ಹಾವು ಕಚ್ಚಿಸಿ ಪತ್ನಿ ಕೊಂದ ಪತಿಗೆ ಜೀವಾವಧಿ ಶಿಕ್ಷೆ ಪ್ರಕಟ
ಕೊಲ್ಲಂ, ಅಕ್ಟೋಬರ್ 13: ಅಂಗವಿಕಲೆಯಾಗಿದ್ದ ಪತ್ನಿ ಉತ್ರಾ ಅವರನ್ನು ಕೊಲೆ ಮಾಡಿದ ಆರೋಪ ಹೊತ್ತಿದ್ದ ಪತಿ ಸೂರಜ್ ಮೇಲಿನ ಎಲ್ಲಾ ಆರೋಪಗಳು ಸಾಬೀತಾಗಿದ್ದು, ಹಾವು ಕಚ್ಚಿಸಿ ಪತ್ನಿ ಕೊಲೆ ಮಾಡಿರುವುದು ದೃಢಪಟ್ಟಿದೆ. ಈ ಪ್ರಕರಣದಲ್ಲಿ ದೋಷಿಯಾಗಿರುವ ಸೂರಜ್ಗೆ ಕೊಲ್ಲಂನ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯವು ಬುಧವಾರ(ಅ.13) ಜೀವಾವಧಿ ಶಿಕ್ಷೆ ಪ್ರಕಟಿಸಿದೆ.
ವಿಷಕಾರಿ ನಾಗರಹಾವಿನಿಂದ 25 ವರ್ಷದ ಪತ್ನಿ ಉತ್ರಾ ಅವರನ್ನು ಕಚ್ಚಿಸಿ ಕೊಲೆ ಮಾಡಿದ ಪ್ರಕರಣದಲ್ಲಿ ಪತಿ ಸೂರಜ್ ಅಪರಾಧಿ ಎಂದು ಕೇರಳ ನ್ಯಾಯಾಲಯವು ಸೋಮವಾರ ತೀರ್ಪು ನೀಡಿತ್ತು. ಭಾರತೀಯ ದಂಡ ಸಂಹಿತೆಯ ಸೆಕ್ಷನ್ಗಳಾದ 302, 307, 328, 201ರ ಅಡಿ ಸೂರಜ್ರನ್ನು ಅಪರಾಧಿ ಎಂದು ಕೊಲ್ಲಂನ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯವು ಅ.12ರಂದು ತೀರ್ಪು ಪ್ರಕಟಿಸಿತ್ತು. ಜಸ್ಟೀಸ್ ಮನೋಜ್ ಎಂ ಅವರು ಇಂದು ಶಿಕ್ಷೆಯ ಪ್ರಮಾಣ ಪ್ರಕಟಿಸಿದ್ದಾರೆ.
''ಈ ರೀತಿ ವಿಷಕಾರಿ ಹಾವೊಂದನ್ನು ಬಳಸಿ, ನಿದ್ರೆ ಮಾಡುತ್ತಿದ್ದ ಅಸಹಾಯಕ ಮಹಿಳೆಯನ್ನು ಕೊಂದಿರುವುದು ಇದೇ ಮೊದಲ ಪ್ರಕರಣ'' ಎಂದು ಜಸ್ಟೀಸ್ ಮನೋಜ್ ಅಭಿಪ್ರಾಯಪಟ್ಟಿದ್ದಾರೆ. ವಿಷ ಬಳಸಿ ಹತ್ಯೆಗೈದಿದ್ದಕ್ಕೆ 10 ವರ್ಷ ಶಿಕ್ಷೆ, ಸಾಕ್ಷ್ಯ ನಾಶ, ಸಂಚು ಮಾಡಿದ್ದಕ್ಕೆ 7 ವರ್ಷ ಶಿಕ್ಷೆ ಪ್ರಕಟಿಸಲಾಗಿದೆ. 5 ಲಕ್ಷ ನಗದು ದಂಡ ಹಾಕಲಾಗಿದೆ.
