ಚಿನ್ನ ಸಾಗಣೆ ಪ್ರಕರಣ; ಜಾಮೀನಿಗಾಗಿ ಸ್ವಪ್ನಾ ಸುರೇಶ್ ಅರ್ಜಿ
ತಿರುವನಂತಪುರಂ, ಜುಲೈ 09 : ಕೇರಳದಲ್ಲಿ ಸಂಚಲನ ಮೂಡಿಸಿರುವ ಚಿನ್ನ ಸಾಗಣೆ ಪ್ರಕರಣದ ಆರೋಪಿ ಸ್ವಪ್ನಾ ಸುರೇಶ್ ನಿರೀಕ್ಷಣಾ ಜಾಮೀನಿಗಾಗಿ ನ್ಯಾಯಾಲಯದ ಮೊರೆ ಹೋಗಿದ್ದಾರೆ. ವಿಮಾನ ನಿಲ್ದಾಣದಲ್ಲಿ 30 ಕೆಜಿ ಚಿನ್ನ ಸಿಕ್ಕ ಪ್ರಕರಣ ಭಾರೀ ಚರ್ಚೆಗೆ ಕಾರಣವಾಗಿದೆ.
ಸೋಮವಾರ ಚಿನ್ನ ಸಾಗಣೆ ಪ್ರಕರಣದಲ್ಲಿ ಹೆಸರು ಕೇಳಿ ಬಂದ ಬಳಿಕ ಸ್ವಪ್ನಾ ಸುರೇಶ್ ನಾಪತ್ತೆಯಾಗಿದ್ದಾರೆ. ಕಸ್ಟಮ್ ಅಧಿಕಾರಿಗಳು ಇನ್ನೂ ಅವರ ವಿಚಾರಣೆ ನಡೆಸಬೇಕಿದೆ. ಆದರೆ, ವಕೀಲರ ಮೂಲಕ ಅವರು ನಿರೀಕ್ಷಣಾ ಜಾಮೀನು ಪಡೆಯಲು ಪ್ರಯತ್ನ ನಡೆಸಿದ್ದಾರೆ.
30 ಕೆಜಿ ಚಿನ್ನದ ಸ್ಮಗ್ಲರ್ ಸ್ವಪ್ನಾಗೂ ಸಿಎಂ ಕಚೇರಿಗೂ ಏನಿದು ನಂಟು?
ಈ ಪ್ರಕರಣದಲ್ಲಿ ನನ್ನ ಯಾವುದೇ ಪಾತ್ರವಿಲ್ಲ. ಕಸ್ಟಮ್ಸ್ ಇಲಾಖೆಯ ಸಹಾಯಕ ಆಯುಕ್ತರಿಗೆ ತಿರುವನಂತಪುರದಲ್ಲಿರುವ ಯುಎಇ ರಾಯಭಾರ ಕಚೇರಿ ಅಧಿಕಾರಿಯ ಸೂಚನೆಯಂತೆ ಕರೆ ಮಾಡಿದ್ದೆ ಎಂದು ನಿರೀಕ್ಷಣಾ ಜಾಮೀನು ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ.
ಸ್ವಪ್ನಾ ಸುರೇಶ್ ತಿರುವನಂತಪುರದ ಯುಎಇ ರಾಯಭಾರ ಕಚೇರಿಯಲ್ಲಿ ಉದ್ಯೋಗಿಯಾಗಿದ್ದರು. ಕೊಲ್ಲಿ ರಾಷ್ಟ್ರಗಳಿಂದ ಅಕ್ರಮವಾಗಿ ಚಿನ್ನವನ್ನು ಸಾಗಣೆ ಮಾಡುವ ಜಾಲದಲ್ಲಿ ಅವರ ಪಾತ್ರವೂ ಇದೆ ಎಂದು ಕಸ್ಟಮ್ಸ್ ಅಧಿಕಾರಿಗಳು ಶಂಕಿಸಿದ್ದಾರೆ.
ರಾಯಭಾರ ಕಚೇರಿಯ ಉದ್ಯೋಗದ ಬಳಿಕ ಸ್ವಪ್ನಾ ಅವರನ್ನು ಕೇರಳದ ಮಾಹಿತಿ ತಂತ್ರಜ್ಞಾನ ಮೂಲ ಸೌಕರ್ಯ ಅಭಿವೃದ್ಧಿ ನಿಗಮದ ನಿರ್ವಹಣಾ ಅಧಿಕಾರಿಯಾಗಿ ನೇಮಿಸಲಾಗಿತ್ತು. ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಜೊತೆ ಸ್ವಪ್ನಾ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡ ಫೋಟೋಗಳು ವೈರಲ್ ಆಗಿವೆ.
ಸ್ಮಗಲಿಂಗ್ ಕೇಸ್: ತನಿಖೆಗೆ ಸಿದ್ಧ, ಪಿಎಂ ಮೋದಿಗೆ ಪಿಣರಾಯಿ ಪತ್ರ
ಸೋಮವಾರ 14.82 ಕೋಟಿ ರೂ. ಮೌಲ್ಯದ ಚಿನ್ನ ಸಾಗಣೆ ಪ್ರಕರಣದಲ್ಲಿ ಸ್ವಪ್ನಾ ಹೆಸರು ಕೇಳಿ ಬರುತ್ತಿದ್ದಂತೆ ಅವರನ್ನು ಸೇವೆಯಿಂದ ಅಮಾನತು ಮಾಡಲಾಗಿದೆ. ಅಂದಿನಿಂದಲೇ ಅವರು ನಾಪತ್ತೆಯಾಗಿದ್ದಾರೆ.