ಕಾಂಗ್ರೆಸ್ - ಕಮ್ಯೂನಿಸ್ಟ್ ಮಧ್ಯೆ ಕೇರಳದಲ್ಲಿ 'ಶಬರಿಮಲೆ' ಪಾಲಿಟಿಕ್ಸ್: ಎಲ್ಲಾ ಬಿಜೆಪಿಗಾಗಿ!
ತಿರುವಂತನಂತಪುರ, ಫೆ 8: ಉದರ ನಿಮಿತ್ತಂ ಬಹುಕೃತ ವೇಷಂ ಎನ್ನುವ ಮಾತಿದೆ. ಹಾಗೆಯೇ, ಚುನಾವಣೆಯ ಸಮಯದಲ್ಲಿ ರಾಜಕೀಯ ಪಕ್ಷದವರು ಎಲ್ಲರಲ್ಲೂ ದೇವರನ್ನು ಕಾಣುತ್ತಾರೆ. ಇದಕ್ಕೆ ಯಾವ ರಾಜಕೀಯ ಪಕ್ಷವೂ ಹೊರತಲ್ಲ.
ಶಬರಿಮಲೆ ಅಯ್ಯಪ್ಪಸ್ವಾಮಿ ದೇವಾಲಯ ಎನ್ನುವ ಹಿಂದೂಗಳ ಧಾರ್ಮಿಕ ಕೇಂದ್ರ ಯಾವರೀತಿ ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿತ್ತು ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಮಹಿಳೆಯರಿಗೆ ದೇವಸ್ಥಾನಕ್ಕೆ ಪ್ರವೇಶ ನಿಷಿದ್ದ ಎನ್ನುವ ವಿಚಾರ ಸರಿಯೋ ತಪ್ಪೋ ಎನ್ನುವುದು ಆಮೇಲಿನ ವಿಚಾರವಾದರೂ, ಇದು ಸುಪ್ರೀಂಕೋರ್ಟ್ ಮೆಟ್ಟಲೇರಿತ್ತು.
ಕೇರಳ ಚುನಾವಣೆ: ಬಿಜೆಪಿ ಉಸ್ತುವಾರಿಯಾಗಿ ಪ್ರಹ್ಲಾದ್ ಜೋಶಿ, ಅಶ್ವಥ್ ನಾರಾಯಣ್
ಈ ವರ್ಷ ವಿವಿಧ ರಾಜ್ಯಗಳ ಅಸೆಂಬ್ಲಿ ಚುನಾವಣೆ ನಡೆಯಲಿದೆ, ಅದರಲ್ಲಿ ಕೇರಳವೂ ಒಂದು, ಮೇ ತಿಂಗಳೊಳಗೆ ಚುನಾವಣೆ ನಡೆಯಬೇಕಿದೆ. ಹಾಗಾಗಿ ಕಾಂಗ್ರೆಸ್ ನೇತೃತ್ವ ಯುಡಿಎಫ್ ಮತ್ತು ಸಿಪಿಐಎಂ ನೇತೃತ್ವದ ಎಲ್ಡಿಎಫ್ ನಡುವೆ ತಂತ್ರ, ರಣತಂತ್ರ ಜೋರಾಗಿ ನಡೆಯುತ್ತಿದೆ.
Opinion Poll: ಕೇರಳದಲ್ಲಿ ಮತ್ತೆ ಪಿಣರಾಯಿ ವಿಜಯನ್ ದಿಗ್ವಿಜಯ
ಶಬರಿಮಲೆ ದೇವಾಲಯಕ್ಕೆ ಮಹಿಳೆಯರ ಪ್ರವೇಶ ವಿಚಾರವನ್ನು ಹಾಲೀ ಪಿಣರಾಯಿ ಸರಕಾರ ನಿಭಾಯಿಸಿದ್ದ ರೀತಿ ಅಸಂಖ್ಯಾತ ಅಯ್ಯಪ್ಪ ಭಕ್ತರನ್ನು ಕೆರಳಿಸಿತ್ತು. ದೇವಾಲಯದ ಸಂಪ್ರದಾಯವನ್ನು ಸರಕಾರ ಹಾಳು ಮಾಡುತ್ತಿದೆ ಎಂದು ಭಕ್ತರು ಸಿಟ್ಟಾಗಿದ್ದರು. ಬಿಜೆಪಿ ಇದರ ಮೈಲೇಜ್ ಪಡೆದುಕೊಳ್ಳಲು ನೋಡಿತ್ತು.