ಅಪರೂಪದಲ್ಲಿ ಅಪರೂಪದ ಪ್ರಕರಣ
ಅಪರೂಪದಲ್ಲಿ ಅಪರೂಪದ ಪ್ರಕರಣವಾದ್ದರಿಂದ ಅಪರಾಧಿ ಸೂರಜ್ಗೆ ಗಲ್ಲುಶಿಕ್ಷೆ ವಿಧಿಸಬೇಕು ಎಂದು ವಕೀಲರಾದ ಜಿ ಮೋಹನ್ ರಾಜ್ ವಾದಿಸಿದರು. ಡಮ್ಮಿ ಹಾವು ಬಳಸಿ, ವ್ಯಕ್ತಿಗೆ ಹಾವು ಕಚ್ಚಲು ತಗುಲುವ ಸಮಯ, ಅಂತರ, ಪರಿಣಾಮದ ಬಗ್ಗೆ ವಿಸ್ತೃತವಾಗಿ ಪ್ರಾತ್ಯಕ್ಷಿಕೆ ಮೂಲಕ ತನಿಖೆ ನಡೆಸಿ ವರದಿ ತಯಾರಿಸಿದ ಕೇರಳ ಪೊಲೀಸರ ಕಾರ್ಯ ಶ್ಲಾಘನೀಯ ಎಂದು ವಕೀಲರು ನ್ಯಾಯಾಲಯಕ್ಕೆ ತಿಳಿಸಿದರು.
ನಾಗರಹಾವಿನಿಂದ ಕಚ್ಚಿಸಿ ಪತ್ನಿಯನ್ನು ಕೊಲೆ ಮಾಡಿದ್ದ
ನಾಗರಹಾವಿನಿಂದ ಕಚ್ಚಿಸಿ ಪತ್ನಿಯನ್ನು ಸೂರಜ್ ಕೊಲೆ ಮಾಡಿದ್ದ ಪ್ರಕರಣವು ಕೇರಳದಲ್ಲಿ ಭಾರಿ ಸಂಚಲನ ಸೃಷ್ಟಿಸಿತ್ತು. ಇದು ಪತ್ನಿಯನ್ನು ಕೊಲೆ ಮಾಡಲು ಸೂರಜ್ ಎರಡನೇ ಬಾರಿ ಯತ್ನಿಸಿದ್ದ. ಮೊದಲ ಬಾರಿ ಮಂಡಲದ ಹಾವು ಬಳಸಿ ಕೊಲೆಗೆ ವಿಫಲ ಯತ್ನವನ್ನು ನಡೆಸಿದ್ದ ಅರೋಪ ಸೂರಜ್ ಮೇಲಿತ್ತು. ಎರಡನೇ ಬಾರಿ ನಾಗರ ಹಾವು ಬಳಸಿ ಆಕೆ ಸಾವಿಗೆ ಕಾರಣನಾಗಿದ್ದ. 2020ರ ಮೇ 7ರಂದು ನಾಗರ ಹಾವು ಕಡಿತದಿಂದ ಉತ್ರಾ ಸಾವನ್ನಪ್ಪಿದ ಬಳಿಕ ಆಕೆಯ ಕುಟುಂಬದವರು ವರದಕ್ಷಿಣೆ ಕಿರುಕುಳ ಆರೋಪದ ಪ್ರಕರಣವನ್ನು ಸೂರಜ್ ವಿರುದ್ಧ ದಾಖಲಿಸಿದ್ದರು. ನಂತರ ಸಾರ್ವಜನಿಕವಾಗಿ ಹೇಳಿಕೆ ನೀಡಿದ ಸೂರಜ್, ಹಾವು ಕಡಿತದಿಂದ ಉತ್ರಾ ಮೃತಪಟ್ಟಿದ್ದಾಳೆ ಎಂದಿದ್ದ.
