ಸ್ಮಗಲಿಂಗ್ ಕೇಸ್: ತನಿಖೆಗೆ ಸಿದ್ಧ, ಪಿಎಂ ಮೋದಿಗೆ ಪಿಣರಾಯಿ ಪತ್ರ
ತಿರುವನಂತಪುರಂ, ಜುಲೈ 8: ಕೇರಳದಲ್ಲಿ ರಾಜಕೀಯ ಬಿರುಗಾಳಿ ಎಬ್ಬಿಸಿರುವ ಚಿನ್ನದ ಸ್ಮಗಲಿಂಗ್ ಕೇಸ್ ಕುರಿತಂತೆ ಕೇಂದ್ರ ಸರ್ಕಾರ ಯಾವುದೇ ಕ್ರಮ ತೆಗೆದುಕೊಳ್ಳಬಹುದು. ನಾನು ತನಿಖೆ ಎದುರಿಸಲು ಸಿದ್ಧ ಎಂದು ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆ.
Recommended Video
ಯುಎಇ ದೂತವಾಸ ಕಚೇರಿಯ ಮಾಜಿ ಅಧಿಕಾರಿ ಸ್ವಪ್ನಾಗೆ ನೆರವಾಗಿದ್ದ ಆರೋಪ ಹೊತ್ತಿದ್ದ ಪ್ರಧಾನ ಕಾರ್ಯದರ್ಶಿ ಐಎಎಸ್ ಅಧಿಕಾರಿ ಶಿವಶಂಕರ್ ಅವರನ್ನು ಅಮಾನತುಗೊಳಿಸಲಾಗಿದೆ. ಸಿಬಿಐ ತನಿಖೆಗೆ ಬಿಜೆಪಿ ಹಾಗೂ ಕಾಂಗ್ರೆಸ್ ಆಗ್ರಹಿಸುತ್ತಿವೆ..
30 ಕೆಜಿ ಚಿನ್ನದ ಸ್ಮಗ್ಲರ್ ಸ್ವಪ್ನಾಗೂ ಸಿಎಂ ಕಚೇರಿಗೂ ಏನಿದು ನಂಟು?
ದೆಹಲಿಯಲ್ಲಿರುವ ಯುಎಇ ದೂತವಾಸ ಕಚೇರಿ ಈ ಬಗ್ಗೆ ಸ್ಪಷ್ಟನೆ ನೀಡಿ, ಈ ಬಗ್ಗೆ ಆಂತರಿಕ ತನಿಖೆ ಆರಂಭಿಸಲಾಗಿದೆ. ಕಾರ್ಗೋ ರವಾನೆಯನ್ನು ಯುಎಇ ರಾಯಭಾರ ಕಚೇರಿ ವಿಳಾಸಕ್ಕೆ ತಲುಪುವಂತೆ ಸೂಚಿಸಿದ್ದು ಯಾರು ಎಂಬುದರ ಬಗ್ಗೆ ತನಿಖೆ ನಡೆದಿದೆ. ಇದು ದೂತವಾಸ ಘನತೆಗೆ ಧಕ್ಕೆ ತರುವಂಥ ಪ್ರಕರಣವಾಗಿದ್ದು, ಭಾರತೀಯ ತನಿಖಾ ಕೇಂದ್ರಗಳಿಗೆ ಸಂಪೂರ್ಣ ಸಹಕಾರ ನೀಡಲಾಗುವುದು ಎಂದಿದೆ.
ಸ್ವಪ್ನ ಸುರೇಶ್ ಯುಎಇ ದೂತಾವಾಸದ ಮಾಜಿ ಉದ್ಯೋಗಿ
ಸ್ವಪ್ನ ಸುರೇಶ್ ತಿರುವನಂತಪುರದಲ್ಲಿರುವ ಯುಎಇ ದೂತಾವಾಸ ಕಚೇರಿಯ ಮಾಜಿ ಉದ್ಯೋಗಿಯಾಗಿದ್ದರು. ಈಕೆ ಬಗ್ಗೆ ಇನ್ನಷ್ಟು ಮಾಹಿತಿ ಕಲೆ ಹಾಕಿದಾಗ ಕೇರಳದ ಐಟಿ ಇಲಾಖೆಯ ಐಟಿ ಇನ್ಫ್ರಾಸ್ಟ್ರಕ್ಚರ್ ಲಿಮಿಟೆಡ್(KSITIL) ನಲ್ಲಿ ಕಾರ್ಯ ನಿರ್ವಹಣಾ ವ್ಯವಸ್ಥಾಪಕಿಯಾಗಿದ್ದರು ಎಂದು ತಿಳಿದು ಬಂದಿದೆ. ಅಲ್ಲದೇ, ಐಟಿ ಇಲಾಖೆ ನೇರ ಸಿಎಂ ಪಿಣರಾಯಿ ವಿಜಯನ್ ಅವರ ಕೈಲಿದೆ. ಐಟಿ ಇಲಾಖೆ ಹುದ್ದೆ ಅವಧಿ ಮುಗಿದರೂ ಸ್ವಪ್ನಗೆ ಲಾಕ್ಡೌನ್ ವರವಾಗಿ ಪರಿಣಮಿಸಿತ್ತು. ಇನ್ನೂ 6 ತಿಂಗಳ ಅವಧಿಗೆ ಹುದ್ದೆಯಲ್ಲಿ ಮುಂದುವರೆಯಲು ಸರ್ಕಾರ ಆದೇಶಿಸಿತ್ತು. ಇದೆಲ್ಲದರ ಲಾಭವನ್ನು ಪಡೆದು ಚಿನ್ನದ ಸ್ಮಗಲಿಂಗ್ ನಲ್ಲಿ ಆಕೆ ತೊಡಗಿದ್ದರು ಎನ್ನಲಾಗಿದೆ.
