನ್ನು ರಾಜ್ಯ ಸರಕಾರ ಆಯೋಜಿಸಿದ್ದರೆ, ವಿವಿಧ ಸಾಮಾಜಿಕ ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿದವು. ಶಬರಿಮಲೆ ವಿಚಾರವಾಗಿ ಸುಪ್ರೀಂ ಕೋರ್ಟ್ ತೀರ್ಪು ವಿಚಾರವಾಗಿ ಹಿಂದೂ ಮೂಲಭೂತವಾದಿ ಸಂಘಟನೆಗಳು ನಡೆಸುತ್ತಿರುವ ಪ್ರತಿಭಟನೆಗೆ ಉತ್ತರ ಎಂಬಂತೆ ಎಲ್ ಡಿಎಫ್ ಸರಕಾರ ಈ ಕ್ರಮಕ್ಕೆ ಮುಂದಾಗಿದೆ.
ಮಾನಸಿಕ ಗುಲಾಮವಾಗದಂತೆ ಕೇರಳವನ್ನು ತಡೆಯುವ ನಿಟ್ಟಿನಲ್ಲಿ ಈ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮನವಿ ಮಾಡಿದ್ದರು. ಸ್ವಾಮಿ ವಿವೇಕಾನಂದರು ಅಭಿಪ್ರಾಯ ವ್ಯಕ್ತಪಡಿಸಿದ್ದ ಜಾತಿ ಆಧಾರಿತ ತಾರತಮ್ಯದ ಬಗ್ಗೆ ಕೂಡ ಪ್ರಸ್ತಾವ ಮಾಡಿದ್ದರು. ಈ ಬಗ್ಗೆ ಡಿಸೆಂಬರ್ ಒಂದನೇ ತಾರೀಕು ಮನವಿ ಮಾಡಿದ್ದರು. ಇದೇ ರೀತಿ ರಾಷ್ಟ್ರೀಯ ಹೆದ್ದಾರಿಯ ಮತ್ತೊಂದು ಬದಿಯಲ್ಲಿ ಪುರುಷರ ಗೋಡೆ ನಿರ್ಮಾಣ ಕೂಡ ಇದೆ.
ಈ ಕಾರ್ಯಕ್ರಮದ ಆಯೋಜಕರು ಆಡಳಿತಾರೂಢ ಸಿಪಿಐ(ಎಂ). ಅದಕ್ಕೆ ನೂರಾ ಎಪ್ಪತ್ನಾಲ್ಕು ಸಂಘಟನೆಗಳು ಬೆಂಬಲ ನೀಡಿವೆ. ಇಪ್ಪತ್ತೈದು ಸಾವಿರ ಗುಂಪುಗಳನ್ನು ಮಾಡಿಕೊಂಡು, ಎಪ್ಪತ್ತು ಲಕ್ಷ ಮನೆಗಳಿಗೆ ಭೇಟಿ ನೀಡಿ, ಆಹ್ವಾನ ನೀಡಲಾಗಿದೆ. ಇಡೀ ರಾಜ್ಯದಾದ್ಯಂತ ಪ್ರಚಾರದ ಸಲುವಾಗಿಯೇ ಏಳು ಸಾವಿರ ಕಾರ್ಯಕ್ರಮಗಳನ್ನು ಮಾಡಲಾಗಿದೆ.