ಶಬರಿಮಲೆ ದೇಗುಲ ಹೊಸ ವಿವಾದ : ಭಕ್ತರು ನೀಡಿದ್ದ ಹರಕೆ ಚಿನ್ನ ನಾಪತ್ತೆ
ಕೊಚ್ಚಿ, ಮೇ 27: ಶಬರಿಮಲೆ ಸ್ವಾಮಿ ಅಯ್ಯಪ್ಪ ದೇಗುಲವನ್ನು ನಿಯಂತ್ರಿಸುವ ತಿರುವಾಂಕೂರು ದೇವಸ್ವಂ ಮಂಡಳಿ(ಟಿಡಿಬಿ) ಮತ್ತೊಮ್ಮೆ ವಿವಾದ, ಹಗರಣದ ಸುಳಿಯಲ್ಲಿ ಸಿಲುಕಿದೆ. ಭಕ್ತರು ದೇಗುಲಕ್ಕೆ ಹರಕೆ, ಕಾಣಿಕೆ ನೀಡಿದ್ದ ಚಿನ್ನ, ಬೆಳ್ಳಿ ಎಲ್ಲವೂ ಮಾಯವಾಗಿದ್ದು, ಸರಿಯಾದ ಲೆಕ್ಕ ನೀಡುವಲ್ಲಿ ಟಿಡಿಬಿ ವಿಫಲವಾಗಿದೆ.
ಶಬರಿಮಲೆ ದೇಗುಲದ ಕಾಣಿಕೆಯ ಮೊತ್ತವನ್ನು ಪರಿಶೀಲಿಸುವಂತೆ ಲೆಕ್ಕ ಪರಿಶೋಧನೆ ನಡೆಸುವಂತೆ ಕೇರಳ ಹೈಕೋರ್ಟ್ ಆದೇಶಿಸಿದೆ.ಈ ಹಿನ್ನೆಲೆಯಲ್ಲಿ ಟಿಡಿಬಿ ದಾಖಲೆಗಳ ಪರಿಶೀಲನೆ ನಡೆಸಿದ 40 ಕೆಜಿ ಚಿನ್ನ, 100 ಬೆಳ್ಳಿ ಕಾಣಿಕೆ ಬಗ್ಗೆ ಎಲ್ಲೂ ಉಲ್ಲೇಖ ಇಲ್ಲದಿರುವುದು ಕಂಡು ಬಂದಿದೆ.
ಶಬರಿಮಲೆ ವಿವಾದ ರಾಜಕೀಯ ಬಳಕೆಗಿಲ್ಲ: ಚುನಾವಣಾ ಆಯೋಗ
ದೇಗುಲದ 4ಎ ರಿಜಿಸ್ಟ್ರಾರ್ ಪುಸ್ತಕ, ದಾಖಲೆಗಳಲ್ಲಿ ಅಪಾರ ಪ್ರಮಾಣದ ವ್ಯತ್ಯಾಸ ಕಂಡುಬರುತ್ತಿದ್ದು ಈ ಬಗ್ಗೆ ಪರಿಶೀಲಿಸಲು ಅಧಿಕಾರಿಗಳು ಮುಂದಾಗಿದ್ದಾರೆ. ಅರಂಮುಲ ಎಂಬಲ್ಲಿರುವ ದೇಗುಲದ ಖಜಾನೆ ಕೊಠಡಿಯಲ್ಲಿ ಎಲ್ಲವೂ ಇದೆ, ಚಿನ್ನ, ಬೆಳ್ಳಿ ನಾಪತ್ತೆಯಾಗಿಲ್ಲ ಎಂದು ದೇವಸ್ವಂ ಮಂಡಳಿ ಪ್ರತಿಕ್ರಿಯಿಸಿದೆ.
ಟಿಡಿಬಿಯ ಮಾಜಿ ಸಿಬ್ಬಂದಿಯೊಬ್ಬನ ಕೃತ್ಯ ಇದಾಗಿದ್ದು, ಚಿನ್ನ, ಬೆಳ್ಳಿ ನಾಪತ್ತೆಯಾಗಿದೆ ಎಂದು ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾನೆ ಎಂದು ಟಿಡಿಬಿ ಅಧ್ಯಕ್ಷ ಎ ಪದ್ಮಕುಮಾರ್ ಹೇಳಿದ್ದಾರೆ.
ಚಿನ್ನ-ಬೆಳ್ಳಿ ನಾಪತ್ತೆಯಾಗಿದೆ ಎಂಬ ಆರೋಪ ಕುರಿತು ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ. ಈ ಬಗ್ಗೆ ಯಾವುದೇ ಲೋಪ ದೋಷ ಕಂಡು ಬಂದಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ದೇವಸ್ವಂ ಸಚಿವ ಕಡಕಂಪಲ್ಲಿ ಸುರೇಂದ್ರನ್ ಪ್ರತಿಕ್ರಿಯಿಸಿದ್ದಾರೆ.