ತಿರುವನಂತಪುರಂ-ಕಾಸರಗೋಡು ರೈಲು ಯೋಜನೆ ಡಿಪಿಆರ್ ಬಿಡುಗಡೆ
ತಿರುವನಂತಪುರಂ, ಜನವರಿ 17; ಪ್ರತಿಭಟನೆ, ವಿರೋಧಗಳ ನಡುವೆಯೂ ಕೇರಳ ಸರ್ಕಾರ ತಿರುವನಂತಪುರಂ-ಕಾಸರಗೋಡು ಸೆಮಿ-ಹೈಸ್ಪೀಡ್ ರೈಲು ಯೋಜನೆ ಡಿಪಿಆರ್ ಬಿಡುಗಡೆ ಮಾಡಿದೆ. 529.45 ಕಿ. ಮೀ ಯೋಜನೆ ಇದಾಗಿದ್ದು, ಈ ಯೋಜನೆಗೆ ಭಾರೀ ವಿರೋಧವೂ ಇದೆ.
ಶನಿವಾರ ಪ್ರಸ್ತಾವಿತ ರೈಲು ಯೋಜನೆ ನಿರ್ಮಾಣ ಸಂಬಂಧ ವಿಸ್ತೃತ ಯೋಜನಾ ವರದಿ (ಡಿಪಿಆರ್)ಯನ್ನು ಕೇರಳ ಬಿಡುಗಡೆ ಮಾಡಿದೆ. ಯೋಜನಾ ವೆಚ್ಚ 63,941 ಕೋಟಿ ಆಗಿದ್ದು, 2025ರಲ್ಲಿ ಯೋಜನೆ ಪೂರ್ಣಗೊಳ್ಳಲಿದೆ ಎಂದು ಹೇಳಿದೆ.
ಕೇರಳದ ತಿರುವನಂತಪುರಂ ಲೋಕಸಭಾ ಕ್ಷೇತ್ರ ಪರಿಚಯ
ಕೇರಳ ವಿಧಾನಸಭೆ ವೆಬ್ಸೈಟ್ನಲ್ಲಿ ಡಿಪಿಆರ್ ಲಭ್ಯವಿದೆ. ಈ ಯೋಜನೆ ಪೂರ್ಣಗೊಂಡರೆ ತಿರುವನಂತಪುರಂ-ಕಾಸರಗೋಡು ನಡುವಿನ ಸಂಚಾರದ ಅವಧಿ ಈಗಿನ 12 ಗಂಟೆಗಳಿಂದ 4 ಗಂಟೆಗೆ ಇಳಿಕೆಯಾಗಲಿದೆ ಎಂದು ಡಿಪಿಆರ್ನಲ್ಲಿ ಉಲ್ಲೇಖಿಸಲಾಗಿದೆ.
ತಿರುವನಂತಪುರ-ಕಾಸರಗೋಡು ನಡುವೆ ಸೆಮಿ ಹೈಸ್ಪೀಡ್ ರೈಲು
ತಿರುವನಂತಪುರಂ-ಕಾಸರಗೋಡು ನಡುವೆ ರಸ್ತೆಯಲ್ಲಿ ಸಂಚಾರ ನಡೆಸುವುದು ಕಷ್ಟಕರವಾಗಿದೆ. ಈ ರೈಲು ಮಾರ್ಗ ರಾಜ್ಯದ ಸಾರಿಗೆ ವ್ಯವಸ್ಥೆಯಲ್ಲಿ ಬಹುದೊಡ್ಡ ಮೈಲುಗಲ್ಲು ಆಗಲಿದೆ ಎಂದು ಕೇರಳ ಸರ್ಕಾರ ಹೇಳಿದೆ. ರಾಜ್ಯದ ಆರ್ಥಿಕ ಸುಧಾರಣೆಗೆ ಈ ಸೆಮಿ-ಹೈಸ್ಪೀಡ್ ರೈಲು ಮಾರ್ಗ ಸಹಾಯಕವಾಗಲಿದೆ ಎಂದು ತಿಳಿಸಲಾಗಿದೆ.
