ಕೊಲ್ಲಂನಲ್ಲಿ ಹಾವು ಕಚ್ಚಿಸಿ ಪತ್ನಿ ಕೊಂದ ಪತಿಗೆ ಅ. 13ರಂದು ಶಿಕ್ಷೆ ಪ್ರಕಟ
ಕೊಲ್ಲಂ, ಅಕ್ಟೋಬರ್ 11: ಅಂಗವಿಕಲೆಯಾಗಿದ್ದ ಪತ್ನಿ ಉತ್ರಾ ಅವರನ್ನು ಕೊಲೆ ಮಾಡಿದ ಆರೋಪ ಹೊತ್ತಿದ್ದ ಪತಿ ಸೂರಜ್ ಮೇಲಿನ ಎಲ್ಲಾ ಆರೋಪಗಳು ಸಾಬೀತಾಗಿದ್ದು, ಹಾವು ಕಚ್ಚಿಸಿ ಪತ್ನಿ ಕೊಲೆ ಮಾಡಿರುವುದು ದೃಢಪಟ್ಟಿದೆ. ಈ ಪ್ರಕರಣದ ವಿಚಾರಣೆ ನಡೆಸಿದ ಕೊಲ್ಲಂನ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯವು ಸೂರಜ್ ಅಪರಾಧಿ ಎಂದು ಇಂದು ತೀರ್ಪು ಪ್ರಕಟಿಸಿದೆ. ಅ.13 ರಂದು ಶಿಕ್ಷೆ ಪ್ರಮಾಣವನ್ನು ಘೋಷಿಸಲಿದೆ.
ಕೇರಳದ ಉತ್ರಾ ಕೊಲೆ ಪ್ರಕರಣದತ್ತ ಇಡೀ ದೇಶ ತಿರುಗಿ ನೋಡುವಂತಾಗಿತ್ತು. ವಿಷಕಾರಿ ನಾಗರಹಾವಿನಿಂದ 25 ವರ್ಷದ ಪತ್ನಿ ಉತ್ರಾ ಅವರನ್ನು ಕಚ್ಚಿಸಿ ಕೊಲೆ ಮಾಡಿದ ಪ್ರಕರಣದಲ್ಲಿ ಪತಿ ಸೂರಜ್ ಅಪರಾಧಿ ಎಂದು ಕೇರಳ ನ್ಯಾಯಾಲಯವು ಸೋಮವಾರ ತೀರ್ಪು ನೀಡಿದೆ.
ಭಾರತೀಯ ದಂಡ ಸಂಹಿತೆಯ ಸೆಕ್ಷನ್ಗಳಾದ 302, 307, 328, 201ರ ಅಡಿ ಸೂರಜ್ರನ್ನು ಅಪರಾಧಿ ಎಂದು ಕೊಲ್ಲಂನ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯವು ಅ.12ರಂದು ತೀರ್ಪು ಪ್ರಕಟಿಸಿದೆ. ನ್ಯಾಯಾಲಯವು ಬುಧವಾರ (ಅಕ್ಟೋಬರ್ 13ರಂದು) ಶಿಕ್ಷೆಯ ಪ್ರಮಾಣ ಪ್ರಕಟಿಸಲಿದೆ.
ಉತ್ರಾ ಕೊಲ್ಲಲು ಏನು ಕಾರಣ?
ಅಂಗವಿಕಲೆಯಾಗಿದ್ದ ಉತ್ರಾರನ್ನು ಕೊಂದು ಆಕೆ ಬಳಿಯಿದ್ದ ಚಿನ್ನದ ಒಡವೆಗಳನ್ನು ದೋಚಿ ಬಳಿಕ ಇನ್ನೊಬ್ಬಳನ್ನು ವಿವಾಹವಾಗಲು ಸೂರಜ್ ಯೋಜಿಸಿದ್ದ ಎಂದು ಹೇಳಲಾಗಿದೆ. ಸೂರಜ್ ಕೂಡಾ ಚಿನ್ನ ದೋಚಲು ಈ ಐಡಿಯಾ ಬಳಸಿದೆ ಎಂದು ಹೇಳಿದ್ದಾನೆ. ಸೂರಜ್ ಇಡೀ ಘಟನೆಯನ್ನು ಆಕಸ್ಮಿಕ ಸಾವೆಂದು ನಂಬಿಸಲು ಪ್ರಯತ್ನಿಸಿದ್ದ. ಘಟನೆಗೂ ಎರಡು ತಿಂಗಳ ಮುಂದೆ ಬ್ಯಾಂಕ್ ಲಾಕರ್ನಿಂದ ಉತ್ತರಾಗೆ ಸೇರಿದ್ದ ಚಿನ್ನವನ್ನು ಹಿಂಪಡೆದಿದ್ದ. ಜೊತೆಗೆ ವಿಮೆ ಹಣವನ್ನು ಪಡೆಯಲು ಯತ್ನಿಸಿದ್ದ.
