ವಿಸ್ಮಯ ಸಾವು: ಎಚ್ಚೆತ್ತುಕೊಂಡ ಸರ್ಕಾರ, ಸಹಾಯವಾಣಿಗೆ ಚಾಲನೆ
ತಿರುವನಂತಪುರಂ, ಜೂನ್ 23: ಕೇರಳದಲ್ಲಿ ಭಾರಿ ಸಂಚಲನ ಮೂಡಿಸಿದ ವಿಸ್ಮಯ ಸಾವು ಪ್ರಕರಣದ ನಂತರ ಪಿಣರಾಯಿ ವಿಜಯನ್ ಸರ್ಕಾರ ಎಚ್ಚೆತ್ತುಕೊಂಡಿದೆ. ವರದಕ್ಷಿಣೆ ಕಿರುಕುಳಕ್ಕೆ ಯುವ ಗೃಹಿಣಿ ಬಲಿಯಾಗಿರುವ ಶಂಕೆ ವ್ಯಕ್ತವಾಗಿದ್ದು, ಆರೋಪಿ ಸರ್ಕಾರಿ ನೌಕರನಿಗೆ ತಕ್ಕಶಿಕ್ಷೆಯಾಗಬೇಕು ಎಂದು ಸಾರ್ವಜನಿಕರಿಂದ ಬಂದ ಆಕ್ರೋಶದ ಮನವಿಗೆ ಕೇರಳ ಸರ್ಕಾರ ಸ್ಪಂದಿಸಿದೆ. ವಿಸ್ಮಯ ಪತಿ ಕಿರಣ್ ಬಂಧನವಾಗಿದೆ, ತನಿಖೆ ಜಾರಿಯಲ್ಲಿದೆ. ಈ ಬಗ್ಗೆ ಇಂಥ ದುರಂತಗಳು ಸಂಭವಿಸದಂತೆ ಎಚ್ಚರಿಕೆ ವಹಿಸುವಂತೆ ಸಿಎಂ ಕರೆ ನೀಡಿದ್ದಾರೆ.
ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ವರದಕ್ಷಿಣೆ ಕಿರುಕುಳ ಸಾವು ಪ್ರಕರಣಗಳ ಬಗ್ಗೆ ಮಾತನಾಡಿ, ''ಪಥನಂತಿಟ್ಟ ಜಿಲ್ಲಾ ಪೊಲೀಸ್ ವರಿಷ್ಠರಾದ ಆರ್ ನಿಶಾಂತಿನಿರನ್ನು ನೋಡಲ್ ಅಧಿಕಾರಿಯನ್ನಾಗಿ ನೇಮಿಸಲಾಗಿದೆ. ವರದಕ್ಷಿಣೆ ಕಿರುಕುಳ ಸಂಬಂಧಿಸಿದ ದೂರುಗಳನ್ನು ನೇರವಾಗಿ ಅವರೊಂದಿಗೆ ಹಂಚಿಕೊಳ್ಳಬಹುದು, 9497999955 ಸಂಖ್ಯೆ ಚಾಲನೆಗೊಳ್ಳಲಿದ್ದು, ಮಹಿಳಾ ಎಸ್ಐಯೊಬ್ಬರು ನಿಶಾಂತಿನಿಗೆ ನೆರವು ನೀಡಲಿದ್ದಾರೆ. ಯಾವುದೇ ವಯೋಮಾನದವರು ಕಿರುಕುಳ ಬಗ್ಗೆ ದೂರು ನೀಡಿದರೆ ತಕ್ಷಣವೇ ಆ ಬಗ್ಗೆ ಗಮನ ಹರಿಸಬೇಕು ಎಂದು ಜಿಲ್ಲಾ ಪೊಲೀಸರಿಗೆ ಸೂಚನೆ ನೀಡಲಾಗಿದೆ'' ಎಂದರು.
