ಹೆಲ್ಮೆಟ್ ಧರಿಸಿ ಇಬ್ಬರು ಮಹಿಳೆಯರ ಶಬರಿಮಲೆ ಪ್ರವೇಶ ಕೊನೇ ಕ್ಷಣದಲ್ಲಿ ವಿಫಲ
ಬ್ರೇಕಿಂಗ್: ಇಬ್ಬರು ಮಹಿಳೆಯರ ಶಬರಿಮಲೆ ಪ್ರವೇಶ ಕೊನೇ ಕ್ಷಣದಲ್ಲಿ ವಿಫಲ
ತಿರುವನಂತಪುರಂ, ಅ 19: ಹಿಂದೂ ಧಾರ್ಮಿಕ ಕ್ಷೇತ್ರ ಶಬರಿಮಲೆ ಅಯ್ಯಪ್ಪಸ್ವಾಮಿ ದೇವಾಲಯದ ಆವರಣವನ್ನು ಇಬ್ಬರು ಮಹಿಳೆಯರು ಇನ್ನೇನು ತಲುಪಿದರು ಅನ್ನುವಷ್ಟರಲ್ಲಿ, ಭಕ್ತಾದಿಗಳ ಪ್ರತಿಭಟನೆ ಹೆಚ್ಚಾದ ಹಿನ್ನಲೆಯಲ್ಲಿ, ದೇವಾಲಯ ಪ್ರವೇಶಿಸದೇ ವಾಪಸ್ ಬಂದಿದ್ದಾರೆನ್ನುವ ಬ್ರೇಕಿಂಗ್ ನ್ಯೂಸ್ ವರದಿಯಾಗಿದೆ.
ಭಾರೀ ಪೊಲೀಸ್ ಬಂದೋಬಸ್ತ್ ನಡುವೆ ಹೆಲ್ಮೆಟ್ ಧರಿಸಿ, ಪೊಲೀಸರಂತೆ ವೇಷ ಧರಿಸಿ ಹೈದರಾಬಾದ್ ಮೂಲದ ಪತ್ರಕರ್ತೆ ಮತ್ತು ಇನ್ನೊಬ್ಬ ಮಹಿಳೆ ದೇವಾಲಯ ಪ್ರವೇಶಕ್ಕೆ ಮುಂದಾಗಿದ್ದರು. ಮೊಜೋ ಟಿವಿಯ ಕವಿತಾ ಜಕ್ಕಾಲ ಮತ್ತು ರಹನಾ ಫಾತಿಮಾ ಎನ್ನುವ ಮಹಿಳೆ ದೇವಾಲಯ ಪ್ರವೇಶಕ್ಕೆ ಮುಂದಾಗಿದ್ದರು.
ಕೇರಳ ಸರಕಾರ ಊಹಿಸಲೂ ಅಸಾಧ್ಯವಾದ ಪ್ರತಿಭಟೆನೆಯ ಕಾವು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ, ಸರಕಾರ ಇನ್ನಷ್ಟು ಭದ್ರತೆಯನ್ನು ಹೆಚ್ಚಿಸಿದೆ. ಈ ನಡುವೆ, ಪತ್ರಕರ್ತೆ ಕವಿತಾ, ನಾನು ಇಲ್ಲಿಗೆ ಬಂದಿರುವುದು ವರದಿ ನೀಡಲು ಎಂದಿದ್ದಾರೆ. ಇನ್ನೊಬ್ಬ ಮಹಿಳೆ ಫಾತಿಮಾ, ಹದಿನೆಂಟು ಮೆಟ್ಟಲನ್ನು ಏರಲು ಅವಕಾಶ ನೀಡಬೇಕೆಂದು ಪಟ್ಟು ಹಿಡಿದಿದ್ದಾರೆಂದು ವರದಿಯಾಗಿದೆ.
ಪ್ರತಿಭಟನಾಕಾರ ಮೇಲೆ ಬಲಪ್ರಯೋಗ ಮಾಡುವುದಿಲ್ಲ ಎಂದು ಪೊಲೀಸರು ಸ್ಪಷ್ಟ ಪಡಿಸಿದ್ದಾರೆ. ಪಂಪಾದಿಂದ ಶಬರಿಮಲೆಯವರೆಗೆ ಪರಿಸ್ಥಿತಿ ತೀವ್ರ ಸೂಕ್ಷ್ಮತೆಯಿಂದ ಕೂಡಿದ್ದು, ಕೇರಳ ಪೊಲೀಸ್ ವರಿಷ್ಠ ಶ್ರೀಜಿತ್, ಡಿಜಿಪಿ ಜೊತೆ ಸತತ ಸಂಪರ್ಕದಲ್ಲಿದ್ದಾರೆ.
(ಚಿತ್ರದಲ್ಲಿ ಫಾತಿಮಾ, ಚಿತ್ರಕೃಪೆ: ಟ್ವಿಟ್ಟರ್)
ಕೇರಳ ಸರಕಾರ ಭಕ್ತರ ಜೊತೆಗಿದ್ದು, ಅದರಂತೇ ಸರ್ವೋಚ್ಚ ನ್ಯಾಯಾಲದ ಆದೇಶವನ್ನು ಪಾಲಿಸಬೇಕಾಗಿದೆ. ನಿಜವಾದ ಮಹಿಳಾ ಭಕ್ತರಿಗೆ ಸರಕಾರ ಭದ್ರತೆ ನೀಡಲು ಸಿದ್ದವಿದೆ ಎಂದು ಕೇರಳ ಸರಕಾರದ ಮುಜರಾಯಿ ಸಚಿವರು ಹೇಳಿದ್ದಾರೆ. ಫಾತಿಮಾ (ರೆಹನಾ ಫಾತಿಮಾ ಪ್ಯಾರೇಜಾನ್ ಸುಲೇಮಾನ್) ಒಬ್ಬರು ಮಹಿಳಾ ಕಾರ್ಯಕರ್ತೆಯೆಂದು ತಿಳಿದುಬಂದಿದೆ.