ಫ್ಯಾಕ್ಟ್ ಚೆಕ್: ಕಾಸರಗೋಡು ಗ್ರಾಮಗಳ ಹೆಸರು ಬದಲಾಯಿಸುವ ಯೋಚನೆ ಇಲ್ಲ
ಸಿಲ್ವರ್ ಲೈನ್ ಪ್ರಾಜೆಕ್ಟ್ ಎಂದು ಸಹ ಇದಕ್ಕೆ ಹೆಸರಿಡಲಾಗಿದೆ. ತಿರುವನಂತಪುರಂ ವಿಮಾನ ನಿಲ್ದಾಣದ ಬಳಿಯಿಂದ ಆರಂಭವಾಗುವ ರೈಲು ಯೋಜನೆ 529.45 ಕಿ. ಮೀ. ಇರಲಿದೆ. ಕೊಲ್ಲಂ, ಅಪಫೂಜ, ಕೊಟ್ಟಾಯಂ, ಎರ್ನಾಕುಲಂ, ತ್ರಿಶೂರ್, ಮಲಪ್ಪುರಂ, ಕಣ್ಣೂರು ಮೂಲಕ ಸಾಗುವ ಮಾರ್ಗ ಕಾಸರಗೋಡು ತಲುಪಲಿದೆ.
ಈ ಮಾರ್ಗದಲ್ಲಿ 11 ನಿಲ್ದಾಣಗಳು ಬರಲಿವೆ. ಇವುಗಳ ಪೈಕಿ ತಿರುವನಂತಪುರಂ, ಏರ್ನಾಕುಲಂ ಮತ್ತು ತ್ರಿಶೂರ್ ನಿಲ್ದಾಣಗಳು ಭೂಮಿ ಮೇಲೆ ಇರಲಿವೆ. ಕಣ್ಣೂರು ನಿಲ್ದಾಣ ಸುರಂಗ ಮಾರ್ಗದಲ್ಲಿ ಇರಲಿದೆ ಎಂದು ಪ್ರಸ್ತಾಪಿತ ಯೋಜನೆ ವಿವರಣೆ ನೀಡಿದೆ.
ಸಿಲ್ವರ್ ಲೈನ್ ಪ್ರಾಜೆಕ್ಟ್ ಯಾವುದೇ ರಾಷ್ಟ್ರೀಯ ಉದ್ಯಾನ, ವನ್ಯಪಾಣಿಗಳ ಸಂರಕ್ಷಿತ ಪ್ರದೇಶದ ಮೂಲಕ ಹಾದು ಹೋಗುವುದಿಲ್ಲ. ರೈಲು ಮಾರ್ಗ ಜೀವವೈವಿಧ್ಯದ ತಾಣ ಪಶ್ಚಿಮ ಘಟ್ಟಗಳಿಗೆ ಸ್ವಲ್ಪಮಟ್ಟಿಗೆ ಸಮಾನಾಂತರವಾಗಿ ಸಾಗುತ್ತದೆ. ಆದ್ದರಿಂದ ಜೈವಿಕ ವೈವಿಧ್ಯತೆಗೆ ಸಂಬಂಧಿಸಿದ ಪರಿಣಾಮಗಳನ್ನು ಎಚ್ಚರಿಕೆಯಿಂದ ನಿರ್ವಹಣೆ ಮಾಡಬೇಕಿದೆ ಎಂದು ವಿವರಿಸಲಾಗಿದೆ.
ಕಾಂಗ್ರೆಸ್ ವಿರೋಧ; ವಿಸ್ತೃತ ಯೋಜನಾ ವರದಿ (ಡಿಪಿಆರ್) ಕುರಿತು ಪ್ರತಿಕ್ರಿಯೆ ನೀಡಿರುವ ಪ್ರತಿಪಕ್ಷ (ಕಾಂಗ್ರೆಸ್) ನಾಯಕ ವಿ. ಡಿ. ಸತೀಶನ್, "3,700 ಪುಟಗಳ ಡಿಪಿಆರ್ ಅಪೂರ್ಣ ಮತ್ತು ಅವೈಜ್ಞಾನಿಕ. ಯೋಜನೆಯಿಂದಾಗುವ ಸಾಮಾಜಿಕ ಮತ್ತು ಪರಿಸರ ಹಾನಿ ಬಗ್ಗೆ ವೈಜ್ಞಾನಿಕ ಅಧ್ಯಯನವೇ ಆಗಿಲ್ಲ" ಎಂದು ಆರೋಪಿಸಿದ್ದಾರೆ.
"ಯಾವುದೇ ಅಧ್ಯಯನ, ಸಮೀಕ್ಷೆ ನಡೆಸದೇ ಡಿಪಿಆರ್ ಸಿದ್ಧಗೊಳಿಸಲಾಗಿದೆ. ಯೋಜನೆಗೆ ಅಗತ್ಯವಿರುವ ಎಲ್ಲಾ ವಸ್ತುಗಳು ಕೇರಳದಲ್ಲಿಯೇ ಸಿಗುತ್ತದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಇದು ಹೇಗೆ ಸಾಧ್ಯ?" ಎಂದು ಪ್ರಶ್ನಿಸಿದ್ದಾರೆ.
