ಸಂಕ್ರಾತಿ ಸಂಭ್ರಮದ ನಡುವೆ ಭಣಗುಡುತ್ತಿದೆ ಶಬರಿಮಲೆ
ತಿರುವನಂತಪುರಂ, ಜನವರಿ 13: ಶಬರಿಮಲೆ ಸ್ವಾಮಿ ಅಯ್ಯಪ್ಪನ ಸನ್ನಿಧಿಯಲ್ಲಿ ಅತ್ಯಂತ ಮಹತ್ವದ ಗಳಿಗೆಗೆ ಕ್ಷಣಗಣನೆ ಆರಂಭವಾಗಿದೆ. ಮಕರ ಸಂಕ್ರಾಂತಿ ದಿನವಾದ ಗುರುವಾರ ಪವಿತ್ರ ಮಕರ ಜ್ಯೋತಿ ದರ್ಶನ ಹಾಗೂ ಅಯ್ಯಪ್ಪ ಸ್ವಾಮಿಯ ವಿಶೇಷ ಪೂಜೆಯ ಸಂಪ್ರದಾಯಗಳನ್ನು ಕಾಣಲು ಭಕ್ತರು ಕಾತರದಿಂದ ಕಾದಿದ್ದರು. ಆದರೆ ಈ ಬಾರಿ ಅವರ ಉತ್ಸಾಹ ಮತ್ತು ಬಯಕೆಗಳನ್ನು ಕೋವಿಡ್ 19 ಕಿತ್ತುಕೊಂಡಿದೆ.
ಪ್ರತಿ ವರ್ಷ ಮಕರ ಸಂಕ್ರಮಣ ಸಂದರ್ಭದಲ್ಲಿ ಶಬರಿಮಲೆಯ ಭಕ್ತರ ಸಂಖ್ಯೆ ಮತ್ತಷ್ಟು ಹೆಚ್ಚುತ್ತಿತ್ತು. ಆದರೆ ಈ ಬಾರಿ ಶಬರಿಮಲೆ ಭಾಗಶಃ ಭಣಗುಡುತ್ತಿದೆ. ಬೆರಳೆಣಿಕೆಯಷ್ಟು ಭಕ್ತರು ಹಾಗೂ ಪೊಲೀಸರು ಮತ್ತು ದೇವಾಲಯದ ಸಿಬ್ಬಂದಿಯ ಸಮ್ಮುಖದಲ್ಲಿ ಪೂಜೆ ಹಾಗೂ ಇತರೆ ಆಚರಣೆಗಳು ನಡೆಯುತ್ತಿವೆ.
ಶಬರಿಮಲೆ ಅಯ್ಯಪ್ಪ ಸ್ವಾಮಿ: ತಿರುವಾಭರಣಂ ಮೆರವಣಿಗೆ ಆರಂಭ
ಮಂಡಲಂ ದೇವಾಲಯದಿಂದ ಮೆರವಣಿಗೆ ಹೊರಟ ತಿರುವಾಭರಣಂ ಮೂರು ದಿನಗಳ ಬಳಿಕ ನಾಳೆ ಸಂಜೆ ಶಬರಿಮಲೆಯ ಪವಿತ್ರ ಸನ್ನಿಧಿಗೆ ತಲುಪಲಿದೆ. ಕೋವಿಡ್ ಶಿಷ್ಟಾಚಾರಗಳಿಗೆ ಅನುಗುಣವಾಗಿ ವಿಧಿ ವಿಧಾನಗಳು ಜರುಗುತ್ತಿವೆ. ಆರ್ಟಿ-ಪಿಸಿಆರ್ ಪರೀಕ್ಷೆಯಲ್ಲಿ ಕೋವಿಡ್ ನೆಗೆಟಿವ್ ಪ್ರಮಾಣಪತ್ರ ಹೊಂದಿರುವ ಭಕ್ತರಿಗೆ ಮಾತ್ರವೇ ಪ್ರವೇಶ ನೀಡಲಾಗುತ್ತಿದೆ.
ವಿಶೇಷ ಅಧಿಕಾರಿ ಅಜಿತ್ ಕುಮಾರ್ ಮೇಲ್ವಿಚಾರಣೆಯಲ್ಲಿ 15 ಸದಸ್ಯರ ದೇವಸ್ವಂ ತಂಡ ತಿರುವಾಭರಣಂ ಮೆರವಣಿಗೆ ನಿರ್ವಹಿಸುತ್ತಿದೆ. ಬುಧವಾರ ಈ ಮೆರವಣಿಗೆಯು ಬೆಳಿಗ್ಗೆ 4 ಗಂಟೆಗೆ ಅಯ್ರೂರ್ ದೇವಾಲಯದಿಂದ ಹೊರಟು ಎಡಪ್ಪವೂರ್ ದೇವಿ ದೇವಸ್ಥಾನ, ವಡಸ್ಸೆರಿಕರ ಪ್ರಯಾರ್ ಶ್ರೀ ಮಹಾವಿಷ್ಣು ದೇವಸ್ಥಾನ, ಮಡಮೊನ್ ರಿಶಿಕೆಶಾ ದೇವಸ್ಥಾನ ಮತ್ತು ರನ್ನಿ ಪೆರುನಾಡ್ ಶ್ರೀ ಧರ್ಮ ಸಸ್ಥಾ ದೇವಸ್ಥಾನಗಳನ್ನು ತಲುಪಲಿದೆ.