ಬಾಗಿಲು ತೆರೆದ ಶಬರಿಮಲೆ: ಅಯ್ಯಪ್ಪನ ದರ್ಶನ ಪಡೆಯಲು ಹೊರಟ ತೃಪ್ತಿ ದೇಸಾಯಿ
ತಿರುವನಂತಪುರಂ, ನವೆಂಬರ್ 17: ಇಂದು ಸಾಮಾಜಿಕ ಕಾರ್ಯಕರ್ತೆ ತೃಪ್ತಿ ದೇಸಾಯಿ ಶಬರಿಮಲೆ ದರ್ಶನಕ್ಕೆ ತೆರಳಲು ಸಿದ್ಧತೆ ನಡೆಸಿದ್ದು, ತೀವ್ರ ವಿರೋಧ ವ್ಯಕ್ತವಾಗಿದೆ.
ಮಂಡಲ ಪೂಜೆಗಾಗಿ ಶನಿವಾರದಿಂದ ಶಬರಿಮಲೆ ಅಯ್ಯಸ್ವಾಮಿ ದೇಗುಲದ ಬಾಗಿಲು ತೆರೆಯಲಾಗಿದೆ.
ಈ ಬಾರಿಯೂ ತೃಪ್ತಿ ದೇಸಾಯಿ ಭೇಟಿಗೆ ಭಾರೀ ವಿರೋಧ ವ್ಯಕ್ತವಾಗುವ ಸಾಧ್ಯತೆ ಇದೆ. ಶಬರಿಮಲೆ ಬೆಟ್ಟದ ಆರಂಭದಲ್ಲೇ ಕೆಲ ಭಕ್ತರು ಅವರನ್ನು ತಡೆಯುವ ಸಾಧ್ಯತೆ ಇದೆ. ಹೀಗಾಗಿ ಇಂದು ದೇವಾಲಯದ ಸುತ್ತಮುತ್ತ ಹೆಚ್ಚಿನ ಭದ್ರತೆ ಒದಗಿಸಲಾಗಿದೆ.
ದೇಗುಲ ಪ್ರವೇಶಕ್ಕೆ ಮುಂದಾದ 10 ಮಹಿಳೆಯರನ್ನು ಪೊಲೀಸರು ಸಂಬಾ ಬೇಸ್ನಲ್ಲಿಯೇ ತಡೆದು ವಾಪಸ್ ಕಳುಹಿಸಿದ್ದಾರೆ.
ಕಳೆದ ಬಾರಿ ಕೊಚ್ಚಿ ವಿಮಾನ ನಿಲ್ದಾಣಕ್ಕೆ ಅವರು ಆಗಮಿಸುತ್ತಿದ್ದಂತೆ ಭಾರೀ ಪ್ರತಿಭಟನೆ ಆರಂಭವಾಗಿತ್ತು. ಹೀಗಾಗಿ ಅವರು ವಿಮಾನ ನಿಲ್ದಾಣದಿಂದಲೇ ಹಿಂತಿರುಗಿದ್ದರು.
ಶಬರಿಮಲೆ ಅಯ್ಯಪ್ಪ ದೇವಾಲಯಕ್ಕೆ ತೆರಳುವುದು ಹೇಗೆ?
ಶಬರಿಮಲೆ ಅಯ್ಯಪ್ಪಸ್ವಾಮಿ ದೇಗುಲಕ್ಕೆ ಮಹಿಳೆಯರ ಪ್ರವೇಶಕ್ಕೆ ಸಂಬಂಧಿಸಿದಂತೆ ಸಲ್ಲಿಕೆಯಾಗಿರುವ ಮರುಪರಿಶೀಲನಾ ಅರ್ಜಿ ಕುರಿತು ಸುಪ್ರೀಂಕೋರ್ಟ್ ನ.14ರಂದು ತನ್ನ ತೀರ್ಮಾನ ಪ್ರಕಟಿಸಿತ್ತು. ಈ ಪ್ರಕರಣವನ್ನು ಏಳು ಸದಸ್ಯರ ಪೀಠಕ್ಕೆ ವರ್ಗಾವಣೆ ಮಾಡಿ ಸುಪ್ರೀಂಕೋರ್ಟ್ ಆದೇಶ ಹೊರಡಿಸಿತ್ತು.
ದೇಗುಲವನ್ನು 5 ವರ್ಷದಿಂದ 50 ವರ್ಷ ವಯಸ್ಸಿನವರೆಗಿನ ಮಹಿಳೆಯರು ಪ್ರವೇಶಿಸಬಾರದು ಎಂಬ ನಿಯಮವನ್ನು ಸುಪ್ರೀಂಕೋರ್ಟ್ 2018ರ ಸೆಪ್ಟೆಂಬರ್ 28ರಂದು ರದ್ದುಪಡಿಸಿತ್ತು.
ಅಂದಿನ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ, ಮತ್ತು ನ್ಯಾ.ರೋಹಿಂಟನ್ ನಾರಿಮನ್, ನ್ಯಾ.ಎ.ಎಂ.ಖಾನ್ ವಿಲ್ಕರ್, ನ್ಯಾ.ಡಿ.ವೈ.ಚಂದ್ರಚೂಡರ್ ಮತ್ತು ನ್ಯಾ.ಇಂದು ಮಲ್ಹೋತ್ರಾ ಅವರಿದ್ದ ನ್ಯಾಯಪೀಠ ಬಹುಮತದ ತೀರ್ಪು ನೀಡಿತ್ತು.