ಎರಡು ಬಾರಿ ಹಾವು ಬಳಸಿ ಕೊಲೆ ಯತ್ನ
ನಾಗರಹಾವಿನಿಂದ ಕಚ್ಚಿಸಿ ಪತ್ನಿಯನ್ನು ಸೂರಜ್ ಕೊಲೆ ಮಾಡಿದ್ದ ಪ್ರಕರಣವು ಕೇರಳದಲ್ಲಿ ಭಾರಿ ಸಂಚಲನ ಸೃಷ್ಟಿಸಿತ್ತು. ಇದು ಪತ್ನಿಯನ್ನು ಕೊಲೆ ಮಾಡಲು ಸೂರಜ್ ಎರಡನೇ ಬಾರಿ ಯತ್ನಿಸಿದ್ದ. ಮೊದಲ ಬಾರಿ ಮಂಡಲದ ಹಾವು ಬಳಸಿ ಕೊಲೆಗೆ ವಿಫಲ ಯತ್ನವನ್ನು ನಡೆಸಿದ್ದ ಅರೋಪ ಸೂರಜ್ ಮೇಲಿತ್ತು. ಎರಡನೇ ಬಾರಿ ನಾಗರ ಹಾವು ಬಳಸಿ ಆಕೆ ಸಾವಿಗೆ ಕಾರಣನಾಗಿದ್ದ.
2020ರ ಮೇನಲ್ಲಿ ನಾಗರ ಹಾವು ಕಡಿತದಿಂದ ಉತ್ರಾ ಸಾವನ್ನಪ್ಪಿದ ಬಳಿಕ ಆಕೆಯ ಕುಟುಂಬದವರು ವರದಕ್ಷಿಣೆ ಕಿರುಕುಳ ಆರೋಪದ ಪ್ರಕರಣವನ್ನು ಸೂರಜ್ ವಿರುದ್ಧ ದಾಖಲಿಸಿದ್ದರು. ನಂತರ ಸಾರ್ವಜನಿಕವಾಗಿ ಹೇಳಿಕೆ ನೀಡಿದ ಸೂರಜ್, ಹಾವು ಕಡಿತದಿಂದ ಉತ್ರಾ ಮೃತಪಟ್ಟಿದ್ದಾಳೆ ಎಂದಿದ್ದ.
₹10,000ಕ್ಕೆ ಎರಡು ಹಾವು ಮಾರಾಟ
ತನಿಖೆಯ ಸಂದರ್ಭದಲ್ಲಿ ಹಾವು ಮಾರಾಟಗಾರನೊಬ್ಬ ₹10,000ಕ್ಕೆ ಎರಡು ಹಾವುಗಳನ್ನು ಸೂರಜ್ಗೆ ಮಾರಾಟ ಮಾಡಿದ್ದ ಅಂಶ ತಿಳಿದು ಬಂದಿತ್ತು. ಬಳಿಕ ಹಾವು ಮಾರಾಟ ಮಾಡಿದ ವ್ಯಕ್ತಿ ನೀಡಿದ ಸುಳಿವಿನಿಂದ ಸೂರಜ್ನನ್ನು ಪೊಲೀಸರು ಬಂಧಿಸಿದ್ದರು. ಎರಡೂ ಹಾವುಗಳನ್ನು ತಲಾ 5,000 ರೂ.ಗೆ ಖರೀದಿಸಿದ್ದೆ, ಉತ್ರಾ ಮೇಲೆ ಹಾವು ಎಸೆದು ಹಾವು ಕಡಿಯುವಂತೆ ಮಾಡಿದೆ ಎಂದು ವಿಚಾರಣೆ ವೇಳೆ ತಪ್ಪೊಪ್ಪಿಕೊಂಡಿದ್ದ.
ಸೂರಜ್ ಕುಟುಂಬದ ವಿರುದ್ಧ ಕೌಟುಂಬಿಕ ದೌರ್ಜನ್ಯ
ಆನಂತರ, ಸೂರಜ್ ಕುಟುಂಬದ ವಿರುದ್ಧ ಕೌಟುಂಬಿಕ ದೌರ್ಜನ್ಯ, ಪಿತೂರಿ ಮತ್ತಿತರರ ಆರೋಪಗಳಿಗಾಗಿ ಭಾರತೀಯ ದಂಡ ಸಂಹಿತೆಯ ವಿವಿಧ ಸೆಕ್ಷನ್ಗಳ ಅಡಿ ಉತ್ರಾ ಕುಟುಂಬದವರು ಪ್ರಕರಣ ದಾಖಲಿಸಿದ್ದರು. ಅಂತಿಮವಾಗಿ ತನ್ನ ಅಪರಾಧವನ್ನು ಒಪ್ಪಿಕೊಂಡಿದ್ದ ಸೂರಜ್ ಆರ್ಥಿಕ ಲಾಭಕ್ಕಾಗಿ ಕೃತ್ಯ ಎಸಗಿದ್ದಾಗಿ ತಪ್ಪೊಪ್ಪಿಕೊಂಡಿದ್ದ.
''ಸೂರಜ್ಗೆ ಪತ್ನಿ ಕೊಂದಿದ್ದರ ಬಗ್ಗೆ ಒಂದಿಷ್ಟು ಪಶ್ಚಾತ್ತಾಪವಿಲ್ಲ, ಆತನ ಕೃತ್ಯಕ್ಕೆ ಕುಟುಂಬಸ್ಥರು ನೆರವಾಗಿದ್ದಾರೆ, ಅದಕ್ಕೆ ಇನ್ನೂ ಏನು ಪ್ರತಿಕ್ರಿಯಿಸಿಲ್ಲ, ತುಂಬಾ ಯೋಜಿತವಾಗಿ ಕೊಲೆ ಮಾಡಿದ್ದಾನೆ, ಆತನಿಗೆ ಕಠಿಣ ಶಿಕ್ಷೆಯಾಗಲಿ,'' ಎಂದು ಉತ್ರಾ ಸೋದರ ವಿಶು ಪ್ರತಿಕ್ರಿಯಿಸಿದ್ದಾರೆ.