ಕೇರಳದ ದೇವಸ್ಥಾನದಲ್ಲಿ ಮುಂಜಾನೆ ಸುಪ್ರಭಾತದ ಬದಲಿಗೆ ಮೊಳಗುತ್ತಿದೆ ಜಾಗೃತಿ ಸಂದೇಶ
ತಿರುವನಂತಪುರಂ, ಮೇ 18: ಕೊರೊನಾವೈರಸ್ ಜನರ ಬದುಕಿನ ಶೈಲಿಯನ್ನು ಅಕ್ಷರಶಃ ಬದಲಾಯಿಸಿಬಿಟ್ಟಿದೆ. ಮಾಸ್ಕ್, ಸಾಮಾಜಿಕ ಅಂತರದಂಥ ಎಚ್ಚರಿಕಾ ಕ್ರಮಗಳು ಬಂದು ಅದಾಗಲೇ ವರ್ಷವೇ ಕಳೆದಿದೆ. ಎರಡನೇ ಅಲೆಯಲ್ಲಿ ಕೊರೊನಾವೈರಸ್ ಜನರನ್ನು ಮತ್ತಷ್ಟು ಕಂಗೆಡಿಸಿದ್ದು ಜನರ ಜಾಗೃತಿ ಮತ್ತಷ್ಟು ಹೆಚ್ಚುವ ಅನಿವಾರ್ಯತೆಯಿದೆ. ಇದಕ್ಕಾಗಿ ಕೇರಳದ ದೇವಸ್ಥಾನವೊಂದರಲ್ಲಿ ಮುಂಜಾನೆಯ ಭಕ್ತಿಗೀತೆಗಳಿಗೆ ವಿರಾಮವನ್ನು ನೀಡಲಾಗಿದೆ.
ಅರೆ, ದೇವಸ್ಥಾನದಲ್ಲಿ ಭಕ್ತಿಗೀತೆಗಳನ್ನು ನಿಲ್ಲಿಸುವುದಕ್ಕೂ ಕೊರೊನಾವೈರಸ್ಗೂ ಅದೆಲ್ಲಿಯ ಸಂಬಂಧ? ಈ ಪ್ರಶ್ನೆ ಸಹಜ. ಆದರೆ ಭಕ್ತಿಗೀತೆಯನ್ನು ನಿಲ್ಲಿಸಿ ದೇವಸ್ಥಾನದ ಆಡಳಿತ ಮಂಡಳಿ ಸುಮ್ಮನೆ ಕುಳಿತಿಲ್ಲ. ಬದಲಿಗೆ ಆ ಸಮಯದಲ್ಲಿ ಕೊರೊನಾವೈರಸ್ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಸಂದೇಶವನ್ನು ಧ್ವನಿವರ್ಧಕದ ಮೂಲಕ ನೀಡಲಾಗುತ್ತಿದೆ.
ಶತಮಾನಗಳಷ್ಟು ಹಳೆಯ ಇತಿಹಾಸವನ್ನು ಹೊಂದಿರುವ ಕಾಸರಗೋಡು ಜಿಲ್ಲೆಯ ತುರುತಿಯಲ್ಲಿರುವ ನೀಲಮಂಗಳತು ಭಗವತಿ ದೇವಸ್ಥಾನದಲ್ಲಿ ಕಳೆದೊಂದು ವಾರದಿಂದ ಮುಂಜಾನೆಯ ಸುಪ್ರಭಾತ ವಿಭಿನ್ನವಾಗಿದೆ. ಮುಂಜಾನೆ ನಾಲ್ಕು ಗಂಟೆಯಿಂದ ಒಂದು ಗಂಟೆಗಳ ಕಾಲ ಭಕ್ತಿಗೀತೆಗಳನ್ನು ನಿಲ್ಲಿಸಲಾಗಿದ್ದು ಕೊರೊನಾ ಜಾಗೃತಿ ಸಂದೇಶಗಳನ್ನು ಬಿತ್ತರಿಸಲಾಗುತ್ತಿದೆ.
ಸ್ಥಳೀಯ ತಿಯಾ ಸಮುದಾಯದ ಧಾರ್ಮಿಕ ಸ್ಥಳವಾಗಿರುವ ಈ ದೇವಸ್ಥಾನದಲ್ಲಿ ಮುಂಜಾನೆ ನಾಲ್ಕು ಗಂಟೆಯಿಂದ ಐದು ಗಂಟೆಯವರೆಗೆ ಕೊರೊನಾವೈರಸ್ ಬಗ್ಗೆ ಮುನ್ನೆಚ್ಚರಿಕೆ, ನಿಯಂತ್ರಣ ಮಾರ್ಗಸೂಚಿಗಳ ಜೊತೆಗೆ ಸ್ಥಳೀಯ ಜನರು ಅನಗತ್ಯವಾಗಿ ಓಡಾಡದಂತೆ, ಮಕ್ಕಳನ್ನು ಹೊರಗಡೆ ಕಳುಹಿಸದಂತೆ ಹುಟ್ಟುಹಬ್ಬ ಮುಂತಾದ ಕಾರ್ಯಕ್ರಮಗಳನ್ನು ಆಯೋಜಿಸದಂತೆ ಮುನ್ನೆಚ್ಚರಿಕೆಯ ಸಂದೇಶಗಳನ್ನು ನೀಡಲಾಗುತ್ತಿದೆ.
"ಇದು ನಮ್ಮ ಸಾಮಾಜಿಕ ಜವಾಬ್ದಾರಿ. ಈಗ ಅಗತ್ಯವಿರುವುದು ಈ ವೈರಸ್ ಬಗ್ಗೆ ಮಾಹಿತಿ. ಭಯವಲ್ಲ" ಎಂದು ಈ ಸಂದೇಶದಲ್ಲಿ ವಿವರಿಸಲಾಗಿದೆ. ಎಂಟು ನಿಮಿಷಗಳಿರುವ ಈ ಧ್ವನಿ ಸಂದೇಶವನ್ನು ಸಂಜೆ 5 ಗಂಟೆಗೂ ಒಂದು ಗಂಟೆಗಳ ಕಾಲ ಬಿತ್ತರಿಸಲಾಗುತ್ತಿದೆ.
ಇನ್ನು ಈ ದೇವಸ್ಥಾನದಲ್ಲಿ ತೆಗೆದುಕೊಂಡಿರುವ ಈ ಕ್ರಮದ ಬಗ್ಗೆ ಸ್ಥಳೀಯರು ಕೂಡ ಭಾರೀ ಮೆಚ್ಚುಗೆ ಹಾಗೂ ಬೆಂಬಲವನ್ನು ವ್ಯಕ್ತಪಡಿಸುತ್ತಿದ್ದಾರೆ. ಅಜಿತಾ ಎಂಬ ಸ್ಥಳೀಯ ಮಹಿಳೆ "ಈಗ ನಾವಿರುವ ಸಂದರ್ಭದಲ್ಲಿ ಭಕ್ತಿಗೀತೆಗಳಿಗಿಂತ ಈ ಸಂದೇಶ ಬಹಳ ಮುಖ್ಯ ಎಂದು ಭಾವಿಸುತ್ತೇನೆ" ಎಂದಿದ್ದಾರೆ.