ಕೇರಳಿಗರು ಬೆಚ್ಚುವಂತೆ ಮಾಡಿದ ವಿಸ್ಮಯ ಆತ್ಮಹತ್ಯೆ ಪ್ರಕರಣ ಅಪ್ಡೇಟ್ಸ್
''ಮಹಿಳೆಯರ ಮೇಲೆ ದೌರ್ಜನ್ಯ ಮೆರೆಯುವುದೇ ಪುರುಷತ್ವದ ಲಕ್ಷಣ ಎಂಬಂತೆ ವರ್ತಿಸುವ ಸಮಾಜ ನಮ್ಮದಲ್ಲ, ಇಂಥ ಕ್ರೂರ ಘಟನೆಗಳು ಕಂಡು ಬಂದರೆ ತಕ್ಷಣವೇ ಸೂಕ್ತ ಕ್ರಮ ಜರುಗಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಶಾಲಾ, ಕಾಲೇಜು ಪಠ್ಯಕ್ರಮಗಳನ್ನು ಈ ಬಗ್ಗೆ ಜಾಗೃತಿ ಮೂಡಿಸುವ ಪಾಠ, ಸಂದೇಶ ಸೇರಿಸಲು ಸರ್ಕಾರ ಮುಂದಾಗಿದೆ. ಮದುವೆ ಎನ್ನುವುದು ಸ್ಟೇಟಸ್, ಮಾರುಕಟ್ಟೆ ಮೌಲ್ಯ, ವ್ಯಾಪಾರದ ವಿಷಯ ವಸ್ತುವಲ್ಲ, ಕೌಟುಂಬಿಕ ಮೌಲ್ಯಕ್ಕೆ ಬೆಲೆ ಕೊಟ್ಟು ಸಂಸಾರ ನಡೆಸುವವರಿಗೆ ನಿಮ್ಮ ಮಕ್ಕಳನ್ನು ಮದುವೆ ಮಾಡಿಕೊಡಿ, ಸರಕುಗಳಂತೆ ವ್ಯಾಪಾರ ಮಾಡಬೇಡಿ,'' ಎಂದು ಸಿಎಂ ವಿಜಯನ್ ಎಚ್ಚರಿಕೆ ಮಾತಗಳನ್ನಾಡಿದ್ದಾರೆ.
ಪಂಡಾಲಂನ ಮನ್ನಂ ಆಯುರ್ವೇದ ಮೆಡಿಕಲ್ ಕಾಲೇಜಿನ ನಾಲ್ಕನೇ ವರ್ಷ ಬಿಎಎಂಎಸ್ ವಿದ್ಯಾರ್ಥಿನಿ ವಿಸ್ಮಯ(24) ತನ್ನ ಪತಿ ಕಿರಣ್ ನೀಡುತ್ತಿದ್ದ ವರದಕ್ಷಿಣೆಗಾಗಿ ಕಿರುಕುಳ ಸಹಿಸದೆ ಆತ್ಮಹತ್ಯೆ ಮಾಡಿಕೊಂಡಿದ್ದಳು. ಬಂಧಿತ ಕಿರಣ್ ಕುಮಾರ್ ಎರಡು ವಾರಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿ ಸಾಸ್ಥಂಕೊಟ್ಟ ಮ್ಯಾಜಿಸ್ಟ್ರೇಟ್ ಕೋರ್ಟ್ ಆದೇಶ ನೀಡಿದೆ. ಕೊಟ್ಟರಕ್ಕರ ಸಬ್ ಜೈಲಿನಲ್ಲಿರಿಸಲಾಗುತ್ತದೆ ಎಂದು ತಿಳಿದು ಬಂದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಲ್ಲಂ ಪೊಲೀಸರಲ್ಲದೆ, ರಾಜ್ಯ ಮಹಿಳಾ ಆಯೋಗ ಕೂಡಾ ಸುಮೋಟೋ ಕೇಸ್ ದಾಖಲಿಸಿಕೊಂಡಿದೆ.
Note: The all-India helpline for women in distress is 1091. ರಾಜ್ಯವಾರು ಸಹಾಯವಾಣಿ ಸಂಖ್ಯೆಗಳ ವಿವರ ಇಲ್ಲಿದೆ (https://indianhelpline.com/WOMEN-HELPLINE/)