ಬಿಜೆಪಿ ರಾಜ್ಯ ಅಧ್ಯಕ್ಷ ಕೆ.ಸುರೇಂದ್ರನ್ ಆಗ್ರಹ
ಸ್ವಪ್ನಾ ಸುರೇಶ್ ತಿರುವನಂತಪುರದ ಯುನೈಟೆಡ್ ಅರಬ್ ಎಮಿರೇಟ್ಸ್ ಕಾನ್ಸುಲೇಟ್ನಲ್ಲಿ ಕಾರ್ಯನಿರ್ವಾಹಕ ಕಾರ್ಯದರ್ಶಿಯಾಗಿ, ಕೇರಳದ ಐಟಿ ಇಲಾಖೆಯಲ್ಲೂ ಕೆಲಸ ಮಾಡಿದ್ದರು ಎಂದು ತಿಳಿದು ಬಂದಿದೆ. ಹೀಗಾಗಿ, ಚಿನ್ನದ ಕಳ್ಳಸಾಗಣೆ ದಂಧೆಗೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಕಚೇರಿಯೊಂದಿಗೆ ಸಂಬಂಧವಿದೆ. ಕಸ್ಟಮ್ಸ್ ವಶಕ್ಕೆ ತೆಗೆದುಕೊಂಡಂತೆ ಮೊದಲ ಕರೆ ಮುಖ್ಯಮಂತ್ರಿ ಕಚೇರಿಯಿಂದ ಬಂದಿದೆ. ಸ್ವಪ್ನಾ ಸುರೇಶ್ ಅವರು ಮುಖ್ಯಮಂತ್ರಿಯ ಪ್ರಧಾನ ಕಾರ್ಯದರ್ಶಿ ಎಸ್.ಶಿವಶಂಕರ್ ಅವರೊಂದಿಗೆ ನಿಕಟ ಸಂಪರ್ಕ ಹೊಂದಿದ್ದಾರೆ, ಅವರು ಐಟಿ ಕಾರ್ಯದರ್ಶಿಯೂ ಆಗಿದ್ದಾರೆ. ಹೀಗಾಗಿ ಈ ಪ್ರಕರಣದ ತನಿಖೆಯನ್ನು ಸಿಬಿಐಗೆ ತಕ್ಷಣವೇ ವಹಿಸಬೇಕು ಎಂದು ಬಿಜೆಪಿ ರಾಜ್ಯ ಅಧ್ಯಕ್ಷ ಕೆ.ಸುರೇಂದ್ರನ್ ಆಗ್ರಹಿಸಿದ್ದಾರೆ.
ಸಿಬಿಐ ತನಿಖೆಗೆ ಆಗ್ರಹಿಸಿದ ಬಿಜೆಪಿ, ಕಾಂಗ್ರೆಸ್
ಯುಎಇ ಕಾನ್ಸುಲೇಟ್ನಿಂದ ಹೊರಹಾಕಲ್ಪಟ್ಟ ಸ್ವಪ್ನಾ ಹಾಗೂ ಮುಖ್ಯಮಂತ್ರಿ ಹೊಂದಿರುವ ಐಟಿ ಖಾತೆ ಅಧೀನದ ಇಲಾಖೆಯಲ್ಲಿ ಕಾರ್ಯ ನಿರ್ವಹಿಸಿದ್ದಾರೆ. 2017ರಲ್ಲಿ ಸಿಎಂ ಕಚೇರಿ ಜೊತೆ ಸ್ವಪ್ನಾಗೆ ಸಂಪರ್ಕವಿತ್ತು. ತನಿಖೆ ಮುಗಿಯುವ ತನಕ ಸಿಎಂ ಕಚೇರಿ ಬಂದ್ ಆಗಲಿ, ಪಾರದರ್ಶಕ ತನಿಖೆಯಾಗಬೇಕಾದರೆ ಸಿಬಿಐ ಕೇಸ್ ತೆಗೆದುಕೊಳ್ಳಬೇಕು ಎಂದು ಬಿಜೆಪಿ ಹಾಗೂ ಕಾಂಗ್ರೆಸ್ ಆಗ್ರಹಿಸಿದೆ.
