ಕೇರಳದಲ್ಲಿ ಕೆಇಎಎಂ ಪರೀಕ್ಷೆ ಬರೆದ ವಿದ್ಯಾರ್ಥಿಗಳಿಗೆ ಕೊವಿಡ್-19 ಸೋಂಕು!
ತಿರುವನಂತಪುರಂ, ಜುಲೈ.21: ನೊವೆಲ್ ಕೊರೊನಾವೈರಸ್ ಸೋಂಕು ಹರಡುವಿಕೆ ನಡುವೆಯೂ ಇಂಜಿನಿಯರಿಂಗ್ ಆರ್ಕಿಟೆಕ್ಚರ್ ಮೆಡಿಕಲ್ ಪರೀಕ್ಷೆಗಳನ್ನು ನಡೆಸಿದ ಕೇರಳ ಸರ್ಕಾರಕ್ಕೆ ಮತ್ತೊಮ್ಮೆ ಬಿಗ್ ಶಾಕ್ ಹೊಡೆದಿದೆ.
ತಿರುವನಂತಪುರಂನ ಎರಡು ಪ್ರತ್ಯೇಕ ಪರೀಕ್ಷಾ ಕೇಂದ್ರಗಳಲ್ಲಿ ಪ್ರವೇಶ ಪರೀಕ್ಷೆಗಳನ್ನು ಬರೆದ ಇಬ್ಬರು ವಿದ್ಯಾರ್ಥಿಗಳಿಗೆ ಕೊರೊನಾವೈರಸ್ ಸೋಂಕು ತಗಲಿರುವುದು ವೈದ್ಯಕೀಯ ತಪಾಸಣೆ ವೇಳೆ ದೃಢಪಟ್ಟಿದೆ.
ಕೇರಳ ಲಾಕ್ ಡೌನ್ ನಡುವೆ ಪ್ರವೇಶ ಪರೀಕ್ಷೆ; ಅಂತರ ಮರೆತ ವಿದ್ಯಾರ್ಥಿಗಳು
ಕಳೆದ ಜುಲೈ.17ರಂದು ಕೊರೊನಾವೈರಸ್ ಸೋಂಕು ಹರಡುವಿಕೆ ಭೀತಿ ನಡುವೆಯೂ ಕೇರಳದಲ್ಲಿ ಕೆಇಎಎಂ ಪ್ರವೇಶ ಪರೀಕ್ಷೆಯನ್ನು ನಡೆಸಲಾಗಿತ್ತು. ಈ ವೇಳೆ ಸಾಮಾಜಿಕ ಅಂತರ ಮರೆತು ಕಾಲೇಜಿನ ಎದುರಿಗೆ ಸಾವಿರಾರು ವಿದ್ಯಾರ್ಥಿಗಳು ಮತ್ತು ಪೋಷಕರು ನೆರೆದಿದ್ದರು.
ಲಾಕ್ ಡೌನ್ ನಿಯಮ ಉಲ್ಲಂಘಿಸಿದವರಿಗೆ ಆತಂಕ:
ತಿರುವನಂತಪುರಂ ಪತ್ತೋಮ್ ನಲ್ಲಿ ಇರುವ ಕೇರಳ ಆರ್ಕಿಟೆಕ್ಟರ್ ಮೆಡಿಕಲ್(ಕೆಇಎಎಂ) ಕಾಲೇಜಿನ ಪರೀಕ್ಷಾ ಕೇಂದ್ರದ ಎದುರು ಸಾವಿರಾರು ವಿದ್ಯಾರ್ಥಿಗಳು ಮತ್ತು ಪೋಷಕರು ಸರ್ಕಾರದ ಎಲ್ಲಾ ನಿಯಮಗಳನ್ನು ಗಾಳಿ ತೂರಿದ್ದರು. ಪತ್ತೋಮ್ ನಲ್ಲಿರುವ ಸೇಂಟ್ ಮೇರಿಸ್ ಪ್ರೌಢಶಾಲೆ ಎದುರಿನಲ್ಲೂ ಪ್ರವೇಶ ಪರೀಕ್ಷೆ ಅಂತ್ಯವಾಗುತ್ತಿದ್ದಂತೆ ವಿದ್ಯಾರ್ಥಿಗಳು ಮತ್ತು ಪೋಷಕರ ಜಾತ್ರೆಯೇ ಸೇರಿತು. ಈ ವೇಳೆ ಕೇಂದ್ರ ಸರ್ಕಾರದ ಲಾಕ್ ಡೌನ್ ಮಾರ್ಗಸೂಚಿಗಳನ್ನೆಲ್ಲ ಉಲ್ಲಂಘಿಸಲಾಗಿತ್ತು. ಇದೀಗ ವಿದ್ಯಾರ್ಥಿಗಳಲ್ಲಿ ಸೋಂಕು ಕಾಣಿಸಿಕೊಂಡಿರುವುದು ಸಾಕಷ್ಟು ಆತಂಕವನ್ನು ಹುಟ್ಟು ಹಾಕಿದೆ.