ಯೋಜನಗೆ ಅಗತ್ಯವಿರುವ ಕಚ್ಚಾ ವಸ್ತುಗಳನ್ನು ಅಕ್ಕಪಕ್ಕದ ರಾಜ್ಯಗಳಿಂದ ಖರೀದಿ ಮಾಡಬಹುದಾಗಿದೆ. ಆದರೆ ಯಾವ ವಸ್ತುಗಳು ಅಗತ್ಯವಿದೆ? ಎಂದು ಹೇಳಲು ಈಗ ಸಾಧ್ಯವಿಲ್ಲ. ಅದರ ಬಗ್ಗೆ ತಿಳಿದಿದ್ದರೆ ಡಿಪಿಆರ್ನಲ್ಲಿ ಉಲ್ಲೇಖಿಸುತ್ತಿದ್ದೆವು ಎಂದು ಕೆ-ರೈಲ್ ಹೇಳಿದೆ.
2009-10ರಲ್ಲಿ ಘೋಷಣೆ; ಕೇರಳ ಸರ್ಕಾರ 2009-10ರ ರಾಜ್ಯ ಬಜೆಟ್ನಲ್ಲಿ ತಿರುವನಂತಪುರಂ-ಕಾಸರಗೋಡು ಸೆಮಿ ಹೈಸ್ಪೀಡ್ ರೈಲು ಯೋಜನೆ ಘೋಷಣೆ ಮಾಡಿತು. ಕೇರಳ ಹೈಸ್ಪೀಡ್ ರೈಲು ಕಾರ್ಪೊರೇಷನ್ ಲಿಮಿಡೆಡ್ ಸ್ಥಾಪನೆ ಮಾಡಿ ಈ ಯೋಜನೆ ಅನುಷ್ಠಾನ ಮಾಡುವುದಾಗಿ ಸರ್ಕಾರ ಹೇಳಿತ್ತು.
ದೆಹಲಿ ಮೆಟ್ರೋ ರೈಲು ನಿಗಮ ಯೋಜನೆ ಕುರಿತು ಅಧ್ಯಯನ ನಡೆಸಿ 2012ರಲ್ಲಿ ರಾಜ್ಯ ಸರ್ಕಾರಕ್ಕೆ ವರದಿ ನೀಡಿತು. ಆದರೆ ಯೋಜನೆ ಬೇರೆ ಬೇರೆ ಕಾರಣದಿಂದಾಗಿ ಜಾರಿಯಾಗಲಿಲ್ಲ. ಸರ್ಕಾರ ಕೇರಳ ಹೈಸ್ಪೀಡ್ ರೈಲು ಕಾರ್ಪೊರೇಷನ್ ಲಿಮಿಡೆಡ್ ರದ್ದುಗೊಳಿಸಿತು.
ಬಳಿಕ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಪಿಣರಾಯಿ ವಿಜಯನ್ ಸರ್ಕಾರ ತಿರುವನಂತಪುರಂ-ಕಾಸರಗೋಡು ನಡುವೆ ವಿಶೇಷ ರೈಲು ಕಾರಿಡಾರ್ ನಿರ್ಮಾಣ ಮಾಡುವುದಾಗಿ ಘೋಷಣೆ ಮಾಡಿತು. 2019-20ರ ಬಜೆಟ್ನಲ್ಲಿ ಈ ಕುರಿತು ಹಣಕಾಸು ಸಚಿವ ಟಿ. ಎಂ. ಥಾಮಸ್ ಉಲ್ಲೇಖಿಸಿದರು.
Recommended Video
ಕೇರಳ ರೈಲು ಅಭಿವೃದ್ಧಿ ಕಾರ್ಪೊರೇಷನ್ ಲಿಮಿಡೆಡ್ (ಕೆ-ರೈಲ್), ಕೇರಳ ಸರ್ಕಾರ ಮತ್ತು ರೈಲ್ವೆ ಖಾತೆ ಜಂಟಿಯಾಗಿ ಯೋಜನೆ ಜಾರಿಗೊಳಿಸುವುದಾಗಿ ಹೇಳಿತು. ಆದರೆ ಯೋಜನೆಯಿಂದ ಪರಿಸರಕ್ಕೆ ಧಕ್ಕೆ ಉಂಟಾಗುತ್ತದೆ ಎಂಬ ವಾದವಿದ್ದು, ಯೋಜನೆಗೆ ವಿರೋಧವೂ ವ್ಯಕ್ತವಾಗುತ್ತಿದೆ.