ಸಿಎಂ ಕಚೇರಿಗೆ ನೇರ ಸಂಬಂಧದ ಆರೋಪ
ಚಿನ್ನದ ಸ್ಮಗಲಿಂಗ್ ಗೂ ಸಿಎಂ ಕಚೇರಿಗೂ ಯಾವುದೇ ಸಂಬಂಧವಿಲ್ಲ. ರಾಜತಾಂತ್ರಿಕ ಕಚೇರಿ ವಿಳಾಸ ಇದ್ದಿದ್ದರಿಂದ ಈ ಬಗ್ಗೆ ಕೇಳಲು ಸಿಎಂ ಕಚೇರಿಗೆ ಅಧಿಕಾರಿಗಳು ಕರೆ ಮಾಡಿದ್ದರು ಅಷ್ಟೇ ಎಂದು ಪಿಣರಾಯಿ ವಿಜಯನ್ ಅವರ ಕಚೇರಿ ಪ್ರತಿಕ್ರಿಯಿಸಿದೆ.
ಸಿಎಂ ಕಚೇರಿಯ ಮಾಜಿ ಕಾನ್ಸುಲೆಟ್ ಸರಿತಾ ನಾಯರ್, ಸ್ವಪ್ನ ಸುರೇಶ್ ಅಲ್ಲದೆ ಕಾನ್ಸುಲೆಟ್ ಪಿಆರ್ ಒ ಸರಿತ್ ಕುಮಾರ್ ಪ್ರಮುಖ ಆರೋಪಿಗಳಾಗಿದ್ದಾರೆ. ಕೇರಳ ರಾಜ್ಯ ಮಾಹಿತಿ ತಂತ್ರಜ್ಞಾನ ಮೂಲಸೌಕರ್ಯ ಲಿಮಿಟೆಡ್ ( ಕೆಎಸ್ ಐಟಿ ಎಲ್) ಹಾಗೂ ಸ್ಪೇಸ್ ಪಾರ್ಕ್ ನಲ್ಲಿ ಸ್ವಪ್ನ ಕಾರ್ಯ ನಿರ್ವಹಿಸಿದ್ದರು.
ಪಿಎಂ ಮೋದಿಗೆ ಪಿಣರಾಯಿ ವಿಜಯನ್ ಪತ್ರ
ಸ್ಮಗಲಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪಿಎಂ ಮೋದಿಗೆ ಪಿಣರಾಯಿ ವಿಜಯನ್ ಪತ್ರ ಬರೆದಿದ್ದಾರೆ. ಜುಲೈ 5 ರಂದು ತಿರುವನಂತಪುರಂ ವಿಮಾನ ನಿಲ್ದಾಣದಲ್ಲಿ 30 ಕೆಜಿ ಚಿನ್ನ ಜಪ್ತಿ ಮಾಡಲಾಗಿದೆ. ಡಿಪ್ಲೋಮ್ಯಾಟಿಕ್ ಬ್ಯಾಗೇಜ್ ನಲ್ಲಿದ್ದರಿಂದ ಈ ಬಗ್ಗೆ ಹೆಚ್ಚಿನ ಕಾಳಜಿ ತನಿಖೆ ಅಗತ್ಯವಿದೆ. ಸಿಎಂ ಕಚೇರಿ ಮೇಲೆ ಆರೋಪ ಕೇಳಿ ಬಂದಿದ್ದು, ಯಾವುದೇ ಪಾರದರ್ಶಕ ತನಿಖೆಗೆ ಸಿದ್ಧವಾಗಿದ್ದು, ರಾಜ್ಯ ಸರ್ಕಾರ ಸಂಪೂರ್ಣ ಸಹಕಾರ ನೀಡಲಿದೆ. ತಾವು ಕೂಡಲೇ ಮಧ್ಯ ಪ್ರವೇಶಿಸಿ ಕೇಂದ್ರ ತನಿಖಾ ಸಂಸ್ಥೆಯ ತನಿಖೆಗೆ ಆದೇಶಿಸಬೇಕು ಎಂದು ಕೋರುತ್ತೇನೆ ಎಂದು ಪತ್ರದಲ್ಲಿ ಬರೆದಿದ್ದಾರೆ.