ಖಾತೆಯ ಸಚಿವ ಕಡಕಂಪಲ್ಲಿ ಸುರೇಂದ್ರನ್
ಕೆಲವು ದಿನಗಳ ಹಿಂದೆ ಕೇರಳದ ದೇವಸ್ವಂ ಖಾತೆಯ ಸಚಿವ ಕಡಕಂಪಲ್ಲಿ ಸುರೇಂದ್ರನ್, "ಕಳೆದ ವರ್ಷ ದೇವಾಲಯಕ್ಕೆ ಇಷ್ಟು ಆದಾಯ ಬಂದಿತ್ತು, ಈ ವರ್ಷ ಇಷ್ಟೇ ಆದಾಯ ಬಂದಿದೆ. ಅಯ್ಯಪ್ಪ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಕಾಣಿಕೆ ನೀಡಬೇಕು"ಎಂದು ಹೇಳಿದ್ದರು. 'ಶಬರಿಮಲೆ ದೇವಾಲಯದ ಸಂಪ್ರದಾಯ ನಿಮಗೆ ಬೇಡ, ಆದಾಯ ಮಾತ್ರ ಬೇಕಾ' ಎಂದು ಬಿಜೆಪಿಯವರು ಇದನ್ನು ಪ್ರಶ್ನಿಸಿದ್ದರು.
ಕೇರಳ ರಾಜಕೀಯದಲ್ಲಿ ಶಬರಿಮಲೆ ವಿಚಾರ
ಧಾರ್ಮಿಕ ನಂಬಿಕೆಯ ವಿಚಾರವಾಗಿರುವುದರಿಂದ ಮತ್ತು ಇದು ಚುನಾವಣೆಯ ವೇಳೆ ಯಾವರೀತಿ ಬೇಕಾದರೂ ಹುರುಳುವ ಸಾಧ್ಯತೆಯನ್ನು ಅರಿತ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಈ ವಿಚಾರದ ಬಗ್ಗೆ ಕಾನೂನು ರೂಪಿಸುವುದಾಗಿ ಹೇಳಿದೆ. ಇದು ಕೇರಳ ರಾಜಕೀಯದಲ್ಲಿ ಶಬರಿಮಲೆ ವಿಚಾರವನ್ನು ಇಟ್ಟುಕೊಂಡು ಬಿಜೆಪಿಯವರು ಲಾಭ ಪಡೆದುಕೊಳ್ಳಬಾರದು ಎನ್ನುವ ಕಾಂಗ್ರೆಸ್ಸಿನ ಮುಂದಾಲೋಚನೆ ಎಂದೇ ವ್ಯಾಖ್ಯಾನಿಸಲಾಗುತ್ತಿದೆ.
ಮುಲ್ಲಪಳ್ಳಿ ರಾಮಚಂದ್ರನ್
'ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಯುಡಿಎಫ್ ಅಧಿಕಾರಕ್ಕೆ ಬಂದರೆ, ಶಬರಿಮಲೆ ದೇವಾಲಯಕ್ಕೆ ಮಹಿಳಾ ಪ್ರವೇಶಾತಿ ವಿಚಾರದಲ್ಲಿ ಭಕ್ತರ ನಂಬಿಕೆಗೆ ಧಕ್ಕೆಯಾಗದಂತೆ ಕಾನೂನು ರೂಪಿಸಲಾಗುವುದು. ನಮ್ಮ ಪ್ರಣಾಳಿಕೆಯಲ್ಲಿ ಶಬರಿಮಲೆ ವಿಚಾರ ಪ್ರಮುಖ ಅಂಶವಾಗಲಿದೆ' ಎಂದು ಕೇರಳ ಪ್ರದೇಶ ಕಾಂಗ್ರೆಸ್ ಘಟಕದ ಅಧ್ಯಕ್ಷ ಮುಲ್ಲಪಳ್ಳಿ ರಾಮಚಂದ್ರನ್ ಹೇಳಿದ್ದಾರೆ.
ಸಿಎಂ ಪಿಣರಾಯಿ ವಿಜಯನ್
ಇದಕ್ಕೆ ಪ್ರತಿಕ್ರಿಯೆ ನೀಡಿರುವ ಸಿಎಂ ಪಿಣರಾಯಿ ವಿಜಯನ್, "ಶಬರಿಮಲೆ ವಿಚಾರ ಸರ್ವೋಚ್ಚ ನ್ಯಾಯಾಲಯದಲ್ಲಿದೆ. ಚುನಾವಣೆ ಹತಿರ ಬರುತ್ತಿದೆ ಎನ್ನುವ ಕಾರಣಕ್ಕಾಗಿ ಈ ವಿಚಾರವನ್ನು ಯುಡಿಎಫ್ ಕೆದಕುತ್ತಿದೆ. ನಮ್ಮ ಸರಕಾರ ವಿವಿಧ ರಂಗದ ಪ್ರಮುಖರುಗಳ ಜೊತೆ ಚರ್ಚಿಸಿ ಈ ವಿಚಾರದಲ್ಲಿ ಸೂಕ್ತ ನಿರ್ಧಾರ ತೆಗೆದುಕೊಳ್ಳಲಾಗುವುದು"ಎಂದು ಹೇಳಿದ್ದಾರೆ. ಒಟ್ಟಿನಲ್ಲಿ, ಯುಡಿಎಫ್ ಮತ್ತು ಎಲ್ದಿಎಫ್ ಎರಡೂ ಪಕ್ಷಗಳು ಬಿಜೆಪಿ ಇದರ ಲಾಭವನ್ನು ಪಡೆದುಕೊಳ್ಳದಂತೆ ಕಾರ್ಯತಂತ್ರ ರೂಪಿಸುವ ಸಾಧ್ಯತೆಯಿದೆ.