ಚಿನ್ನದ ಒಡವೆಗಳನ್ನು ದೋಚಿದ್ದ
ಅಂಗವಿಕಲೆಯಾಗಿದ್ದ ಉತ್ರಾರನ್ನು ಕೊಂದು ಆಕೆ ಬಳಿಯಿದ್ದ ಚಿನ್ನದ ಒಡವೆಗಳನ್ನು ದೋಚಿ ಬಳಿಕ ಇನ್ನೊಬ್ಬಳನ್ನು ವಿವಾಹವಾಗಲು ಸೂರಜ್ ಯೋಜಿಸಿದ್ದ ಎಂದು ಹೇಳಲಾಗಿದೆ. ಸೂರಜ್ ಕೂಡಾ ಚಿನ್ನ ದೋಚಲು ಈ ಐಡಿಯಾ ಬಳಸಿದೆ ಎಂದು ಹೇಳಿದ್ದಾನೆ. ಸೂರಜ್ ಇಡೀ ಘಟನೆಯನ್ನು ಆಕಸ್ಮಿಕ ಸಾವೆಂದು ನಂಬಿಸಲು ಪ್ರಯತ್ನಿಸಿದ್ದ. ಘಟನೆಗೂ ಎರಡು ತಿಂಗಳ ಮುಂದೆ ಬ್ಯಾಂಕ್ ಲಾಕರ್ನಿಂದ ಉತ್ತರಾಗೆ ಸೇರಿದ್ದ ಚಿನ್ನವನ್ನು ಹಿಂಪಡೆದಿದ್ದ. ಜೊತೆಗೆ ವಿಮೆ ಹಣವನ್ನು ಪಡೆಯಲು ಯತ್ನಿಸಿದ್ದ.
₹10,000ಕ್ಕೆ ಎರಡು ಹಾವು
ತನಿಖೆಯ ಸಂದರ್ಭದಲ್ಲಿ ಹಾವು ಮಾರಾಟಗಾರನೊಬ್ಬ ₹10,000ಕ್ಕೆ ಎರಡು ಹಾವುಗಳನ್ನು ಸೂರಜ್ಗೆ ಮಾರಾಟ ಮಾಡಿದ್ದ ಅಂಶ ತಿಳಿದು ಬಂದಿತ್ತು. ಬಳಿಕ ಹಾವು ಮಾರಾಟ ಮಾಡಿದ ವ್ಯಕ್ತಿ ನೀಡಿದ ಸುಳಿವಿನಿಂದ ಸೂರಜ್ನನ್ನು ಪೊಲೀಸರು ಬಂಧಿಸಿದ್ದರು. ಎರಡೂ ಹಾವುಗಳನ್ನು ತಲಾ 5,000 ರೂ.ಗೆ ಖರೀದಿಸಿದ್ದೆ, ಉತ್ರಾ ಮೇಲೆ ಹಾವು ಎಸೆದು ಹಾವು ಕಡಿಯುವಂತೆ ಮಾಡಿದೆ ಎಂದು ವಿಚಾರಣೆ ವೇಳೆ ತಪ್ಪೊಪ್ಪಿಕೊಂಡಿದ್ದ.
ರಬ್ಬರ್ ತೋಟದಲ್ಲಿ ಚಿನ್ನಾಭರಣ ಪತ್ತೆ
ಸೂರಜ್ ಕುಟುಂಬದ ವಿರುದ್ಧ ಕೌಟುಂಬಿಕ ದೌರ್ಜನ್ಯ, ಪಿತೂರಿ ಮತ್ತಿತರರ ಆರೋಪಗಳಿಗಾಗಿ ಭಾರತೀಯ ದಂಡ ಸಂಹಿತೆಯ ವಿವಿಧ ಸೆಕ್ಷನ್ಗಳ ಅಡಿ ಉತ್ರಾ ಕುಟುಂಬದವರು ಪ್ರಕರಣ ದಾಖಲಿಸಿದ್ದರು. ಅಂತಿಮವಾಗಿ ತನ್ನ ಅಪರಾಧವನ್ನು ಒಪ್ಪಿಕೊಂಡಿದ್ದ ಸೂರಜ್ ಆರ್ಥಿಕ ಲಾಭಕ್ಕಾಗಿ ಕೃತ್ಯ ಎಸಗಿದ್ದಾಗಿ ತಪ್ಪೊಪ್ಪಿಕೊಂಡಿದ್ದ. ಉತ್ರಾಗೆ ಸೇರಿದ 38 ಸವರನ್ ಚಿನ್ನಾಭರಣವನ್ನು ಸೂರಜ್ ಅಪ್ಪ, ಅಮ್ಮ ಹಾಗೂ ಸೋದರಿ ಸೇರಿ ರಬ್ಬರ್ ತೋಟವೊಂದರಲ್ಲಿ ಬಚ್ಚಿಟ್ಟಿದ್ದನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ.